ಸಹಕಾರ ಸಾರಿಗೆ ಸಂಸ್ಥೆಯ ಆಸ್ತಿ ಮುಟ್ಟುಗೋಲು; ಬೀಗಮುದ್ರೆ
ಚಿಕ್ಕಮಗಳೂರು, ಮೇ 18; ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕೆಸವೆ ರಸ್ತೆಯಲ್ಲಿರುವ ಸಹಕಾರ ಸಾರಿಗೆ (ಟಿಸಿಎಸ್) ಸಂಸ್ಥೆಯ ಆಡಳಿತ ವರ್ಗವೂ ಸಾಲ ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯೂ 1 ಎಕರೆ 10 ಗುಂಟೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಸಂಸ್ಥೆಯ ಅಧ್ಯಕ್ಷರಾದ ಈ. ಎಸ್. ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಗಾಡ್ವಿನ್ ಜಯಪ್ರಕಾಶ್ ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ಕೋಟಿ 20 ಲಕ್ಷ ಸಾಲವನ್ನು ಪಡೆದಿದ್ದರು.
2019ರ ನಂತರ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ. ಕಂಪನಿಯೂ ಅವರಿಗೆ ನೋಟಿಸ್ ನೀಡಿದ್ದರೂ ಸಹ ಬಡ್ಡಿ ಸಹಿತ 1,31,41,210 ಮೊತ್ತವನ್ನು ಮರು ಪಾವತಿ ಮಾಡಲು ಹಿಂದೇಟು ಹಾಕಿದ್ದ ಕಾರಣ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಆದೇಶದಂತೆ ಸೋಮವಾರ ತಾಲೂಕು ದಂಡಧಿಕಾರಿ ಹೆಚ್. ಎಸ್. ಪರಮೇಶ್ ಸಮ್ಮುಖದಲ್ಲಿ ಕೆಸವೆ ರಸ್ತೆಯ ಸರ್ವೆ ನಂ 97ರಲ್ಲಿರುವ 1 ಎಕರೆ 10 ಗುಂಟೆ ಟಿಸಿಎಸ್ ಸಂಸ್ಥೆಯ ಆಸ್ತಿಯನ್ನು ಕಂಪನಿ ವಶಕ್ಕೆ ತೆಗೆದುಕೊಂಡಿದೆ. ಕಛೇರಿಗೆ ಪ್ರವೇಶಿಸದಂತೆ ಬೀಗಮುದ್ರೆ ಹಾಕಲಾಗಿದೆ.
ಈ ಕುರಿತು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯ ಮ್ಯಾನೇಜರ್ ಸಂತೃಪ್ತ್ ಮಾತನಾಡಿದ್ದು, "2019ರ ನಂತರ ಸಂಸ್ಥೆ ಸಾಲವನ್ನು ಪಾವತಿ ಮಾಡಿಲ್ಲ. ನಾವು ಹಲವು ಭಾರಿ ನೋಟಿಸ್ ನೀಡಿದ್ದೇವೆ. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಮಾಡಿದ್ದಾರೆ. ಆದರಂತೆ ತಾಲೂಕು ಮ್ಯಾಜಿಸ್ಟ್ರೇಟ್ ವಶಕ್ಕೆ ಪಡೆದು ನಮಗೆ ಹಸ್ತಾಂತರ ಮಾಡಿದ್ದಾರೆ. ನಂತರದಲ್ಲಿ ಆಸ್ತಿ ಹರಾಜು ಹಾಕಲಾಗುತ್ತದೆ" ಎಂದು ಹೇಳಿದ್ದಾರೆ.
ಆಸ್ತಿಮುಟ್ಟುಗೋಲು ಹಾಕಿಕೊಳ್ಳುವ ಸಂದರ್ಭದಲ್ಲಿ ತಹಶೀಲ್ದಾರ್ ಪರಮೇಶ್, ರಾಜಸ್ವ ನಿರೀಕ್ಷಕ ಸತೀಶ್, ವೃತ್ತ ನಿರೀಕ್ಷಕ ಗುರಣ್ಣಾ ಹೆಬ್ಬಾಳ್, ಪಿಎಸ್ಐ ರವಿ ಮುಂತಾದವರಿದ್ದರು.












Click it and Unblock the Notifications