ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು: ನೇತ್ರದಾನ ಮಾಡಿದ ಪೋಷಕರು
ಚಿಕ್ಕಮಗಳೂರು, ಅಕ್ಟೋಬರ್ 31: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ವೈಷ್ಣವಿ (14) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಮೂಲತಃ ಉತ್ತರ ಭಾರತದವರಾದ ಮೃತ ವೈಷ್ಣವಿ ಹಾಗೂ ಕುಟುಂಬಸ್ಥರು ಮೂಡಿಗೆರೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶನಿವಾರ ಸಂಜೆ 9ನೇತರಗತಿ ವಿದ್ಯಾರ್ಥಿನಿ ವೈಷ್ಣವಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಗಳ ಸಾವಿನ ದುಃಖದಲ್ಲೂ ವೈಷ್ಣವಿ ಪೋಷಕರು ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ವೈಷ್ಣವಿ ನೇತ್ರಾದಾನ ಮಾಡುವ ಬಗ್ಗೆ ನಿರ್ಧಾರ ಅಂತಿಮಗೊಂಡ ಬಳಿಕ ಸ್ಥಳೀಯರು ಕೂಡಲೇ ಸಂಜೆ 7.30ರ ಸುಮಾರಿಗೆ ಚಿಕ್ಕಮಗಳೂರು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಆರೋಗ್ಯಾಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸದೇ, ಕಾಲಹರಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಮಧ್ಯರಾತ್ರಿ 12 ಗಂಟೆಯಾದರೂ ಆರೋಗ್ಯಾಧಿಕಾರಿಗಳು ಬಾರದ ಕಾರಣ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಮಗಳ ಸಾವಿನ ನೋವಲ್ಲೂ ಪೋಷಕರು ಸಾಮಾಜಿಕ ಕಳಕಳಿ ಮೆರೆದರೆ, ಆರೋಗ್ಯಾಧಿಕಾರಿಗಳು ಇಂತಹ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ರಾತ್ರಿ ಸುಮಾರು 1 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಆರೋಗ್ಯಾಧಿಕಾರಿಗಳು ನೇತ್ರಾದಾನದ ವಿಧಾನವನ್ನು ಮುಗಿಸಿದ್ದಾರೆ. ಮೃತ ವೈಷ್ಣವಿ ಪೋಷಕರು ತಮ್ಮ 14 ವರ್ಷದ ಮಗಳ ಸಾವಿನನಲ್ಲೂ, ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಮಗಳು ಮೃತಪಟ್ಟ ನೋವಿನಲ್ಲಿದ್ದ ತಂದೆ-ತಾಯಿ ತಮ್ಮ ಮಗಳ ಕಣ್ಣುಗಳಿಂದ ಬೇರೆಯವರ ಬಾಳು ಬೆಳಗಲಿ ಎಂದು ಆಶಿಸಿದ್ದಾರೆ. ಮೃತ ವೈಷ್ಣವಿ ಪೋಷಕರ ಕಾರ್ಯಕ್ಕೆ ಮೂಡಿಗೆರೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, 9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವುದಕ್ಕೆ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೂಲತಃ ಉತ್ತರ ಭಾರತದವರಾದ ವೈಷ್ಣವಿ ಮೃತದೇಹವನ್ನು, ನೇತ್ರದಾನದ ಬಳಿಕ ಆಕೆಯ ಸ್ವಂತ ಊರಿಗೆ ಪೋಷಕರು ಕೊಂಡೊಯ್ಯದಿದ್ದಾರೆ.












Click it and Unblock the Notifications