ಇದೇ ಮೊದಲ ಬಾರಿಗೆ ಬರಿದಾಯ್ತು ಇತಿಹಾಸ ಪ್ರಸಿದ್ಧ ಮದಗದ ಕೆರೆ, ಯಾವೆಲ್ಲ ಜಿಲ್ಲೆಗಳಿಗೆ ಆಪತ್ತು?
ಚಿಕ್ಕಮಗಳೂರು, ಜುಲೈ, 02: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಈಗಾಗಲೇ ರಾಜ್ಯದ ಹಲವೆಡೆ ಜಲಾಶಯಗಳು ಬರಿದಾಗುವ ಹಂತವನ್ನು ತಲುಪಿವೆ.ಅದೇ ರೀತಿ ಮಾಯದಂತ ಮಳೆ ಬಂದು ತುಂಬುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮದಗದ ಕೆರೆಗೆ ಇದೀಗ ನೀರಿಲ್ಲದೆ ಬರದ ಛಾಯೆ ಆವರಿಸಿದೆ. ಇನ್ನು ಇದೇ ಕೆರೆಯ ನೀರನ್ನೇ ನಂಬಿ ಬದುಕುತ್ತಿದ್ದ ಕಡೂರು ತಾಲೂಕಿನ ಜನರಿಗೆ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗುವುದಂತೂ ಗ್ಯಾರಂಟಿ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿರುವ ಮದಗದ ಕೆರೆ ಜನಪದದ ಬಾಯಲ್ಲಿ ಮೂಡಿದ ಅದ್ಭುತ ಪರಿಕಲ್ಪನೆಗೆ ಸಾಕ್ಷಿಯಾಗಿದೆ. ಈ ಕೆರೆಗೆ ಬರೋದೆ ಮಾಯದಂತ ಮಳೆ. ಅಂದರೆ ಇಲ್ಲಿ ಮಳೆ ಬಾರದಿದ್ದರೂ ಮುಳ್ಳಯ್ಯನಗಿರಿ, ದತ್ತಪೀಠದ ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆಯಿಂದ ಈ ಕೆರೆ ತುಂಬುತ್ತಿತ್ತು. ಆದರೆ ಈ ಬಾರಿ ಮಾಯದಂತ ಮಳೆ ಇಲ್ಲ. ಹಾಗೂ ಸಾಧಾರಣ ಮಳೆಯೂ ಬಾರದ ಕಾರಣ ಈ ಕೆರೆ ಸಂಪೂರ್ಣ ಬತ್ತಿಹೋಗಿದೆ.

ಇನ್ನು ಈ ಕೆರೆಯನ್ನೇ ನಂಬಿ ಬದುಕುತ್ತಿರುವ ಇಲ್ಲಿನ ಸುತ್ತಲಿನ 36 ಹಳ್ಳಿಗಳು ನೀರಿಗಾಗಿ ಹಾಹಾಕಾರ ಅನುಭವಿಸುವ ಆತಂಕವನ್ನು ಎದುರಿಸುತ್ತಿದ್ದಾರೆ. ಕೆರೆ ತುಂಬಿದರೆ ಇಡೀ ಕಡೂರು ತಾಲೂಕಿಗೆ ಕುಡಿಯುವ ನೀರಿನ ಬವಣೆ ತಪ್ಪಿಸುತ್ತಿತ್ತು. ಆದರೆ, ಈ ಬಾರಿ ಕೆರೆ ಖಾಲಿ ಆಗಿಯುವುದರಿಂದ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾದರೂ ಅಚ್ಚರಿಪಡೆಬೇಕಿಲ್ಲ ಎಂದು ಇಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಕೆರೆ ತುಂಬಿದರೆ ಕೇವಲ ಚಿಕ್ಕಮಗಳೂರು, ಕಡೂರಿಗೆ ಮಾತ್ರ ಅನುಕೂಲವಲ್ಲ. ಇಲ್ಲಿ ಕೋಡಿ ಬಿದ್ದು ಹರಿಯುವ ನೀರು ಚಿತ್ರದುರ್ಗದ ಮಾರಿಕಣಿವೆ ಡ್ಯಾಂಗೂ ಸೇರುತ್ತದೆ. ಹೀಗೆ ಈ ಕೆರೆ ಕೋಟೆನಾಡು ಚಿತ್ರದುರ್ಗದ ಜಿಲ್ಲೆಯ ಜೀವನಾಡಿಯೂ ಆಗಿದೆ. ಆದರೆ ಈಗ ಇದೆ ನೀರನ್ನೇ ನೆಚ್ಚಿಕೊಂಡಿದ್ದ ಜಾನುವಾರುಗಳು ಹಾಗೂ ಲಕ್ಷಾಂತರ ಜನ ನೀರಿನ ಹಾಹಾಕಾರ ಎದುರಿಸಲಿದ್ದಾರೆ.
