ಚಿತ್ರಗಳಲ್ಲಿ; ಮಲೆನಾಡು ಚಿಕ್ಕಮಗಳೂರಿನಲ್ಲಿ ಅವಾಂತರ ಸೃಷ್ಟಿಸಿರುವ ಆಶ್ಲೇಷ ಮಳೆ
ಚಿಕ್ಕಮಗಳೂರು, ಆಗಸ್ಟ್ 05: ಜಿಲ್ಲೆಯಲ್ಲಿ ಬುಧವಾರ ಆಶ್ಲೇಷ ಮಳೆ ಅವಾಂತರ ಸೃಷ್ಟಿಸಿದೆ. ಪಂಚನದಿಗಳಾದ ತುಂಗಾ, ಭದ್ರಾ, ಹೇಮಾವತಿ, ಶರಾವತಿ, ಯಗಚಿ ನದಿಗಳು ತುಂಬಿ ಹರಿಯುತ್ತಿದ್ದು ಹಲವಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭದ್ರಾ ನದಿ ಹುಕ್ಕಿ ಹರಿಯುತ್ತಿರುವ ಪರಿಣಾಮ ಹೆಬ್ಬಾಳ ಸೇತುವೆ ಮುಳುಗಡೆಯಾಗಿತ್ತು.
Recommended Video
ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿಯ ರವಿಚಂದ್ರನಾಯ್ಕ ಎಂಬುವರ ಮನೆ ಹಾಗೂ ಬುಲೆರೋ ವಾಹನದ ಮೇಲೆ ಬೃಹತ್ ನೀಲಗಿರಿ ಮರಬಿದ್ದು ಕಾರು ಸಂಪೂರ್ಣ ಜಖಂ ಆಗಿದೆ. ಮನೆಯೂ ಸಹ ಸಂಪೂರ್ಣ ನಾಶವಾಗಿದ್ದು ಕುಟುಂಬ ಸೂರಿಲ್ಲದೇ ಕಂಗಾಲಾಗಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದ ಈ ಅವಾಂತರ ಸೃಷ್ಟಿಯಾಗಿದೆ. ತರೀಕೆರೆ ಪಟ್ಟನದ ಎಪಿಎಂಸಿ ಆವರಣದಲ್ಲಿರುವ ಟೀ ಅಂಗಡಿಯ ಮೇಲೆ ಮರಬಿದ್ದ ಪರಿಣಾಮ ಅಂಗಡಿ ಸಂಪೂರ್ಣ ನಾಶಗೊಂಡಿದೆ.
ಶೃಂಗೇರಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಆನೆಗುಂದ ಸಮೀಪ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಕ್ಕದಲ್ಲಿದ್ದ ಮನೆಗೂ ಭಾಗಶಃ ಹಾನಿ ಉಂಟಾಗಿದೆ.

