ಚಿಕ್ಕಮಗಳೂರು; ಸಿಎಂ ಬೆಂಗಾವಲು ವಾಹನ ಅಪಘಾತ
ಚಿಕ್ಕಮಗಳೂರು, ನವೆಂಬರ್ 6: ಮಂಗಳೂರಿನಿಂದ ವಾಪಸ್ ಆಗುತ್ತಿದ್ದ ಸಂದರ್ಭ ಸಿಎಂ ಯಡಿಯೂರಪ್ಪ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.
ಗುರುವಾರ ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುವ ಸಲುವಾಗಿ ಮಂಗಳೂರಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಸಿಎಂ ಬೆಂಗಾವಲು ಕರ್ತವ್ಯದಲ್ಲಿದ್ದವರು ಇಂದು ಕಾರ್ಯ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ.

ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಬಳಿ ಬರುತ್ತಿದ್ದಂತೆ ಜೀಪ್ ಪಲ್ಟಿಯಾಗಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ವಾಹನ ಚಲಿಸುವಾಗ ಜೀಪ್ ಬ್ರೇಕ್ ಜಾಮ್ ಆಗಿದ್ದೇ ವಾಹನ ಪಲ್ಟಿಯಾಗಲು ಕಾರಣವಾಗಿದೆ. ಬ್ರೇಕ್ ಜಾಮ್ ಆಗುತ್ತಿದ್ದಂತೆ, ವಾಹನದ ಟೈರ್ ಸ್ಫೋಟಗೊಂಡು ಪಲ್ಟಿಯಾಗಿ ಉರುಳಿದೆ. ಘಟನೆಯಲ್ಲಿ ಜೀಪ್ ನಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಜೀಪ್ ಚಾಲಕ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications