'ಸಿದ್ದರಾಮಯ್ಯ ಸರ್ಕಾರ ಉರುಳುವುದು ನಿಶ್ಚಯ, ಯಾವುದೇ ಅನುಮಾನ ಬೇಡ'
ಚಿಕ್ಕಮಗಳೂರು, ಏಪ್ರಿಲ್ 11: ಸಿದ್ದರಾಮಯ್ಯನವರ ಸರಕಾರ ಉರುಳುವುದು ನಿಶ್ಚಯ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭವಿಷ್ಯ ನುಡಿದಿದ್ದಾರೆ. ಬಿರುಗಾಳಿ ಬೀಸುವುದು, ತೆರೆಯೆದ್ದು ಕುಣಿಯುವುದು, ಹರಿಗೋಲು ಮುಳುಗುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸರಕಾರದ ವಿರುದ್ಧ ಜನರು ಕರ್ನಾಟಕದಾದ್ಯಂತ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಜನಾಂದೋಲನಗಳೂ ನಡೆಯುತ್ತಿವೆ ಎಂದು ಹೇಳಿದರು.
ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡಿ; 1 ಲಕ್ಷ ಕೋಟಿಯಾದರೂ ಕೊಡಿ. ನಮ್ಮ ಅಭ್ಯಂತರ ಇಲ್ಲ. ಹಿಂದುಳಿದ ಸಮಾಜಗಳ, ಪರಿಶಿಷ್ಟ ಜಾತಿಗಳ ಪಂಗಡಗಳ ಮಕ್ಕಳು ಹಾಸ್ಟೆಲ್ನಲ್ಲಿ ಸೀಟು ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಸ್ಥಿತಿ ಬಂದಿದೆಯಲ್ಲವೇ? ಹಾಗಿದ್ದರೆ ಶೇ 50ಕ್ಕೂ ಹೆಚ್ಚಿರುವ ಈ ಜನಾಂಗಗಳಿಗೆ ನೀವು ಕೊಟ್ಟ ನ್ಯಾಯವಾದರೂ ಏನು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಪಾಕಿಸ್ತಾನ ಗೆಲ್ಲಲಿ ಎಂದು ವಿಧಾನಸೌಧದಲ್ಲಿ ಘೋಷಣೆ ಕೂಗಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರಾ ಎಂಬ ಪ್ರಶ್ನೆಗೆ ರಾಷ್ಟ್ರವಾದಿ ಕಾಂಗ್ರೆಸ್ಸಿಗರು ಎಂದು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಅಧಿಕಾರಕ್ಕೆ ತರಲು ಶ್ರಮ: ಶ್ರೀರಾಮುಲು
ಬಿಜೆಪಿಯನ್ನು ಭವಿಷ್ಯದಲ್ಲಿ ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮನವಿ ಮಾಡಿದರು. ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಇವತ್ತು ಸಾಮಾನ್ಯ ಜನರು ಬದುಕಲಾರದ ಪರಿಸ್ಥಿತಿಗೆ ಬಂದುಬಿಟ್ಟಿದ್ದಾರೆ. ಒಂದು ಕಡೆ ಸರ್ಕಾರವು ಮಾತನಾಡದೆ ಮೂಕ, ಕಿವಿ ಕೇಳದಂತೆ ಹಾಗೂ ಕಿವುಡಾಗಿ ಕುಳಿತಿದೆ. ಕಣ್ಣು ಕಾಣದ ಹಾಗೆ ಕುರುಡರಂತೆ ಕುಳಿತಿದೆ. ಇವತ್ತು ಸರ್ಕಾರಕ್ಕೆ ಬುದ್ಧಿ ಕಲಿಸುವ ಉದ್ದೇಶದಿಂದ ಹಾಗೂ ದಿನನಿತ್ಯದ ಬದುಕಿನಲ್ಲಿ ಜನರಿಗೆ ಸಮಸ್ಯೆ ಉಂಟಾಗಿರುವ ಕಾರಣ ಈ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಶಾಸಕರನ್ನು