2036 ಹೆಕ್ಟೇರ್ ವಿಸ್ತೀರ್ಣದ ಈ ಕೆರೆ 87 ಅಡಿ ಆಳವಿದೆ. ಇಷ್ಟು ದೊಡ್ಡ ಕೆರೆಯಲ್ಲಿ ಒಂದೇ ವರ್ಷಕ್ಕೆ ನೀರು ಸಂಪೂರ್ಣ ಖಾಲಿ ಆಗಿದೆ. ಇನ್ನು 15-20 ದಿನದಲ್ಲಿ ಮಳೆ ಬರದಿದ್ದರೆ ಸುತ್ತಮುತ್ತಲಿನ ಜನ-ಜಾನುವಾರುಗಳು, ಹೊಲಗದ್ದೆ-ತೋಟಗಳು ನೀರಿಲ್ಲದೆ ಹಾಹಾಕಾರ ಅನುಭವಿಸುವುದು ಗ್ಯಾರಂಟಿ.
ಒಟ್ಟಾರೆ ಈ ಕೆರೆ ಇತಿಹಾದಲ್ಲೇ ಈವರೆಗೂ ಬತ್ತಿರಲಿಲ್ಲ. 2016-17ರಲ್ಲಿ ಬರ ಬಂದಿದ್ದರೂ ಕೂಡ ಈ ಮಟ್ಟಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ. ಆದರೆ ಈ ಬಾರಿ ಮುಗಿಲೆತ್ತರದ ಘಟ್ಟ ಪ್ರದೇಶ ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ಮಳೆ ಇಲ್ಲದಿರುವುದರಿಂದ ಕೆರೆಗೆ ಒಂದು ಹನಿಯೂ ನೀರು ಬಂದಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ವೇಳೆಗಾಗಲೇ ಈ ಕೆರೆ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿತ್ತು. ಆದರೆ ಬಾರಿ ಇದು ಬತ್ತಿದ ಕಾರಣ ಪ್ರವಾಸಿಗರ ಸುಳಿವೇ ಇಲ್ಲದಂತಾಗಿದೆ.
ಬರಿದಾಗುತ್ತಿದೆ ಕೆಆರ್ಎಸ್ ಜಲಾಶಯ
ಅದೇ ರೀತಿ ಮಳೆ ಇಲ್ಲದ ಕಾರಣ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ ಕೂಡ ಬರಿದಾಗುವ ಹಂತವನ್ನು ತಲುಪಿದೆ. ಮುಂದಿನ ದಿನಗಳಲ್ಲಿ ಮುಂಗಾರು ಚೇತರಿಸಿಕೊಂಡು ಮಲೆನಾಡು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಜಲಾಶಯ ಭರ್ತಿಯಾಗುವುದು ಕಷ್ಟವೇನಲ್ಲ. ಕಳೆದ ಐದು ವರ್ಷಗಳಿಂದ ಮಲೆನಾಡಿನಲ್ಲಿ ಬರೀ ಮಳೆಯಲ್ಲ, ಮಹಾಮಳೆಯೇ ಸುರಿದಿತ್ತು. ಅದರಲ್ಲೂ 2018ರಿಂದ 20ರ ತನಕ ಮಹಾಮಳೆಯೇ ಸುರಿದು ಜನರನ್ನು ತಲ್ಲಣಗೊಳಿಸಿತ್ತು. ಪರಿಣಾಮ ಲಕ್ಷಾಂತರ ಕ್ಯೂಸೆಕ್ ನೀರು ಹರಿದುಬಂದು ಜಲಾಶಯನ್ನು ಸೇರಿತ್ತಲ್ಲದೆ, ಬಹುಬೇಗ ಜಲಾಶಯ ಭರ್ತಿಯಾಗುವುದರೊಂದಿಗೆ ಹೊರಕ್ಕೆ ನೀರು ಹರಿದು ಹೋಗಿತ್ತು.












Click it and Unblock the Notifications