ಕೋಟೆನಾಡಿನ ಕನಸು ನನಸು: ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್
ಚಿತ್ರದುರ್ಗ, ಜೂನ್ 21: ಜಿಲ್ಲೆಯ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರವಾಗಿದ್ದು, ಕಾಲೇಜು ಪ್ರಾರಂಭಕ್ಕೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ನಲ್ಲಿ ಹಸಿರು ನಿಶಾನೆ ದೊರೆತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಲೇಜಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ದಾಖಲಾತಿ ಪ್ರಾರಂಭಿಸಲು ತಿಳಿಸಿದೆ. ಇನ್ನು ಎರಡುವರೂ ತಿಂಗಳಲ್ಲೇ ಅಂಡರ್ ಟೇಕ್ ನೀಡಲು ಹೇಳಿದ್ದು, ಅದಕ್ಕೆ ಅಗತ್ಯ ಮೂಲಸೌಕರ್ಯ ನೀಡುವಂತೆ ಆದೇಶ ಬಂದಿದೆ ಎಂದು ಸಚಿವರು ತಿಳಿಸಿದರು.

ಇನ್ನು ಜಿಲ್ಲೆಯಲ್ಲಿ ತುರ್ತಾಗಿ ಮೆಡಿಕಲ್ ಕಾಲೇಜಿಗೆ ಸ್ಥಳ ಗುರುತಿಸಿ ಅಡ್ಮಿಶನ್ ಪ್ರಾರಂಭ ಮಾಡಬೇಕಿದೆ. ಎಲ್ಲಾ ಮೂಲ ಸೌಕರ್ಯಗಳನ್ನು ನೀಡಲು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಆದೇಶವಿದ್ದು, ಜಿಲ್ಲೆಯ ಜನರ ಕನಸಿನಂತೆ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅನುಮತಿ ಸಿಕ್ಕಿದೆ ಎಂದರು.
ಕರ್ನಾಟಕದ ಗಂಗಾಧರಯ್ಯ ಅಲ್ಲಿ ಇರೋದ್ರಿಂದ ಇಂಡಿಯನ್ ಮೆಡಿಕಲ್ ಕಮೀಶನ್ ಅನುಮತಿ ಸಿಕ್ಕಿದೆ. ಈ ಕುರಿತು ಜಿ.ಆರ್ ಹಳ್ಳಿಯಲ್ಲಿ ಸಭೆ ನಡೆಸಲಾಗಿದೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರೊಂದಿಗೂ ಸಭೆ ಮಾಡಿ ಮಾತುಕತೆ ನಡೆಸಿದೆ. ಖಾಸಗಿ ಕಾಲೇಜಿನಲ್ಲಿ ಪ್ರಾರಂಭ ಮಾಡಲು ಯೋಚನೆ ಮಾಡಲಾಯಿತು. ಆದರೆ ಕಾನೂನಿನ ಪ್ರಕಾರ ಅದಕ್ಕೆ ಅವಕಾಶ ಇಲ್ಲ. ಹಾಗಾಗಿ ಹೆಚ್ಚುವರಿ ಕೊಠಡಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗುವುದು. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಎಲ್ಲಾ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಕಾಲೇಜು ನಿರ್ಮಾಣಕ್ಕೆ ಜಾಗ ಇನ್ನೂ ಅಂತಿಮ ಆಗಿಲ್ಲ, ಅಲ್ಲಿ ಬೆಟ್ಟ ಇದೆ. ತೆಗೆಯೋಕೆ ಡೈರೆಕ್ಷನ್ ಕೊಡಲಾಗಿದೆ. ಜಿಯಾಲಜಿ ಇಲಾಖೆಗೆ ಮಣ್ಣು ಪರೀಕ್ಷೆ ವರದಿ ಕೊಡುವಂತೆ ತಿಳಿಸಲಾಗಿದೆ. ಅಲ್ಲಿ 57 ಅಡಿ ಜಮೀನು ಮಂಜೂರಾತಿಗೆ ಅವಕಾಶ ಇಲ್ಲ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಇನ್ನು ಜಾಲಿಕಟ್ಟೆಯಲ್ಲಿ 40 ಎಕರೆ ಮೂಲ ದಾಖಲೆ ಜಮೀನು ದಾನ ಕೊಟ್ಟಿದ್ದು, ಗ್ರಾಮದವರೆಲ್ಲ ಒಪ್ಪಿದರೆ ಅಲ್ಲೇ ಮೆಡಿಕಲ್ ಕಾಲೇಜು ಮಾಡಬಹುದು. ಗ್ರಾಮದ ಜನ ಯೋಚನೆ ಮಾಡಿದ್ರೆ ಒಳ್ಳೆಯದಾಗುತ್ತೆ. ಮತ್ತೊಂದು ಕಡೆ ಚಿಕ್ಕಪುರದಲ್ಲೂ 40 ಎಕರೆ ಜಾಗ ಇದೆ. ಎರಡೂ ಕಡೆ ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಈಗಾಗಲೇ ನಮ್ಮ ಬಳಿ 25 ಕೋಟಿ ಹಣ ಇದೆ. ಮೊದಲು ಕಟ್ಟಡ ಆಗಿ ಕಾಲೇಜು ಪ್ರಾರಂಭಿಸೋಣ ಬಳಿಕ ಅಗತ್ಯ ಸೌಕರ್ಯಗಳ ಕುರಿತು ಚರ್ಚೆ ಮಾಡೋಣ ಎಂದು ಎ.ನಾರಾಯಣಸ್ವಾಮಿ ವಿವರವಾಗಿ ತಿಳಿಸಿದರು.












Click it and Unblock the Notifications