Assembly election 2023: ಚಿಕ್ಕಮಗಳೂರಿನಲ್ಲಿ ತಮ್ಮ ಗ್ರಾಮ ವಾಸ್ತವ್ಯದ ಉದ್ದೇಶ ಬಿಚ್ಚಿಟ್ಟ ಸಚಿವ ಆರ್.ಅಶೋಕ್
ತಮ್ಮ ಗ್ರಾಮ ವಾಸ್ತವ್ಯದ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು ಅಂತಾ ಇಲ್ಲಿ ನೋಡಿ.
ಚಿಕ್ಕಮಗಳೂರು, ಚಿಕ್ಕಮಗಳೂರು, 05: ಈ ಹಿಂದೆ ಸಚಿವರುಗಳು ಪ್ರವಾಸಿ ಮಂದಿರಗಳಲ್ಲಿ ಕಾಫಿ ಕುಡಿದು ಅರ್ಜಿಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವುಗಳಿಗೆ ಸ್ಪಂದಿಸುತ್ತಿದ್ದೇನೆ. ಜಿಲ್ಲೆಯಲ್ಲಿ ನಡೆಸುತ್ತಿರುವ ಗ್ರಾಮ ವಾಸ್ತವ್ಯದ ಉದ್ದೇಶವೇ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗ್ರಾಮ ವಾಸ್ತವ್ಯಕ್ಕೆಂದು ಜಿಲ್ಲೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ರೈತರಿಗೆ ಅನುಕೂಲವಾಗಲು ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಳೀಕರಣ ಮಾಡಿ, ರೈತರು ಮೊಬೈಲ್ನಲ್ಲೇ ದಾಖಲೆ ಪಡೆದುಕೊಳ್ಳುವಂತಹ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ. ಗ್ರಾಮ ಲೆಕ್ಕಾಧಿಕಾರಿ ಪದನಾಮ ಬದಲಿಸಿ ಗ್ರಾಮ ಆಡಳಿತಾಧಿಕಾರಿ ಎಂದು ಮಾಡಲಾಗಿದೆ. ಪ್ರತಿ ಗ್ರಾಮದ ಆಡಳಿತಾಧಿಕಾರಿಗೆ ಟ್ಯಾಬ್ ನೀಡಲಾಗುತ್ತಿದ್ದು, ಆ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು.
ಚಿಕ್ಕಮಗಳೂರಿನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ, ವಿಸ್ತೀರ್ಣದ ವಿವರ ಇಲ್ಲಿದೆ
ಸಾರ್ವಜನಿಕರಿಂದ ಪಡೆದ ಅರ್ಜಿಗಳನ್ನು ಟ್ಯಾಬ್ ಮೂಲಕ ನೇರವಾಗಿ ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮ ಆಡಳಿತಾಧಿಕಾರಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಜನರ ಸಮಯ ಹಾಗೂ ಹಗರಣವನ್ನ ತಡೆಗಟ್ಟುವುದರ ಜೊತೆ ಸಕಾಲದಲ್ಲಿ ಕೆಲಸ-ಕಾರ್ಯಗಳು ಆಗಲಿವೆ ಎಂದರು. ಕಂದಾಯ ಇಲಾಖೆ ದಾಖಲೆ ಪತ್ರಗಳನ್ನು ಕಂಪ್ಯೂಟರೀಕರಣ ಮಾಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ 6 ತಾಲೂಕುಗಳಲ್ಲಿ ದಾಖಲೆ ಪತ್ರಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ರಾಜಕೀಯದ ಬಗ್ಗೆ ಮಾತನಾಡಲ್ಲ
ಕೇಂದ್ರ ಸರ್ಕಾರ ರೈತರ ಜಮೀನು, ಮನೆಗಳನ್ನು ಡ್ರೋನ್ ಮೂಲಕ ಸರ್ವೇ ಕಾರ್ಯ ಮಾಡುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ 280 ಕೋಟಿ ರೂಪಾಯಿ ನೀಡುತ್ತಿದ್ದು, ಇದರಿಂದ ರೈತರ ಜಮೀನು, ಮನೆ ಸರ್ವೆ ಮಾಡಿ ಸೂಕ್ತ ದಾಖಲೆಗಳನ್ನು ನೀಡಲು ಅನುಕೂಲವಾಗಲಿದೆ. ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದೇನೆ, ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ.
ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ
ಗ್ರಾಮ ವಾಸ್ತವ್ಯ ಮುಗಿದ ನಂತರ ರಾಜಕೀಯದ ಬಗ್ಗೆ ಮಾತನಾಡುತ್ತೇನೆ. ನಿಮ್ಮ ನೂರು ಪ್ರಶ್ನೆಗೆ ನಾನು ಇನ್ನೂರು ಉತ್ತರ ನೀಡಿಯೇ ಹೋಗುತ್ತೇನೆ. ಯಾರೆಲ್ಲ ಫಾರಂ ನಂಬರ್ 57ರ ಅರ್ಜಿಯಲ್ಲಿ ರೈತರಿಗೆ ಮೋಸ ಮಾಡಿದ್ದಾರೋ, ಸೂಕ್ತ ದಾಖಲೆ ನೀಡಿದರೇ ಅವರನ್ನು ಜೈಲಿಗೆ ಹಾಕುತ್ತೇವೆ ಎಂದು ಭರವಸೆ ನೀಡಿದರು.
ವಿದ್ಯಾನಿಧಿ ಯೋಜನೆಯ ವಿಸ್ತರಣೆ
ಹಾಗೆಯೇ ರೈತರ ಜೊತೆಗೆ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದರು. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಮತ್ತು ಅಂಬಳೆ ಹೋಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಮಕ್ಕಳಿಗೆ ಓದುವ ಹಿತದೃಷ್ಟಿಯಿಂದ ವಿದ್ಯಾನಿಧಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವುದಕ್ಕೆ ಧನಸಹಾಯ ಪಡೆದಿದ್ದಾರೆ. ಇನ್ನು ತುಂಬಾ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಲಾಗುವುದು ಎಂದರು.
ರೈತರಿಗೆ ಸರಿಯಾಗಿ ಸ್ಪಂದಿಸಬೇಕು
ಈ ಮೊದಲು ರೈತರ ಮಕ್ಕಳಿಗೆ ಮಾತ್ರ ವಿದ್ಯಾನಿಧಿ ನೀಡಲಾಗುತ್ತಿತ್ತು. ಆದರೆ ಈಗ ರೈತರ ಜೊತೆಗೆ ಕೂಲಿ ಕಾರ್ಮಿಕ ಮಕ್ಕಳಿಗೂ ವಿದ್ಯಾನಿಧಿ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ವಿಸ್ತರಿಸಲಾಗುವುದು. ವಿದ್ಯಾರ್ಥಿಗಳಿಗೆ ಹೈಸ್ಕೂಲ್, ಕಾಲೇಜ್, ಎಂಬಿಬಿಎಸ್, ಇಂಜಿನಿಯರಿಂಗ್ ಓದುವುದಕ್ಕೆ ವಿದ್ಯಾನಿಧಿ ಮೂಲಕ ಸಹಾಯ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಕಚೇರಿಗೆ ರೈತರು ಬಂದಾಗ ಸೌಜನ್ಯದಿಂದ ಮಾತನಾಡಿ ಪರಿಹಾರ ಕೊಡುವ ಕೆಲಸವಾಗಬೇಕು ಎಂದರು.