ಈ ಇಬ್ಬರು ನಕ್ಸಲರ ತಲೆಗೆ 2 ಲಕ್ಷ ರೂ.ಇನಾಮು ಘೋಷಿಸಿದ ಎನ್.ಐ.ಎ.
ಚಿಕ್ಕಮಗಳೂರು, ಫೆಬ್ರವರಿ 11: ಮಲೆನಾಡನ್ನು ಅಭಿವೃದ್ಧಿಗೊಳಿಸುವಂತೆ ನಕ್ಸಲರು ಬ್ಯಾನರ್ ಕಟ್ಟಿ, ಕರಪತ್ರ ಹಂಚುತ್ತಿದ್ದರು. ಇದೀಗ, ಪೊಲೀಸರು ಅದೇ ಹಾದಿ ಹಿಡಿದು, ಕರಪತ್ರ ಹಂಚೋ ತಲೆಗೆ ಇನಾಮಿಟ್ಟಿದ್ದಾರೆ.
ಹೌದು, ನಕ್ಸಲರು ಕಾಡಂಚಿನ ಗ್ರಾಮಕ್ಕೆ ಭೇಟಿ ಕೊಟ್ಟು, ಸಮಸ್ಯೆ ಆಲಿಸಿ ಬ್ಯಾನರ್ ಕಟ್ಟಿ, ಕರಪತ್ರ ಎಸೆಯುತ್ತಿದ್ದರು. ಪೊಲೀಸರು ಕೂಡ ಅದೇ ಮಲೆನಾಡಿನಾದ್ಯಂತ ಅಲ್ಲಲ್ಲೇ ಅವರಿಬ್ಬರ ಭಾವಚಿತ್ರ ಅಂಟಿಸಿ 'ಟು ಲ್ಯಾಕ್ಸ್ ಪ್ರೈಸ್' ಎಂದಿದ್ದಾರೆ.
ಅವರಿಬ್ಬರು ಯಾರು ಅಂತೀರಾ? ಆಕೆ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಾಕೆ. ಇನ್ನೊಬ್ಬ ಮಹೇಶ ಅಲಿಯಾಸ್ ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಾದಪ್ಪ. ರಾಯಚೂರು ಜಿಲ್ಲೆ ಅರೋಲಿ ಗ್ರಾಮದವ.
ಎನ್.ಐ.ಎ. (ರಾಷ್ಟ್ರೀಯ ತನಿಖಾ ಸಂಸ್ಥೆ) ಈಗ ಇವರಿಬ್ಬರ ಬಗ್ಗೆ ಮಾಹಿತಿ ಕೊಟ್ರೆ ಎರಡು ಲಕ್ಷ ನೀಡೋದಾಗಿ ಇನಾಮು ಇಟ್ಟು, ಮಾಹಿತಿ ಕೊಟ್ಟವರ ಹೆಸರನ್ನ ಗೌಪ್ಯವಾಗಿಡುತ್ತೇವೆಂದು, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದಲ್ಲಿ ಅಲ್ಲಲ್ಲೇ ಇವರ ಭಾವಚಿತ್ರದ ಭಿತ್ತಿಪತ್ರವನ್ನ ಅಂಟಿಸಿದ್ದಾರೆ.
ನಕ್ಸಲರು ಇಂದಿಗೂ ಮಲೆನಾಡ ಕುಗ್ರಾಮಗಳಿಗೆ ಬಂದಿದ್ದಾರೆ, ಇಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆಂಬ ಮಾಹಿತಿಯೂ ಇದೆ. ಆದ್ರೆ, ಸ್ಥಳಿಯರು ಪೊಲೀಸರ ಮನವಿಗೆ ಯಾವ ರೀತಿ ಸ್ಪಂದಿಸ್ತಾರೆ, ಅವರ ಬಗ್ಗೆ ಮಾಹಿತಿ ಕೊಡ್ತಾರ ಅನ್ನೋದು ಮಾತ್ರ ಯಕ್ಷ ಪ್ರಶ್ನೆಯೇ ಸರಿ. ಮುಂದೆ ಓದಿ...

