Monsoon Rain: ಮುಂಗಾರು ವಿಕೋಪ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳೇನು?, ಇಲ್ಲಿದೆ ವಿವರ
ಚಿಕ್ಕಮಗಳೂರು, ಮೇ, 28: ಈಗಾಗಲೇ ಮುಂಗಾರು ಪೂರ್ವ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಮತ್ತೊಂದೆಡೆ ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಇದರಿಂದ ಯಾವುದೇ ರೀತಿಯ ಅನಾಹುತಗಳು ಆಗದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾದರೆ ಜಿಲ್ಲಾಧಿಕಾರಿ ನೀಡಿದ ಸೂಚನೆಗಳೇನು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮುಂಗಾರು ಮಳೆ ಮುನ್ಸೂಚನೆ ಇರುವುದರಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಫಿನಾಡಿನಲ್ಲಿ ಮಳೆ ಅಬ್ಬರ ಹೇಳತೀರದ್ದಾಗಿತ್ತು. ಇದರಿಂದ ಶತಮಾನಗಳ ಬದುಕು ಕಣ್ಣೆದುರೇ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಜೀವ ಹಾನಿಯೂ ಸಂಭವಿಸಿತ್ತು. ಹಾಗಾಗಿ, ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತದೆ ಎಂಬ ಮಾಹಿತಿಯಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ.

ಅಪಾಯದ ಸ್ಥಳಗಳ ವಿವರ
ಈಗಾಗಲೇ ಮುಂಜಾಗ್ತತಾ ಕ್ರಮವಾಗಿ ಅಪಾಯದ ಗ್ರಾಮಗಳು ಹಾಗೂ ಸ್ಥಳಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗಿದೆ. 47 ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ಗ್ರಾಮಗಳನ್ನು ಅಪಾಯದ ಗ್ರಾಮಗಳೆಂದು ಗುರುತಿಸಲಾಗಿದೆ. ಎನ್.ಆರ್.ಪುರ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನು ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ.
ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆ ಆದರೂ ಅಧಿಕಾರಿಗಳು ಅಲ್ಲಿರಬೇಕೆಂದು ಸೂಚಿಸಲಾಗಿದೆ. ಹಾಗೆಯೆ 64 ಜೆಸಿಬಿ, 65 ಹಿಟಾಚಿ, 83 ಟ್ರ್ಯಾಕ್ಟರ್, 155 ಟಿಪ್ಪರ್ಗಳನ್ನು ಪ್ರವಾಹವನ್ನು ಎದುರಿಸಲು ಸನ್ನದ್ಧವಾಗಿರುವಂತೆ ಆದೇಶಿಸಿದೆ. ಜೊತೆಗೆ, ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನು ನಿಯೋಜಿಸಿದೆ.
ಇನ್ನು ಮಳೆಯ ಪ್ರಮಾಣ ಹೇಗಿರುತ್ತದೆಯೋ ಎಂಬ ಕಾರಣದಿಂದ ಜಿಲ್ಲಾಡಳಿತ 47 ಗ್ರಾಮ ಪಂಚಾಯಿತಿಯ 77 ಗ್ರಾಮಗಳನ್ನು ಅಪಾಯದ ಗ್ರಾಮಗಳೆಂದು ಗುರುತಿಸಿದ್ದು, ಈ ಮೂಲಕ ಒಟ್ಟು 108 ಅಪಾಯದ ಸ್ಥಳಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಮಳೆ ಹೆಚ್ಚಾಗಿ ಸಾವು-ನೋವು ಸಂಭವಿಸುವ ಸಂದರ್ಭ ಬಂದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾದ್ಯಂತ 40ಕ್ಕೂ ಹೆಚ್ಚು ಸುರಕ್ಷಿತ ಪ್ರದೇಶವನ್ನೂ ಗುರುತು ಮಾಡಲಾಗಿದೆ.
ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶ
ಚಾರ್ಮಾಡಿ ಘಾಟ್ ಸೇರಿದಂತೆ ಜಲಪಾತ ಹಾಗೂ ಅಪಾಯದ ಸ್ಥಳಗಳಲ್ಲಿ ಜನಸಾಮಾನ್ಯರು-ಪ್ರವಾಸಿಗರು ಮೋಜು-ಮಸ್ತಿ ಮಾಡಲು ಹೋಗಿ ಅಪಾಯಕ್ಕೆ ಸಿಲುಕಬಹುದು. ಹಾಗಾಗಿ, ಅಂತಹ ಸ್ಥಳಗಳಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಳೆ ಹೆಚ್ಚಾಗಿ ಆಪಾಯದ ಮುನ್ಸೂಚನೆ ಸಿಕ್ಕರೆ ಕೂಡಲೇ ಜನಸಾಮಾನ್ಯರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಆದೇಶಿಸಿದ್ದಾರೆ.
ಒಟ್ಟಾರೆ, ಕಳೆದ ಮೂರ್ನಾಲ್ಕು ವರ್ಷದ ಮಳೆ ಮಲೆನಾಡಿಗರ ಬದುಕನ್ನೇ ಮುಳುಗಿಸಿಬಿಟ್ಟಿತ್ತು. ಹಾಗೆಯೆ ಎಲ್ಲಾ ಇದ್ದವರು ಎಲ್ಲಾ ಕಳೆದುಕೊಂಡು ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ಬಳಿಕ ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನಪ್ರತಿನಿಧಿಗಳು ಮಳೆ ಮುಗಿದ ನಂತರ ಕೊಟ್ಟ ಮಾತನ್ನು ಮರೆತಿದ್ದು ದುರಂತವಾಗಿದೆ.
ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ಮನೆ-ಮಠ, ಆಸ್ತಿ-ಪಾಸ್ತಿ ಎಲ್ಲಾ ಕಳೆದುಕೊಂಡ ಮೇಲೆ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಜೀವ ಉಳಿಸಿಕೊಂಡು ಉಪಯೋಗವೇನು ಎಂಬ ಪ್ರಶ್ನೆ ಮಲೆನಾಡಿಗರದ್ದಾಗಿದೆ. ಹಾಗಾಗಿ ಸರ್ಕಾರ ಪ್ರವಾಹದಿಂದ ಜನರನ್ನು ರಕ್ಷಣೆ ಮಾಡುವುದರ ಜೊತೆ ಎಲ್ಲಾ ಕಳೆದುಕೊಂಡವರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ನೀಡಲಿ ಅನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.












Click it and Unblock the Notifications