ಕಾಂಗ್ರೆಸ್ನಿಂದ ದೇಶಕ್ಕೆ ಒಳ್ಳೆಯದಾಗೋದಂತೂ ದೂರದ ಮಾತು, ಮತ್ತೆ ಮೋದಿ ಜೀನೇ ಪ್ರಧಾನಿ ಆಗಬೇಕು ಎಂದ ಸಿ.ಟಿ.ರವಿ
ಚಿಕ್ಕಮಗಳೂರು, ಸೆಪ್ಟೆಂಬರ್, 08: ಲೋಕಸಭಾ ಚುನಾವಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಿ.ಟಿ.ರವಿ ಅವರು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿ, ಮೈತ್ರಿಯಾಗುವ ಬಗ್ಗೆ ಮಾಧ್ಯಮದಲ್ಲಿ ಬರುವ ಎಲ್ಲಾ ಸುದ್ದಿಗಳು ಅಧಿಕೃತ ಅಂತಾ ಈಗಲೇ ಮುದ್ರೆ ಒತ್ತಲು ಸಾಧ್ಯವಿಲ್ಲ. ನಮ್ಮ ವರಿಷ್ಠರು ಅಳೆದು-ತೂಗಿ ನಿರ್ಣಯ ತೆಗೆದುಕೊಂಡಿರುತ್ತಾರೆ ಅನ್ನೋದು ನಮ್ಮ ನಂಬಿಕೆಯಾಗಿದೆ. ಅಲ್ಲದೆ ಮತ್ತೊಂದೆಂಡೆ ಕಾಂಗ್ರೆಸ್ನಿಂದ ದೇಶಕ್ಕೆ ಒಳ್ಳೆಯದು ಆಗುತ್ತದೆ ಎನ್ನುವುದು ದೂರದ ಮಾತು. ಆದ್ದರಿಂದ ಮತ್ತೆ ಮೋದಿಯವರೇ ಪ್ರಧಾನಿಯಾಗಬೇಕು ಎಂದರು.
ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ನಮ್ಮ ವರಿಷ್ಠರು ಅಧಿಕೃತವಾಗಿ ಪ್ರಕಟಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ದೇಶಕ್ಕೆ ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಆಗಬೇಕು. ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಅಪೇಕ್ಷೆಯಾಗಿದೆ ಎಂದರು. ಇನ್ನು ಈಗಿನ ಕಾಂಗ್ರೆಸ್ ತನ್ನ ಮೈತ್ರಿಕೂಟದ ಒಡಲಲ್ಲಿ ಸನಾತನ ಧರ್ಮದ ವಿಷಬೀಜಗಳನ್ನು ತುಂಬಿಕೊಂಡಿದೆ. ಅದಕ್ಕೆ ಉದಯಾನಿಧಿ ಸ್ಟಾಲಿನ್ ರಾಜ ಕೊಟ್ಟಿರುವ ಹೇಳಿಕೆಯನ್ನು ಹಲವು ಕಾಂಗ್ರೆಸ್ಸಿಗರು ಸಮರ್ಥಿಸಿಕೊಂಡಿದ್ದಾರೆ ಎಂದರು.

ಈಗ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಅಂತಾ ಗೊತ್ತಾಗಿ ದೂರ ಇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗಿರೋದು ಸನಾತನ ಧರ್ಮದ ದ್ವೇಷ, ಭಾರತದ ಬಗ್ಗೆ ಅಸಹನೆ. ಹೀಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತಾ ಹೆಸರಿಟ್ಟುಕೊಂಡ ಕಾಂಗ್ರೆಸ್ ಭಾರತದ ಮೇಲೆ ಅಸಹನೆ ಹೊಂದಿದೆ. ಕಾಂಗ್ರೆಸ್ಸಿಗರು ಲಾಲ್ ಬಾಲ್ ಪಾಲ್ ಮಾನಸೀಕತೆಗೂ ಬಂದಿಲ್ಲ. ಗಾಂಧಿ, ಸರ್ದಾರ್ ವಲ್ಲಾಬಾಯ್ ಪಟೇಲ್ ಮಾನಸೀಕತೆಯಿಂದ ದೂರ ಹೋಗಿದ್ದಾರೆ ಎಂದರು.