ಸ್ಥಳೀಯರು ಮಾಹಿತಿ ನೀಡ್ತಾರಾ?
ಕೇರಳಾದ ವೆಲ್ಲಮುಂಡ ಮಾವೋವಾದಿ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ವ್ಯಕ್ತಿಗಳ ಬಂಧನಕ್ಕೆ ವಿಶೇಷ ನ್ಯಾಯಾಲಯ ವಾರಂಟ್ ಹೊರಡಿಸಿದೆ. ಹೀಗಾಗಿ, ಎನ್.ಐ.ಎ. ಇವರಿಬ್ಬರ ಬಗ್ಗೆ ಮಾಹಿತಿ ನೀಡಿದ್ರೆ ಎರಡು ಲಕ್ಷದ ಬಹುಮಾನ ಘೋಷಿಸಿದೆ. ಆದ್ರೆ, ಸ್ಥಳಿಯರು ಮಾಹಿತಿ ನೀಡ್ತಾರಾ ಅನ್ನೋದು ಮೂಲ ಸಮಸ್ಯೆಯಾಗಿದೆ.

ಏಳು ಪೊಲೀಸರನ್ನು ಹತ್ಯೆಗೈದಿದ್ರು
ಯಾಕಂದ್ರೆ, 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ, ನಕ್ಸಲ್ ಮಾಹಿತಿದಾರ ಎಂದು ಶೇಷಯ್ಯ ಎಂಬುವರನ್ನು ನಕ್ಸಲರು ಕೊಂದು ಹಾಕಿದರು. ಅಷ್ಟೇ ಅಲ್ಲದೆ, ತುಮಕೂರಿನ ಪಾವಗಡ ಎಂಬಲ್ಲಿ ಏಳು ಪೊಲೀಸರನ್ನು ಹತ್ಯೆಗೈದಿದ್ರು. ಈ ಘಟನೆ ಮಲೆನಾಡಿಗರಲ್ಲಿನ್ನು ಹಸಿರಾಗಿಸಿದೆ.

ಬೆಂಬಲಕ್ಕೆ ಪ್ರೇರೇಪಿಸಿದ್ದು ಇದೆ
ಆದ್ರೆ, ಎನ್.ಐ.ಎ ಪ್ರಯತ್ನಕ್ಕೆ ಸ್ಥಳೀಯರು ಸಹಕರಿಸಬೇಕಾಗಿದೆ. ಯಾಕಂದ್ರೆ, ನಕ್ಸಲರಿಂದ ಸಮಸ್ಯೆಗೊಳಗಾದವರು ಇದ್ದಾರೆ. ಕಾಡಂಚಿನ ಗ್ರಾಮಗಳ ಮನೆಗಳಲ್ಲಿ ಹಣ, ದಿನಸಿ ಪದಾರ್ಥಗಳನ್ನ ಹೊತ್ತೊಯ್ದು ಜೀವ ಬೆದರಿಕೆ ಹಾಕಿದ್ದು ಇದೆ. ನಕ್ಸಲರ ಬೆಂಬಲಕ್ಕೆ ಪ್ರೇರೇಪಿಸಿದ್ದು ಇದೆ.

ಮಾಹಿತಿ ನೀಡಿದ್ರೆ ಒಳ್ಳೆಯದು
ಪೊಲೀಸರಿಗೆ ಮಾಹಿತಿ ನೀಡಿದರೆಂದು ಕೆಲವರನ್ನು ನಕ್ಸಲರು ಕೊಂದ ಉದಾಹರಣೆಗಳಿರುವುದರಿಂದ ವ್ಯವಸ್ಥೆಯ ಪರ ಇರೋರಿಗೆ ವಿರುದ್ಧ ಇರೋರ ಬಗ್ಗೆ ಮಾಹಿತಿ ನೀಡೋದು ಒಳ್ಳೆಯದು ಅನಿಸುತ್ತದೆ ಎಂಬುದು ಬಹುತೇಕರ ಅಭಿಪ್ರಾಯ.












Click it and Unblock the Notifications