ಚಿಕ್ಕಮಗಳೂರು; ಡಿಸಿ ಕಛೇರಿ ಬಳಿ ಹಿಂದೂ ಸಂಘಟನೆಗಳಿಂದ ಹೋಮ
ಚಿಕ್ಕಮಗಳೂರು, ಜನವರಿ 22: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದಲ್ಲಿ ರಾಮ ತಾರಕ ಹೋಮ ನಡೆಸಲು ತಯಾರಿ ನಡೆದಿತ್ತು. ಆದರೆ ಜಿಲ್ಲಾಡಳಿತ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.
ಸೋಮವಾರ ಶ್ರೀ ರಾಮನ ಫೋಟೋ ಇಟ್ಟು ಹಿಂದೂ ಸಂಘಟನೆ ಕಾರ್ಯಕರ್ತರು ರಾಮ ಭಜನೆ ಮಾಡುತ್ತಾ, ರಾಮ ತಾರಕ ಹೋಮವನ್ನು ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಸಲು ಮುಂದಾಗಿದ್ದರು. ಆದರೆ ಚಿಕ್ಕಮಗಳೂರು ಜಿಲ್ಲಾಡಳಿತ ಇದಕ್ಕೆ ನಿರ್ಬಂಧ ಹೇರಿತು.

ನಿರ್ಬಂಧ ವಿಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದರು. ಪೀಠದ ತಾತ್ಕಾಲಿಕ ಹೋಮ ಮಂಟಪಕ್ಕೆ ಪೊಲೀಸರು ಬೀಗ ಹಾಕಿದರು. ಇದರಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಅಲ್ಲದೇ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.
ಡಿಸಿ ಕಛೇರಿ ಮುಂದೆಯೇ ಹೋಮ; ರಾಮ ತಾರಕ ಹೋಮಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ನಿರ್ಬಂಧ ಹೇರಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಿಂದೂ ಕಾರ್ಯಕರ್ತರು ರಾಮನ ಜಪ ಮಾಡಿದರು. ಶ್ರೀ ರಾಮನ ಭಾವ ಚಿತ್ರವಿಟ್ಟು ಪ್ರತಿಭಟನೆ ಮಾಡಿದರು.
ಡಿಸಿ ಕಛೇರಿ ಬಳಿ ಹೋಮ ಹೋಮಕುಂಡವನ್ನು ಇಟ್ಟು ಹೋಮ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅದನ್ನು ತೆಗೆದುಕೊಂಡು ಹೋದರು. ಆಗ ಕೃತಕ ಹೋಮಕುಂಡ ನಿರ್ಮಿಸಿದ ಕಾರ್ಯಕರ್ತರು ಕರ್ಪೂರ, ಗ್ರಂಥಿಕೆ ವಸ್ತುಗಳನ್ನು ಸುಟ್ಟು ಹೋಮ ಮಾಡಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಯಿತು. ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ದತ್ತಪೀಠ ಚಲೋ ಹೊರಟರು.
ಈ ಸಮಯದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಮುಂದಾದರು. ಆಗ ಸಂಘಟನೆ ಕಾರ್ಯಕರ್ತರ ಮತ್ತೊಂದು ತಂಡ ಡಿಸಿ ಕಛೇರಿಗೆ ನುಗ್ಗಿತು. ರಸ್ತೆಯಲ್ಲಿ ಬಿದ್ದು ಹೊರಳಾಡಿದ ಸಂಘಟನೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.












Click it and Unblock the Notifications