ಮಾರ್ಷೆಲ್ಗಳ ಮುಖಾಂತರ ಸದನದಿಂದ ಹೊರಗಡೆ ಕಳುಹಿಸಿ ಅಮಾನತು ಮಾಡಿದ್ದನ್ನು ಅವರು ಖಂಡಿಸಿದರು. ಸಿದ್ದರಾಮಯ್ಯರವರ ಆಪ್ತರು, ಶಾಸಕರಾದ ಹಾಗೂ ಮಾಜಿ ಮಂತ್ರಿಗಳಾದ ಬಸವರಾಜ ರಾಯರೆಡ್ಡಿರವರೇ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಇಡೀ ದೇಶದಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾಗಿ ಹೇಳುತ್ತಿದ್ದಾರೆ. ಭ್ರಷ್ಟಾಚಾರ ತೀವ್ರವಾಗಿ ತಾರಕಕ್ಕೆ ಏರುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿರುವ ಸಚಿವರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಈ ರಾಜ್ಯದಲ್ಲಿರುವ ಎಲ್ಲಾ ಸಂಪತ್ತನ್ನು ಈ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಎಲ್ಲಾ ಸಚಿವರು ಹಣ ವಸೂಲಿ ಮಾಡಿ, ಕುರ್ಚಿ ಭದ್ರಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಾಗೂ ಎಲ್ಲಾ ನಿಗಮಗಳಲ್ಲಿ ಹಣವನ್ನು ಖಾಲಿ ಮಾಡಿ ಭ್ರಷ್ಟಾಚಾರ ಮಾಡಿ ವಿಚಾರಣೆ ನೆಪದಲ್ಲಿ ಅವರದ್ದೇ ಸರ್ಕಾರದ ಬೇರೆ ಬೇರೆ ಅಧಿಕಾರಿಗಳನ್ನು ನೇಮಿಸಿ ಕ್ಲೀನ್ ಚಿಟ್ನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಉಡುಪಿ ಜಿಲ್ಲೆಯು ನಮ್ಮ ಇಡೀ ರಾಜ್ಯಕ್ಕೆ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಶಿಸ್ತು ಮತ್ತು ಶ್ರದ್ಧೆಯನ್ನು ಕಲಿಸಿಕೊಟ್ಟ ಸ್ಥಳ ಎಂದು ಮೆಚ್ಚುಗೆ ಸೂಚಿಸಿದರು.
ಉಡುಪಿ ಜಿಲ್ಲೆಯ ವಿಚಾರ ಬಂದಾಗ ದಿವಂಗತ ಆಚಾರ್ಯರವರ ನೆನಪಾಗುತ್ತದೆ ಎಂದು ನುಡಿದರು. ಆಚಾರ್ಯ ರವರ ನೆನಪಿನ ಸಲುವಾಗಿ ಉಡುಪಿಯ ಬಸ್ ನಿಲ್ದಾಣವನ್ನು ಆಚಾರ್ಯ ಬಸ್ ನಿಲ್ದಾಣವೆಂದು ಮಾಡಬೇಕು ಎಂದು ಹೇಳಿದಾಗ ಅವತ್ತಿನ ಕ್ಯಾಬಿನೆಟ್ನಲ್ಲಿ ಯಡಿಯೂರಪ್ಪ ರವರು ತೀರ್ಮಾನ ತೆಗೆದುಕೊಂಡಿದ್ದರು. ನಾನು ಸಾರಿಗೆ ಮಂತ್ರಿಯಾಗಿ ಉಡುಪಿಯ ಬಸ್ ನಿಲ್ದಾಣವನ್ನು ಆಚಾರ್ಯ ಬಸ್ ನಿಲ್ದಾಣವೆಂದು ಹೆಸರು ಇಡುವ ಕೆಲಸ ನಾನು ಮಾಡಿಕೊಟ್ಟೆ ಎಂದ ಅವರು, 2028 ರಲ್ಲಿ ವಿಜಯೇಂದ್ರ ರವರು ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಪುನಃ ಅಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.












Click it and Unblock the Notifications