ಅಪ್ಪ ಸತ್ತ ವಾರದಲ್ಲೇ ಮಗನ ಸಾವು; ವಿಧಿ ಆಟ ಕ್ರೂರ...
ಚಿಕ್ಕಮಗಳೂರು, ಜೂನ್ 11: ವಿಧಿ ಮನುಷ್ಯರ ಬಾಳಲ್ಲಿ ಹೇಗೆಲ್ಲಾ ಆಟವಾಡುತ್ತದೆ ಅನ್ನುವುದನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಈ ಮಹಿಳೆಯ ಬಾಳಲ್ಲಿ ಆಗಿದ್ದೂ ಅದೇ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ವಾಸವಿರುವ ಈ ಮಹಿಳೆ ಇದೀಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
Recommended Video
ಮೊನ್ನೆ ಮೊನ್ನೆಯವರೆಗೂ ಸುಂದರ ಸಂಸಾರದಲ್ಲಿ ಗಂಡ ಮಗನೊಂದಿಗೆ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದ ಇವರ ಬಾಳಲ್ಲಿ ಈಗ ಬಿರುಗಾಳಿ ಬೀಸಿದೆ. ವಿಧಿಯ ವಕ್ರದೃಷ್ಟಿಗೆ ಗಂಡ-ಮಗ ಈ ಮಹಿಳೆಯಿಂದ ಶಾಶ್ವತವಾಗಿ ದೂರವಾಗಿದ್ದಾರೆ. ಅಪ್ಪ ಸತ್ತ ವಾರದೊಳಗೇ ಮಗನೂ ಸಾವನ್ನಪ್ಪಿದ ಸಂಗತಿ ನಡೆದಿದೆ. ಇದೀಗ ಮಹಿಳೆಗೆ ದಿಕ್ಕೇ ತೋಚದಂತಾಗಿದ್ದು, ನೆರವಿಗೆ ಕೋರಿದ್ದಾರೆ...

ಹೃದಯಾಘಾತದಿಂದ ಸಾವನ್ನಪ್ಪಿದ ಪತಿ
ಇವರ ಪತಿ ಮೂಡಿಗೆರೆ ಸಮೀಪದ ಕಾಫಿ ತೋಟವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಹೃದಯಘಾತದಿಂದ ಅವರು ಮೂರು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದರು. ಕುಟುಂಬಕ್ಕೆ ಆಧಾರವಾಗಿದ್ದ ಪತಿಗೇ ಸಾವು ಬಂದು ಇವರ ಪಾಲಿಗೆ ವಿಧಿ ಕ್ರೂರ ಆಟವಾಡಿತ್ತು. ಆದರೆ ತನ್ನ ಮಗನಿಗಾಗಿ ಆ ನೋವನ್ನು ನುಂಗಿಕೊಂಡು ನಳಿನಿ ಧೈರ್ಯವಾಗಿ ಇರಲು ನಿರ್ಧರಿಸಿದರು.

ಅಪ್ಪ ಸತ್ತ ವಾರದಲ್ಲೇ ಮಗನ ಸಾವು
ಕಾಲೇಜು ವ್ಯಾಸಂಗ ಮಾಡುತ್ತಿರುವ ಮಗನ ಶಿಕ್ಷಣಕ್ಕೆ ತಾನು ಬೆಳಕಾಗಬೇಕು, ಧೃತಿಗೆಡಬಾರದು ಎಂದು ಧೈರ್ಯವಾಗಿದ್ದ ಇವರಿಗೆ ಮತ್ತೊಂದು ಆಘಾತ ಎರಗಿತು. ಯಾರಿಗಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ್ದರೋ ಆ ಮಗನೇ ಅಪ್ಪ ಸಾವನ್ನಪ್ಪಿದ್ದ ವಾರದೊಳಗೆ ಅಪಘಾತದಲ್ಲಿ ಸಾವನ್ನಪ್ಪಿದ. ಇಂಥ ಪರಿಸ್ಥಿತಿಯಲ್ಲಿ ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ನಳಿನಿ ಮನೆಯ ಬಾಡಿಗೆ ಕಟ್ಟಲೂ ಆಗದೇ ಪರಿತಪಿಸುತ್ತಿದ್ದಾರೆ.

ಬದುಕಿಗೆ ಇನ್ನೇನು ಆಧಾರ
ಕೊಡಗು ಜಿಲ್ಲೆಯ ನಾಪೋಕ್ಲು ಮೂಲದವರಾದ ಇವರು ಕಳೆದ ಕೆಲ ವರ್ಷಗಳಿಂದ ಮೂಡಿಗೆರೆಯಲ್ಲಿ ನೆಲೆ ಕಂಡುಕೊಂಡಿದ್ದರು. ಮಗನಿಗೆ ಒಂದೊಳ್ಳೆ ಭವಿಷ್ಯವನ್ನು ಕಟ್ಟಿಕೊಡಬೇಕು ಎಂದು ದಂಪತಿ ಕನಸು ಕಟ್ಟಿಕೊಂಡಿದ್ದರು. ಆದರೆ ಎಲ್ಲಾ ಕನಸನ್ನು ನುಚ್ಚುನೂರು ಮಾಡಿ ಪತಿ ಮೊದಲು ಜೀವನ ಪಯಣ ಮುಗಿಸಿದರೆ, ಅದಾದ ಒಂದೇ ವಾರದಲ್ಲಿ ಮಗನೂ ಸಾವನ್ನಪ್ಪಿದ. ಇತ್ತ ಬದುಕಿಗೂ ಆಧಾರ ಇಲ್ಲದಂತಾಗಿದೆ ಇವರಿಗೆ.

ನೆರವಿಗೆ ಮನವಿ...
ಒಂದೆಡೆ ಮಗನ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲ, ಇನ್ನೊಂದೆಡೆ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಪತಿ, ಮಗನ ಮರಣ... ಬಾಡಿಗೆ ಕಟ್ಟಲು ಹಣವಿಲ್ಲದೇ, ದಿನಸಿಗೂ ಪರದಾಟ ನಡೆಸುತ್ತಿರುವ ಈ ಮಹಿಳೆ ನೆರವಿಗೆ ಕೋರಿದ್ದಾರೆ.












Click it and Unblock the Notifications