ತೇಜಸ್ವಿ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೈಎಸ್ವಿ ದತ್ತ
ಚಿಕ್ಕಮಗಳೂರು, ಜನವರಿ 18: ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ತೇಜಸ್ವಿ ಓದು ಮತ್ತು ಮನೆಮನೆಗೆ ತೇಜಸ್ವಿ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ, ಮೇಷ್ಟ್ರು ವೈಎಸ್ವಿ ದತ್ತ ಅವರು ಪಾಲ್ಗೊಂಡಿದ್ದರು.
ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ತೇಜಸ್ವಿ ಓದು-ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸರಣಿಯ ಮೂರನೇ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ಜಿಲ್ಲೆಯ ನೆಚ್ಚಿನ ರಾಜಕಾರಣಿ ವೈಎಸ್ವಿ ದತ್ತ ಮಾತನಾಡಿ, ಪರಿಸರದ ಕುರಿತು ವ್ಯಾಪಕವಾದಂತಹ ಪ್ರಯೋಗಗಳನ್ನು ಮಾಡಿ ಪರಿಸರದಿಂದ ಕ್ರೀಯಾಶೀಲತೆಯನ್ನು ಕಂಡುಕೊಂಡವರು ತೇಜಸ್ವಿ ಎಂದರು.
ಪರಿಸರವನ್ನು ಧ್ಯಾನಸ್ಥ ಅವಸ್ಥೆ ಎಂದು ಭಾವಿಸಿದವರು, ಪರಿಸರದ ಮೇಲೆ ವಿಮರ್ಶೆ ವಿಶ್ಲೇಷಾತ್ಮಕವಾದ ಬರಹಗಳನ್ನು ಬರೆದವರು ತೇಜಸ್ವಿ. ತೇಜಸ್ವಿ ಅವರ ಹೊಸ ವಿಚಾರಗಳು ಕೃತಿಯಲ್ಲಿ ಪ್ರಸ್ತುತ ಕಾಡುತ್ತಿರುವ ಜಟಿಲವಾದ ಸಂಕೀರ್ಣವಾದ ಸಮಸ್ಯೆಗಳ ಬಗ್ಗೆ ಸರಳವಾದಂತಹ ಸ್ಪಷ್ಟವಾದಂತಹ ಮಾಹಿತಿ ಹಾಗೂ ಪರಿಹಾರವನ್ನು ಕೊಡುವಂತಹ ರೀತಿಯಲ್ಲಿ ಲೇಖನಗಳನ್ನು ಬರೆದಿದ್ದಾರೆ ಎಂದರು.

ಹೊಸ ವಿಚಾರಗಳು ಕೃತಿಯಲ್ಲಿ ಅರ್ಥಶಾಸ್ತ್ರ, ರಾಜಕೀಯ, ಭಾಷೆ ಮತ್ತು ಸಾಹಿತ್ಯ ವಿಮರ್ಶೆ, ರೈತ ಹೋರಾಟ, ಧರ್ಮ,ಸಂಸ್ಕೃತಿ, ಪರಿಸರ ಕಾಳಜಿ ಮುಂತಾದ ಕ್ಷೇತ್ರಗಳ ವಿಚಾರಗಳನ್ನು ನಿಖರವಾಗಿ ಸ್ಪಷ್ಟವಾಗಿ ಯಾವ ಮುಲಾಜು ಇಲ್ಲದೇ ದಾಷ್ಟತನದಲ್ಲಿ ತೇಜಸ್ವಿ ಮಂಡಿಸಿದ್ದಾರೆ. ಈ ಕೃತಿಗಳ ಎಲ್ಲಾ ವಿಷಯಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಹದಗೆಟ್ಟ ಈ ವ್ಯವಸ್ಥೆಯನ್ನು ಸರಿಪಡಿಸಲು ಕುವೆಂಪು ಅವರ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ, ಮಲೆನಾಡಿನ ಯುವಕರಿಗೆ ಕರೆ, ವಿಚಾರ ಕ್ರಾಂತಿಗೆ ಆಹ್ವಾನ ಹಾಗೂ ತೇಜಸ್ವಿ ಅವರ ಹೊಸ ವಿಚಾರಗಳು ಕೃತಿಗಳ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಚಿಂತನೆಗೆ ಹಚ್ಚುವ ಕಾರ್ಯವನ್ನು ಮಾಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಎಲೆಕ್ಟ್ರೀಯೇಷನ್ ಹಾಗೂ ಸೌಂಡ್ ಸೂಪರ್ ವೈಸರ್ ಶ್ರೀನಿವಾಸ್, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಪ್ರಜ್ವಲ್, ಸ್ಯಾನಿಯಲ್ ಹ್ಯಾರೀಸ್ ಇದ್ದರು.












Click it and Unblock the Notifications