ಮೂಡಿಗೆರೆಯಲ್ಲಿ ಗುಡ್ಡ ಕುಸಿತ
ಮೂಡಿಗೆರೆ ತಾಲ್ಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಆತಂಕ ಎದುರಾಗಿದೆ. ಕಳೆದ ಬಾರಿಯ ಅತಿವೃಷ್ಟಿಯಿಂದ ಜನರು ಈಗಾಗಲೇ ಕಂಗಾಲಾಗಿದ್ದು ನಿನ್ನೆಯಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿಯ ದೇವಸ್ಥಾನದ ಸಮೀಪ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಜನರು ಆತಂಕ ಪಡುವಂತಾಗಿದೆ. ಹ್ಯಾಂಡ್ ಪೋಸ್ಟ್, ಮುತ್ತಿಗೆಪುರ, ಅಣಜೂರು, ಕೊಟ್ಟಿಗೆಹಾರದಲ್ಲಿ ಬೃಹತ್ ಮರಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಭಾರೀ ಹಾನಿ ಉಂಟಾಗಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆ
ಕೊಟ್ಟಿಗೆಹಾರದ ಖಾದರ್, ದೇವನ್ ಗುಲ್ ಸತೀಶ್ ಆಚಾರ್ ಎಂಬುವರ ಮನೆಯ ಮೇಲೆ ಮರಬಿದ್ದ ಪರಿಣಾಮ ಅವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಿನ್ನಡಿ ಗ್ರಾಮದ ಲಕ್ಷ್ಮಮ್ಮ ಎಂಬುವರ ಮನೆಯ ಹಂಚುಗಳು ಹಾರಿಹೋಗಿದ್ದು ಇಡೀ ಕುಟುಂಬ ಮಳೆಯಲ್ಲಿಯೇ ನೆನೆಯುವಂತಾಗಿದೆ. ತಾಲ್ಲೂಕಿನ ಬಣಕಲ್, ಮಾಗುಂಡಿ, ಜಾವಳಿ,ಬಾಳೂರು,ಕೂವೆ, ಚಾರ್ಮಾಡಿ ಭಾಗದಲ್ಲಿ ಬುಧವಾರ ಸಂಜೆಯವರೆಗೂ ಎಡೆಬಿಡದೇ ಮಳೆ ಸುರಿದಿದ್ದು ಜನರು ಭಯಬೀತರಾಗಿದ್ದಾರೆ.

ಚಾರ್ಮಾಡಿ-ಬಣಕಲ್ ಸುತ್ತಮುತ್ತ ಭಾರೀ ಮಳೆ
ಬಣಕಲ್, ಬಾಳೂರು ಹೋಬಳಿಯಾದ್ಯಂತ ಬುಧವಾರವೂ ಆಶ್ಲೇಷ ಮಳೆ ಅಬ್ಬರಿಸಿದೆ. ವಿಪರೀತ ಗಾಳಿ ಮಳೆಯಿಂದಾಗಿ ಹಲವೆಡೆ ಗುಡ್ಡ ಜರಿದ, ಮನೆಗಳ ಮೇಲೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ನಡೆದಿದೆ. ದುರ್ಗದಹಳ್ಳಿಯಲ್ಲಿ ಹಲವೆಡೆ ಭೂಕುಸಿತವಾಗಿದ್ದು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಲಗಡಕ, ಕೊಂಬಿನಡಕ, ರಾಣಿಝರಿ ಮುಂತಾದ ಗ್ರಾಮಗಳಿಗೆ ಸಾಗುವ ರಸ್ತೆಯ ಮೇಲೆ ಭೂಕುಸಿತವಾಗಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೊಟ್ಟಿಗೆಹಾರ ಹೊರನಾಡು ರಸ್ತೆಯ ದ್ಯಾವನಗೂಲ್ ಸಮೀಪ ರಸ್ತೆಗೆ ಗುಡ್ಡ ಕುಸಿದಿದ್ದು ಘನ ವಾಹನ ಸಂಚಾರಿಸುವುದು ಕಷ್ಟವಾಗಿದೆ.

ಗ್ರಾಮಗಳನ್ನು ತೊರೆಯುತ್ತಿರುವ ಜನ
ಕಳೆದ ವರ್ಷ ನೆರೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದ ಮಲೆಮನೆ ಮೇಗೂರು ಭಾಗದಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದು ಕಳೆದ 2 ದಿನಗಳಿಂದ ಭಾರಿ ಗಾಳಿ ಮಳೆ ಸುರಿಯುತ್ತಿರುವುದರಿಂದ ಗ್ರಾಮಗಳನ್ನು ತೊರೆದು ಬೇರೆ ಊರುಗಳಲ್ಲಿ ಇರುವ ಸಂಬಂಧಿಕರ ಮನೆ ಅಥವಾ ಬಾಡಿಗೆ ಮನೆಗಳಿಗೆ ತೆರಳುತ್ತಿದ್ದಾರೆ. ಮೇಗೂರು ಮಲೆಮನೆಯ ಸುಮಾರು 10 ಕ್ಕೂ ಹೆಚ್ಚು ಕುಟುಂಬಗಳು ಗ್ರಾಮವನ್ನು ತೊರೆದಿವೆ.

