ಚುನಾವಣೆ ಬಳಿಕ ಸಿದ್ದರಾಮಯ್ಯ,ಕುಮಾರಸ್ವಾಮಿ ಯಾತ್ರೆಗೆ ಹೊರಡಬೇಕು-ಆರ್.ಅಶೋಕ್
ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಗಂಟುಮೂಟೆ ಕಟ್ಟಿಕೊಂಡು ಯಾತ್ರೆ ಹೊರಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಇದು ಕೊನೆಯ ಚುನಾವಣೆ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರು ,ಫೆಬ್ರವರಿ 6 : ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಅವರು ನಿದ್ದೆಯಲ್ಲಿಯೂ ಮೋದಿ ಹಾಗೂ ಬಿಜೆಪಿ ಕನಸು ಕಾಣುತ್ತಿದ್ದಾರೆ. ನಿದ್ದೆಯಿಂದ ಎದ್ದು ಏನೇನೋ ಮಾತನಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಭಾನುವಾರ ಜಿಲ್ಲೆಯ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಪರಿಣಾಮ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಮನಸಿನಲ್ಲಿ ಸೋಲಿನ ಭಯ ಕಾಡುತ್ತಿದೆ ಎಂದರು.
ಯಾರಿಗೆ ಸೋಲಿನ ಭಯ ಶುರುವಾಗುತ್ತದೋ ಅವರ ಮಾತಿನ ಮೇಲೆ ಹಿಡಿತ ಇರುವುದಿಲ್ಲ. ಹಾಗಾಗಿ ಅವರಿಬ್ಬರೂ ಏನೇನೋ ಮಾತನಾಡುತ್ತಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದು ಜನಕ್ಕೆ ಗೊತ್ತಾಗಿದ್ದು, ಜನರೇ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯರನ್ನು ಕಂಡರೆ ಡಿ.ಕೆ.ಶಿವಕುಮಾರ್ಗೆ ಆಗಲ್ಲ. ಮೊದಲು ಅವರ ಮನೆಯ ಜಗಳ ಸರಿಮಾಡಿಕೊಳ್ಳಲಿ. ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಇದ್ದಾಗ ಒಬ್ಬರದ್ದು ಆ ಕಡೆಮುಖ, ಇನ್ನೊಬ್ಬರದ್ದು ಈ ಕಡೆಮುಖ ಇರುತ್ತದೆ. ಇನ್ನು ಇಬ್ಬರೂ ಬೇರೆ ಬೇರೆ ಯಾತ್ರೆ ಮಾಡಿದರೆ ಉತ್ತರ ದಕ್ಷಿಣ ಆಗುತ್ತಾರೆ ಎಂದು ಲೇವಡಿ ಮಾಡಿದ ಆರ್.ಅಶೋಕ್, ಈ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಗಂಟುಮೂಟೆ ಕಟ್ಟಿಕೊಂಡು ಯಾತ್ರೆ ಹೊರಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಇದು ಕೊನೆಯ ಚುನಾವಣೆ ಎಂದರು.
ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ತೀರಾ..? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಇಬ್ಬರು ನಮ್ಮ ಪಕ್ಷಕ್ಕೆ ಬೇಡವೇ ಬೇಡ, ಪಕ್ಷಕ್ಕೆ ಅವರ ಅಗತ್ಯವೇ ಇಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಸರಕಾರ ರಚನೆಗೆ ಬೇಕಾದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ರಾಜ್ಯ ಉಸ್ತುವಾರಿಯಾಗಿ ಕೆ.ಅಣ್ಣಾಮಲೈ, ಅರುಣ್ ಜೆಟ್ಲಿ ಮತ್ತು ಧರ್ಮೇಂದ್ರ ಪ್ರಸಾದ್ ಅವರನ್ನು ನೇಮಿಸಿರುವುದನ್ನು ಸ್ವಾಗತಿಸುತ್ತೇನೆ. ಅಣ್ಣಾಮಲೈ ಅವರು ಖಡಕ್ ಅಧಿಕಾರಿ ಎಂಬ ಹೆಸರು ಪಡೆದಿದ್ದಾರೆ. ಜನರ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗಲಿದೆ.ಅಣ್ಣಮಲೈ ಅವರಿಗೆ ರಾಜಕೀಯ ಅನುಭವ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ್, ಅವರು ಉತ್ತಮ ಹೆಸರು ಗಳಿಸಿದ್ದಾರೆ. ಪಕ್ಕದ ರಾಜ್ಯದವರಾಗಿದ್ದಾರೆ. ಭಾರತ ಇಂದು ಒಂದು ಸಮುದಾಯ, ಒಂದು ಭಾಷೆಯಾಗಿ ಉಳಿದಿಲ್ಲ. ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಅಣ್ಣಮಲೈ ಅವರನ್ನು ಉಸ್ತುವಾರಿ ಮಾಡಿದ್ದನ್ನು ಸ್ವಾಗತಿಸುತ್ತೇನೆ ಎಂದರು.












Click it and Unblock the Notifications