ರಾಜ್ಯದ ಈಗ ಇರೋದು ಎ ಹೋ ಹ್ಯೂಂ... ಅಂಟಾನಿಯಾ ಮೈನೋ ಮಾನಸೀಕತೆ ಪಾರ್ಟಿ ಅನ್ನೋದು ಅರ್ಥ ಆಗುತ್ತಿದೆ. ಇವರಿಂದ ದೇಶಕ್ಕೆ ಒಳ್ಳೆಯದು ಆಗುವುದು ಬಹಳ ದೂರದ ಮಾತು. ಸಂವಿಧಾನದ ಆಶಯಗಳಿಗೂ ತದ್ವಿರುದ್ಧವಾಗಿರುವ ಪಾರ್ಟಿ, ಪ್ರಜಾಪ್ರಭುತ್ವವನ್ನು ಪಂಶಪಾರಂಪರ್ಯ ಅಂತಾ ಭಾವಿಸಿರುವ ಪಾರ್ಟಿ, ಜಾತ್ಯಾತೀತತೆ ಅಂದರೆ ಜಾತಿಯನ್ನು ಎತ್ತಿಕೊಟ್ಟುವುದು ಎಂದು ತಿಳಿದಿರುವ ಪಾರ್ಟಿ ಕಾಂಗ್ರೆಸ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.
JDS-BJP ಮೈತ್ರಿ ಬಗ್ಗೆ ಶೆಟ್ಟರ್ ಹೇಳಿದ್ದಿಷ್ಟು
ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೆಡಿಎಸ್ - ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ವ್ಯಂಗ್ಯವಾಡಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟ ವಿಚಾರ. ಹಿಂದೆಯೂ ಮೈತ್ರಿ ಮಾಡಿಕೊಳ್ಳುತ್ತೇವೆ ಅಂದರು. ನಂತರ ಅರ್ಧಕ್ಕೆ ಬ್ರೇಕ್ ಆಯ್ತು. ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಫೈಟ್ ಮಾಡಿದ್ದರು. ಈಗ ಮತ್ತೆ ಮೈತ್ರಿ ವಿಚಾರ ಮಾತಾಡುತ್ತಿದ್ದಾರೆ ಎಂದರು.
ಅನುಕೂಲವಿದ್ದಾಗ ಮೈತ್ರಿ ಮಾಡಿಕೊಳ್ಳುವುದು, ಅನಾನುಕೂಲವಾದಾಗ ಮೈತ್ರಿಯಿಂದ ಹಿಂದೆ ಸರಿಯುವುದು. ಈ ರೀತಿ ಮಾಡಿದಾಗ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಆಯಾ ಪಕ್ಷಗಳ ಕ್ರೆಡಿಬಿಲಿಟಿ ಸಹ ಹೋಗುತ್ತದೆ ಎಂದು ಹೇಳಿದರು.
ಮೈತ್ರಿ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದ ಯಾವಾಗಲೂ ದ್ವಂದ್ವ ನಿಲುವು ಅನುಸರಿಸುತ್ತದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ ಅಂತ ಆರೋಪ ಮಾಡಿದರು. ಒಂದೇ ತಿಂಗಳಲ್ಲಿ ಅವರನ್ನು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸೇರಿಸಿಕೊಂಡರು. ರಾಜಕೀಯ ಪಕ್ಷಕ್ಕೆ ಗಟ್ಟಿ ನಿರ್ಧಾರಗಳು ಇರಬೇಕು. ಇವತ್ತು ಟೀಕೆ ಮಾಡುವುದು. ನಾಳೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಏನರ್ಥವಿದೆ ಎಂದು ಪ್ರಶ್ನಿಸಿದರು.
ಮೈತ್ರಿ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು. ಆದರೆ ಬಿಜೆಪಿಯವರು ಬಂದ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಉಡುಪಿಯ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಮೊದಲು ತಮ್ಮಲ್ಲಿ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಮೇಲೆ ಏರುತ್ತಿದೆ. ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಕರ್ನಾಟಕ ಬಿಜೆಪಿಗೆ ಹೆದರಿಕೆ ಶುರುವಾಗಿದೆ. ಇಡೀ ದೇಶದಲ್ಲಿಯೂ ಬಿಜೆಪಿಗೆ ಇದೇ ಸ್ಥಿತಿ ಇದೆ. ತೆಲಂಗಾಣದಲ್ಲಿ ಕಾಂಗ್ರೆಸ್ ನಂಬರ್ ಟು ಸ್ಥಾನದಲ್ಲಿದೆ. ಚುನಾವಣೆ ಬರುವ ಬೆಳಗ್ಗೆ ನಂಬರ್ ಒನ್ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ ಎಂದರು.












Click it and Unblock the Notifications