ಕೊಟ್ಟಿಗೆ ಹಾರದ ಸುತ್ತಮುತ್ತಲೂ ಹೆಚ್ಚು ಮಳೆ
ಕೊಟ್ಟಿಗೆಹಾರ ಸುತ್ತಮುತ್ತ ಗಾಳಿ ಸಹಿತ ಮಳೆಯಾಗಿದ್ದು ಕೊಟ್ಟಿಗೆಹಾರದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆಯವರೆಗೆ 31 ಸೆಂ.ಮಿ ಮಳೆಯಾಗಿದೆ. ಕೊಟ್ಟಿಗೆಹಾರದ ಖಾಸಗಿ ಬಸ್ ನಿಲ್ದಾಣದ ಮಳಿಗೆಗಳ ಮೇಲ್ಚಾವಣಿ ಹಾರಿ ಹೋಗಿವೆ. ತರುವೆ ಗ್ರಾ.ಪಂ ಕಟ್ಟಡ, ಪ್ರವಾಸೋದ್ಯಮ ಇಲಾಖೆ ಹೋಟೇಲ್, ತೇಜಸ್ವಿ ಪ್ರತಿಷ್ಠಾನದ ಹಂಚುಗಳು ಹಾರಿ ಹೋಗಿವೆ. ದೇವನಗೂಲ್ ನಲ್ಲಿ ಮನೆಯ ಮೇಲೆ ಮರ ಬಿದ್ದು ವೃದ್ಧೆ ಪುಷ್ಪಮ್ಮ ಎಂಬುವವರಿಗೆ ಗಾಯವಾಗಿದೆ. ಕೊಟ್ಟಿಗೆಹಾರದ ಟಿ.ಎ ಖಾದರ್ ಎಂಬುವವರ ಸ್ಕೂಟಿಯ ಮೇಲೆ ಮರ ಬಿದ್ದು ಸ್ಕೂಟಿ ಜಖಂ ಆಗಿದೆ.

ಚಾರ್ಮಾಡಿಯಲ್ಲಿ ಬಿದ್ದ ಮರ
ಬಣಕಲ್ ನ ಕುವೆಂಪುನಗರ, ಚೇಗು, ಗುಡ್ಡಟ್ಟಿಯಲ್ಲಿ ಗಾಳಿ ಮಳೆಯಿಂದಾಗಿ ಹಲವಾರು ಮನೆಗಳ ಮೇಲ್ಚಾವಣಿ ಹಾನಿಯಾಗಿದೆ. ಬಣಕಲ್ ನ ಸರ್ಕಾರಿ ಕಾಲೇಜಿನ ಹೆಂಚುಗಳು ಹಾರಿ ಹೋಗಿವೆ. ಕುವೆಂಪುನಗರದ ಜಯಂತಿ, ಸುಜಾತ, ಕುಸುಮ, ಸುನೀತಾ, ಬಣಕಲ್ ನ ಮಹಮದ್ ಇಲಿಯಾಸ್, ತಾರಾ, ಗುಡ್ಡಟ್ಟಿಯ ಸುಭಾಷನಗರದ ಸುನಂದ ಅವರ ಮನೆಗಳು ಹಾನಿಯಾಗಿದೆ. ಬಣಕಲ್, ಚಾರ್ಮಾಡಿಯ ಮಳೆಯಿಂದ ಹಾನಿಯಾದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಚಾರ್ಮಾಡಿಯಲ್ಲಿ ಹೆದ್ದಾರಿಗೆ ಮರ ಬಿದ್ದ ಸ್ಥಳಕ್ಕೆ ಮತ್ತು ಬಣಕಲ್ ನ ಮನೆ ಹಾನಿಯಾದ ಸ್ಥಳಕ್ಕೆ ಬೇಟಿ ನೀಡಿದರು.












Click it and Unblock the Notifications