ಶಾಲಾ ಮಕ್ಕಳಿಗೆ ಪತ್ರ ಬರೆದು ಕುಶಲೋಪರಿ ವಿಚಾರಿಸಿದ ಶಿಕ್ಷಕಿ
ಚಿಕ್ಕಮಗಳೂರು, ಜೂನ್ 06; ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಹಾಕಿ ವರ್ಷಗಳೇ ಕಳೆಯುತ್ತಿದೆ. ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ತೆರೆಯದೇ ಎರಡು ವರ್ಷಗಳು ತುಂಬುತ್ತಾ ಬರುತ್ತಿದೆ.
ಮಕ್ಕಳು ಶಾಲೆ ಕಡೆ ಮುಖ ಮಾಡಿಲ್ಲ ಇದು ಮಕ್ಕಳ ಮತ್ತು ಶಿಕ್ಷಕರ ಬಾಂಧವ್ಯದ ಬೆಸುಗೆ ಕಳಚುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಿಕ್ಷಕಿಯೊಬ್ಬರು ಮಕ್ಕಳಿಗೆಲ್ಲ ಪತ್ರ ಬರೆಯುವ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ 16 ಮಕ್ಕಳಿಗೆ ಪತ್ರ ಬರೆದು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಪ್ರತಿಯೊಬ್ಬ ಮಕ್ಕಳಿಗೂ ಸುದೀರ್ಘ ಪತ್ರ ಬರೆದಿರುವ ಶಿಕ್ಷಕಿ ಗೀತಾ ಮಕ್ಕಳ ಕುಶಲೋಪರಿಯನ್ನು ವಿಚಾರಿಸುವುದರ ಜೊತೆಗೆ ಪೋಷಕರ ಆರೋಗ್ಯದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಿಸಿದ್ದಾರೆ.

ಶಾಲೆಯಲ್ಲಿ ಓದುವ 1 ರಿಂದ 5ನೇ ತರಗತಿಯ ಎಲ್ಲಾ 16 ಮಕ್ಕಳಿಗೂ ಎರಡು ದಿನ ಸಮಯ ತೆಗೆದುಕೊಂಡು ಪತ್ರ ಬರೆದಿದ್ದಾರೆ. ಮಕ್ಕಳಿಗೆ ಪತ್ರ ತಲುಪಿದ ಒಂದೇ ದಿನದಲ್ಲಿ ಅತ್ತಕಡೆಯಿಂದ ಪೋಷಕರು ಮತ್ತು ಮಕ್ಕಳು ಶಿಕ್ಷಕಿ ಗೀತಾ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ನಲ್ಲಿ ನಡೆದ ಸಭೆಯಲ್ಲಿ ಮಕ್ಕಳಿಗೆ ಪತ್ರ ಬರೆದು ಆತ್ಮಸ್ಥೈರ್ಯ ಹೆಚ್ಚಿಸಬೇಕೆಂದು ಶಿಕ್ಷಕರಿಗೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅಭಿವೃದ್ಧಿ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಪೋಷಕರಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ನಡೆ ಎಲ್ಲ ಶಿಕ್ಷಕರಿಗೂ ಕೊರೊನಾ ಸಮಯದಲ್ಲಿ ಮಾದರಿಯಾಗಿದೆ.












Click it and Unblock the Notifications