ಚಿಕ್ಕಮಗಳೂರು; ಪಶ್ಚಿಮ ಘಟ್ಟ ಪ್ರದೇಶದಲ್ಲೂ ರೀಯಲ್ ಎಸ್ಟೇಟ್ ದಂಧೆ
ಚಿಕ್ಕಮಗಳೂರು, ಜನವರಿ 08: ಚಿಕ್ಕಮಗಳೂರಿನಲ್ಲಿ ನಕಲಿ ದಾಖಲೆಗಳ ಮೂಲಕ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಸಹ ರಿಯಲ್ ಎಸ್ಟೇಟ್ ದಂಧೆ ತನ್ನ ಕೈ ಚಾಚಿರುವುದು ಈಗ ಕಂಡುಬಂದಿದೆ.
ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗಳು ಓಡಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿದೆ. ಜಿಲ್ಲಾಡಳಿತ ಎಚ್ಚೆತ್ತು ಇದೀಗ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರಿಗೆ ನೋಟೀಸ್ ನೀಡಿದೆ.

ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿಯ ಹುಲುವತ್ತಿ ಮತ್ತು ಗೊಣಕಲ್ ಗ್ರಾಮಗಳಲ್ಲಿ 242 ಎಕರೆ ಜಾಗವನ್ನು ತುಂಡು ಭೂಮಿಯಾಗಿ ವಿಭಜಿಸಿ ಲೇಔಟ್ ನಿರ್ಮಿಸಲು 6 ಕಂಪನಿಗಳು ತಯಾರಾಗಿವೆ. ಈ ಲೇಔಟ್ಗಳನ್ನು ಹೊರ ರಾಜ್ಯದವರಿಗೆ ಮಾರಾಟ ಮಾಡಲು ಯೋಜನೆ ಸಹ ಸಿದ್ಧವಾಗಿದೆ.
ಹೇಳಿರುವುದೇ ಬೇರೆ; ಕಾಫಿ ತೋಟ ಮಾಡುತ್ತೇವೆ ಎಂದು ಕದ್ದು ಮುಚ್ಚಿ ರಿಯಲ್ ಎಸ್ಟೇಟ್ ದಂಧೆ ನಡೆಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಇಲ್ಲ. ಜೊತೆಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರಕ್ಷಿತ ಪ್ರದೇಶದ ಗಡಿಯಿಂದ 10 ಕಿ. ಮೀ. ವ್ಯಾಪ್ತಿಯು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ.
ಆದರೆ ಕಂಪನಿಗಳು ವನ್ಯಜೀವಿ ಕಾಯ್ದೆ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಗಾಳಿಗೆ ತೂರಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಕಂಪನಿಗಳು ಮುಂದಾಗಿದ್ದು, ಕಂಪನಿಗಳ ವಿರುದ್ಧ ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.
ರಿಯಲ್ ಎಸ್ಟೇಟ್ಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ. ಈ ಬಳಿಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೂ ಪರಿವರ್ತನೆ ಮಾಡಿದ 7 ಅಧಿಕಾರಿಗಳಿಗೆ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಹಾಗೇಯೇ ಲೇಔಟ್ ನಿರ್ಮಿಸಲು ಮುಂದಾಗಿದ್ದ ಹಲವರಿಗೆ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಭೂ ಮಾಫಿಯಾಕ್ಕೆ ಕಡಿವಾಣ ಹಾಕಲಿದೆಯೇ? ಕಾದು ನೋಡಬೇಕು.
ನಕಲಿ ದಾಖಲೆಗಳ ಮೂಲಕ ಅರಣ್ಯ ಭೂಮಿಯನ್ನು ಸಹ ಚಿಕ್ಕಮಗಳೂರಿನಲ್ಲಿ ವಿದೇಶಿಯರಿಗೆ ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿಯನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಣಿಸಿದೆ. ಈ ಕುರಿತು ತನಿಖೆಗೆ ಸಹ ಆದೇಶ ಮಾಡಲಾಗಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ರಾಜೇಂದ್ರ ಕುಮಾರ್ ಕಠರಿಯಾ ಈ ಕುರಿತು ಕೆಲವು ದಿನಗಳ ಹಿಂದೆ ಮಾತನಾಡಿದ್ದರು. "ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿಗೆ ಸಂಬಂಧಿಸಿದಂತೆ ತಪ್ಪುಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದರು.
"ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪುಮಾಡಿರುವ ಅಧಿಕಾರಿ ವಿರುದ್ಧ ಕಂದಾಯ ಕಾಯ್ದೆ, ಕ್ರಿಮಿನಲ್ಕಾಯ್ದೆ ದಾಖಲಾಗುವುದರೊಂದಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದ ಭೂಮಿಯನ್ನು ರದ್ದುಗೊಳಿಸಿ ಕಂದಾಯ ಇಲಾಖೆಗೆ ವಾಪಸ್ ಪಡೆದುಕೊಳ್ಳಲಾಗುವುದು" ಎಂದು ಹೇಳಿದ್ದರು.












Click it and Unblock the Notifications