ಕಡೂರು; 21 ವರ್ಷ ದೇಶ ಸೇವೆ ಮಾಡಿದ ಯೋಧನಿಗೆ ಅದ್ಧೂರಿ ಸ್ವಾಗತ
ಚಿಕ್ಕಮಗಳೂರು, ಫೆಬ್ರವರಿ 08; ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಗ್ರಾಮಕ್ಕೆ ಬಂದ ಯೋಧನಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಗ್ರಾಮಸ್ಥರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಅದ್ದೂರಿಯಾಗಿ ಬರಮಾಡಿಕೊಂಡರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಎಸ್. ಬಿದರೆ ಗ್ರಾಮದ ಚಂದ್ರಶೇಖರ್ ಸೇನೆಯಿಂದ ನಿವೃತ್ತರಾಗಿದ್ದಾರೆ. 21 ವರ್ಷಗಳ ಕಾಲ ಬಿಎಸ್ಎಫ್ ಯೋಧರಾಗಿ ಚಂದ್ರಶೇಖರ್ ಅವರು ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳ, ಪಾಕಿಸ್ತಾನದ ಗಡಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಚಂದ್ರಶೇಖರ್ ಅವರು ಗ್ರಾಮಕ್ಕೆ ಬರುವ ವಿಷಯ ತಿಳಿದ ಗ್ರಾಮದ ಯುವಕರು ಮತ್ತು ಅವರ ಸ್ನೇಹಿತರು ತೆರೆದ ವಾಹನವನ್ನು ಹೂವುಗಳಿಂದ ಸಿಂಗರಿಸಿ ಸಿದ್ಧತೆ ಮಾಡಿ ಕೊಂಡಿದ್ದರು. ಯೋಧ ಚಂದ್ರಶೇಖರ್ ಗ್ರಾಮದ ದ್ವಾರಕ್ಕೆ ಬರುತ್ತಿದ್ದಂತೆ ಹೂವಿನ ಹಾರ ಹಾನಿ ತಬ್ಬಿಕೊಂಡು ಸ್ವಾಗತಿಸಿದರು.

ನಂತರ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಶಾಲಾ ಮಕ್ಕಳು, ಗ್ರಾಮಸ್ಥರು ಜೈಕಾರ, ಘೋಷಣೆ ಕೂಗಿ ಆತ್ಮೀಯವಾಗಿ ಬರಮಾಡಿಕೊಂಡರು.
ಚಂದ್ರಶೇಖರ್ ಅವರು ಮಾತನಾಡಿ, ಕಾಶ್ಮೀರದ ಹಿಮಪಾತದಲ್ಲಿ ಸಿಲುಕಿ ಮೂರು ದಿನ 1 ಲೀಟರ್ ನೀರು ಕುಡಿದು ಬದುಕಿ ಬಂದ ಘಟನೆ ಹಾಗೂ ಯೋಧರು ಎಷ್ಟು ಕಷ್ಟಪಡುತ್ತಾರೆ ಎಂಬ ತಮ್ಮ ಅನುಭವವನ್ನು ಹಂಚಿಕೊಂಡರು.

ಮುಂದಿನ ದಿನಗಳಲ್ಲೂ ನಾನು ಯೋಧನಾಗಿರುತ್ತೇನೆ. ನಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಯಾರೆ ಬಂದರೂ ಅವರಿಗೆ ಸೈನ್ಯಕ್ಕೆ ಸೇರಲು ತರಬೇತಿ ನೀಡಲು ಸಿದ್ದವಾಗಿದ್ದೇನೆ. ಜೀವವನ್ನೇ ಲೆಕ್ಕಿಸದೆ ಗಡಿಕಾಯೋ ಯೋಧನಿಗೆ ಈ ರೀತಿ ಭವ್ಯ ಸ್ವಾಗತ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.












Click it and Unblock the Notifications