ಜನರಿಂದ ತರಾಟೆ; ಹತ್ತನೇ ದಿನಕ್ಕೆ ಸಿದ್ಧವಾಗುತ್ತಿದೆ ಸೇತುವೆ
ಚಿಕ್ಕಮಗಳೂರು, ಆಗಸ್ಟ್ 18: ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ವರ್ಷದ ಹಿಂದೆ ಸೇತುವೆ ಕುಸಿದು ಹೋಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ, ಸಂಸದರಿಗೆ ಜನರು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿತ್ತು. ಇದೀಗ ಆ ಸಂಗತಿ ನಡೆದ ಹತ್ತೇ ದಿನಕ್ಕೆ ಫಲಿತಾಂಶ ದೊರೆತಿದೆ.
Recommended Video
ಸ್ಥಳೀಯರ ಪಾಠದಿಂದಾಗಿ ಹೇಮಾವತಿ ನದಿಗೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈಚೆಗೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಅಲ್ಲಿಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆ ಸಂದರ್ಭ ಜನರೇ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ವರ್ಷವಾದರೂ ಇಲ್ಲ ಸೇತುವೆ: ಸಂಸದೆ, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಜನ
ಕಳೆದ ವರ್ಷ ಮಳೆಗಾಲದಲ್ಲಿ ಹೇಮಾವತಿ ಸೇತುವೆ ಕೊಚ್ಚಿ ಹೋಗಿದ್ದು, ಸ್ಥಳೀಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆಯೂ ಈ ಬಾರಿ ಕೊಚ್ಚಿ ಹೋಗಿತ್ತು. ನಾಲ್ಕು ಹಳ್ಳಿಯ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಈ ಸಂದರ್ಭ ಭೇಟಿ ನೀಡಿದ್ದ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕುಮಾರಸ್ವಾಮಿ ಅವರನ್ನು ವರ್ಷ ಕಳೆದರೂ ಸೇತುವೆ ನಿರ್ಮಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಹತ್ತು ದಿನಗಳ ನಂತರ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.