Anna bhagya scheme: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಸಚಿವ ಡಿ.ಸುಧಾಕರ್
ಚಿತ್ರದುರ್ಗ, ಜೂನ್, 20: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಕ್ಕಿ ಸಮರ ಜೋರಾಗಿ ಕೇಳಿಬರುತ್ತಿದೆ. ಹಾಗೆಯೇ ಉಚಿತ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಕ್ಕೂಟದ ವ್ಯವಸ್ಥೆ ಧಿಕ್ಕರಿಸಿ ಹಸಿರು ನೀಡಲು ಕೇಂದ್ರ ಸರ್ಕಾರ ನಿರಾಕರಣೆ ಮಾಡಿದೆ. ಅಷ್ಟ ಅಲ್ಲದೆ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ
ಮೊದಲಿಗೆ ಅಕ್ಕಿ ಕೊಡುತ್ತವೆ ಎಂದು ಹೇಳಿ, ಈಗ ಕೊಡುವುದಿಲ್ಲ ಎಂದು ನಿರಾಕರಣೆ ಮಾಡುತ್ತಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರವು ಬಡವರ ಸೇವೆಗೆ ಅಡ್ಡಗಾಲು ಹಾಕಿದೆ. ಹಾಗೆಯೇ ಕೇಂದ್ರದಲ್ಲಿ ಅಕ್ಕಿ ಸಂಗ್ರಹವಿದ್ದರೂ ರಾಜ್ಯಕ್ಕೆ ನೀಡದೆ ಅನ್ಯಾಯ ಮಾಡುತ್ತಿದ್ದರೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.
ನಾವು ಪಗಸಟ್ಟೆ ಅಕ್ಕಿ ಕೇಳಿಲ್ಲ
"ನಾವು ಪುಗಸಟ್ಟೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿಲ್ಲ, ಬದಲಿಗೆ ದುಡ್ಡು ಕೊಡುತ್ತೇವೆ ಮುಚ್ಕೊಂಡು ಅಕ್ಕಿ ಕೊಡಬೇಕು," ಎಂದು ಮಾಜಿ ಸಚಿವ ಹೆಚ್. ಆಂಜನೇಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಕೇಂದ್ರ ಬಿಜೆಪಿ ಸರ್ಕಾರ ಬಡವರ ಪರವಾಗಿಲ್ಲ, ಬದಲಿಗೆ ಶ್ರೀಮಂತರ ಪರವಾಗಿದೆ. ಕಾಳ ಸಂತೆಕೋರರು, ಬ್ಯಾಂಕ್ ಲೂಟಿಕೋರರ ಪರವಾಗಿ, ಅಂಬಾನಿ, ಅದಾನಿ ಪರವಾಗಿ ಮೋದಿ ನಿಂತಿದ್ದಾರೆ ಎಂದು ಆರೋಪಿಸಿದರು.
ಫುಡ್ ಸೆಕ್ಯೂರಿಟಿ ಆಕ್ಟ್ ತಂದಿದ್ದು ಮನಮೋಹನ್ ಸಿಂಗ್
ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ನೀಡುತ್ತಿಲ್ಲ. ಹಾಗೆಯೇ ಈ ಫುಡ್ ಸೆಕ್ಯೂರಿಟಿ ಆಕ್ಟ್ ತಂದಿದ್ದು ನಮ್ಮ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಎಂದು ಆಂಜನೇಯ ತಿಳಿಸಿದರು.
ಸರ್ವರ್ ಸಮಸ್ಯೆ
ಮತ್ತೊಂದೆಡೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಚಾಲನೆ ನೀಡಲಾಗಿದೆ. ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ನಿಗದಿ ಮಾಡಿದ ಕೌಂಟರ್ಗಳಲ್ಲಿ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನತೆ ಸರ್ಕಾರ ಘೋಷಿಸಿರುವ ಉಚಿತ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ತಾ ಮುಂದು ನಾ ಮುಂದು ಎಂದು ಜನರು ಕೈಯಲ್ಲಿ ದಾಖಲೆಗಳನ್ನು ಹಿಡಿದು ಮುನ್ನುಗ್ಗುತ್ತಿದ್ದಾರೆ.
ಚಿತ್ರದುರ್ಗ ನಗರದ ವಿವಿಧೆಡೆ ಸಾರ್ವಜನಿಕರ ಅನುಕೂಲಕ್ಕೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ಅರ್ಜಿ ಸಲ್ಲಿಕೆಗೆ ಇಲಾಖೆ ಕೌಂಟರ್ಗಳನ್ನು ಪ್ರಾರಂಭಿಸಿದೆ. ಆದರೆ ಇಲ್ಲಿ ಸರಿಯಾಗಿ ಸರ್ವರ್ ವರ್ಕ್ ಆಗದೇ, ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ದಿನಗಳಿಂದ ಅರ್ಜಿ ಸಲ್ಲಿಕೆ ಕಾರ್ಯ ಪ್ರಾರಂಭವಾಗಿದೆ. ಆದರೆ ಇದುವರೆಗೂ ಒಂದು ಅರ್ಜಿ ಕೂಡ ಸಲ್ಲಿಕೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರಿಂದ ಅರ್ಜಿ ಸಲ್ಲಿಕೆಗೆ ಬಂದಿದ್ದ ಜನ ಕೌಂಟರ್ ಸುತ್ತ ಸುಡು ಬಿಸಿಲಲ್ಲೇ ಕುಳಿತುಕೊಳ್ಳಬೇಕಾಗಿತ್ತು. ಅನುಕೂಲ ಮಾಡುತ್ತೇವೆ ಅಂತಾ ನಮ್ಮನ್ನು ಸರ್ಕಾರ ಪರದಾಡುವಂತೆ ಮಾಡುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications