ಮೂಡಿಗೆರೆಯಲ್ಲಿ ಗಾಂಜಾ ಸಾಗಿಸುತ್ತಿದ್ದವರ ಬಂಧನ; 50 ಕೆ.ಜಿ. ಗಾಂಜಾ ವಶ
ಚಿಕ್ಕಮಗಳೂರು, ಜುಲೈ 11: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಬಳಿಯ ಮೇಲುಪೇಟೆ ಮಸೀದಿ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Recommended Video
ಬಂಧಿತರಿಂದ ಅಂದಾಜು 12 ಲಕ್ಷಕ್ಕೂ ಅಧಿಕ ಮೌಲ್ಯದ 50 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮೋಹಿದ್ ಖಾನ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭಾ ಬಂಧಿತ ಆರೋಪಿಗಳು.
10 ಜನರ ತಂಡ: ಬಂಧಿತ ಆರೋಪಿಗಳಿಂದ 50 ಕೆ.ಜಿ. ಗಾಂಜಾ, ಕಾರು ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಮಾಯಾಜಾಲದಲ್ಲಿ 10ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಂಡದ ಸದಸ್ಯರು ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೇರು ಬಳಿಯ ಶೇಖರ್ ಎಂಬುವರಿಂದ 80 ಕೆ.ಜಿ. ಗಾಂಜಾ ಸೊಪ್ಪನ್ನು ತಂದಿದ್ದಾರೆ. ಅದರಲ್ಲಿ 30 ಕೆ.ಜಿ. ಸೊಪ್ಪನ್ನು ಹಾಸನ ಹಾಗೂ ಸಕಲೇಶಪುರದಲ್ಲಿ ಮಾರಾಟ ಮಾಡಿದ್ದಾರೆ. ಉಳಿದ 50 ಕೆ.ಜಿಯನ್ನು ಮಂಗಳೂರಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೊಂಡೊಯ್ಯುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮಾರುತಿ 800 ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲೆಯ ಸಿಇಎನ್ ಠಾಣೆ ಇನ್ ಸ್ಪೆಕ್ಟರ್ ರಕ್ಷಿತ್, ಪಿಎಸ್ಐ ರಮ್ಯಾ ಹಾಗೂ ಗೋಣಿಬೀಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.












Click it and Unblock the Notifications