ಮೂಡಿಗೆರೆ: ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರ ಬಂಧನ
ಚಿಕ್ಕಮಗಳೂರು, ಅಕ್ಟೋಬರ್, 24: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಜೈಲು ಪಾಲಾಗಿದ್ದಾರೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಬಂಧನವಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿಯೂ ಅಂತಹದ್ದೇ ಪ್ರಕರಣವೊಂದು ಹೊರಬಿದ್ದಿದೆ. ಜಿಲ್ಲೆಯ ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿಯು ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ಎಸ್ಕೇಪ್ ಆಗಿದ್ದಾರೆ.
ಭಾರತಿ ಬೈಲು ಬಳಿಯ ಕುಂಡ್ರ ಗ್ರಾಮದ ನಿವಾಸಿಯಾದ ಸತೀಶ್ ಹಾಗೂ ಹಲ್ಲೇಮನೆ ಕುಂದೂರು ನಿವಾಸಿ ಕೆ.ಎಸ್.ರಂಜಿತ್ ಬಂಧಿತ ಆರೋಪಿಗಳು. ಮೂಡಿಗೆರೆ ತಾಲೂಕಿನ ಕುಂಡ್ರ, ಹಲ್ಲೇಮನೆ ಗ್ರಾಮದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ಹುಲಿ ಉಗುರಿನ ಒಂದು ಡಾಲರ್ ಅನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

14 ದಿನಗಳ ಕಾಲ ನ್ಯಾಯಾಂಗ ಬಂಧನ
ಮತ್ತೊಂದೆಡೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಕುತ್ತಿಗೆಗೆ ಹುಲಿಯ ಉಗುರು ಹೊಂದಿರುವ ಲಾಕೆಟ್ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ಎರಡು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮನೆಯಿಂದಲೇ ಅವರನ್ನು ಬಂಧಿಸಲಾಗಿತ್ತು. ನಿನ್ನೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಎ.ಸಿ.ಜೆ.ಎಂ ನ್ಯಾಯಾಧೀಶರು 14 ದಿನಗಳ ಕಾಲ ಸಂತೋಷ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಅವರನ್ನು ಕಳುಹಿಸಲಾಗಿದೆ. ಸಂತೋಷ್ ಅವರಿಗೆ ಕೈದಿ ನಂಬರ್ ಕೂಡ ನೀಡಲಾಗಿದೆ.
ವರ್ತೂರ್ ಸಂತೋಷ್ ಅವರಿಗೆ ಕಾರಗೃಹ ಅಧಿಕಾರಿಗಳು ವಿಚಾರಣಾಧೀನ ಕೈದಿ ಸಂಖ್ಯೆ 10935 ಅನ್ನು ನೀಡಿದ್ದಾರೆ. ಕೋರ್ಟ್ಗೆ ರಜೆ ಇದ್ದ ಹಿನ್ನೆಲೆ ನ್ಯಾಯಾಧೀಶರ ನಿವಾಸಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನದ ಚೈನು ಮಾಡಿರುವ ಚಿನ್ನದಂಗಡಿ ಮಾಲೀಕನಿಗೆ ಅರಣ್ಯಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.












Click it and Unblock the Notifications