ಮಲೆನಾಡಿನ ಕಾಫಿ ಬೆಳೆಗಾರರಿಗೆ ತಲೆನೋವಾದ ವಾನರ ಸೈನ್ಯ
ಚಿಕ್ಕಮಗಳೂರು, ಅಕ್ಟೋಬರ್ 8: ಕಾಫಿ ಬೆಳೆಯುವ ರೈತರಿಗೆ ಒಂದಲ್ಲಾ ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇದೆ. ಒಂದೆಡೆ ಅತಿವೃಷ್ಟಿಗೆ ತುತ್ತಾಗಿ ಈಗಾಗಲೇ ಮಲೆನಾಡಿನ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ರೋಗ ಬಾಧೆ ರೈತರನ್ನು ಕಂಗಾಲಾಗಿಸಿದೆ.
ಇದರ ಜೊತೆಗೆ ಕೂಲಿ ಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಇದರ ಬೆನ್ನಲ್ಲೆ ಈಗ ಕಾಫಿ ಹಣ್ಣುಗಳ ಮೇಲೆ ವಾನರ (ಮಂಗಗಳ) ದಾಳಿ ಶುರುವಾಗಿದ್ದು, ಮತ್ತೊಂದು ಸಂಕಷ್ಟ ಮಲೆನಾಡಿನ ಕಾಫಿ ಬೆಳೆಗಾರರರಿಗೆ ತಲೆದೂರಿದೆ.
ಮಲೆನಾಡಿನ ಮೂಡಿಗೆರೆ ಭಾಗದಲ್ಲಿ ಹೆಚ್ಚು ಕಾಫಿ ಬೆಳೆಯಲಾಗುತ್ತಿದ್ದು, ತಾಲೂಕಿನ ಗೋಣಿಬೀಡು, ಕಸ್ಕೇಬೈಲು, ಚಿನ್ನಿಗ, ಕನ್ನೇಹಳ್ಳಿ, ಕಿರುಗುಂದ, ದೇವವೃಂದ, ಜಾಣಿಗೆ, ಊರುಬಗೆ, ಬೃರಾಪುರ, ಹೊಸಕೆರೆ, ಮೂಲರಹಳ್ಳಿ, ತತ್ಕೋಳ, ಕುಂದೂರು, ಮಾಕೋನಹಳ್ಳಿ, ನಂದಿಪುರ, ಬಣಕಲ್, ಬಾಳೂರು, ಕಳಸ ಭಾಗದ ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಹಣ್ಣು ಕಟಾವಿಗೆ ಸಿದ್ಧಗೊಳ್ಳುತ್ತಿದ್ದಂತೆ ಮಂಗಗಳು ದಾಳಿ ನಡೆಸುತ್ತಿವೆ.

ಕಾಫಿಯನ್ನು ಸಂಪೂರ್ಣವಾಗಿ ಕಿತ್ತು ಬಾಯಿಗೆ ಹಾಕಿಕೊಳ್ಳುತ್ತಿವೆ
ಇದುವರೆಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಮಂಗಗಳು, ದಿಢೀರ್ ಎಂಬಂತೆ ಕಾಫಿ ತೋಟಗಳಿಗೆ ಲಗ್ಗೆಯಿಡಲು ಆರಂಭಿಸಿವೆ. ಕಾಫಿ ಗಿಡದ ರೆಕ್ಕೆಯಲ್ಲಿ ಹಣ್ಣಿಗೆ ತಿರುಗಿರುವ ಕೆಂಪು ಬಣ್ಣದ ಕಾಫಿಯನ್ನು ಸಂಪೂರ್ಣವಾಗಿ ಕಿತ್ತು ಬಾಯಿಗೆ ಹಾಕಿಕೊಳ್ಳುತ್ತಿವೆ. ಒಂದೊಂದು ತೋಟದಲ್ಲೂ 100ಕ್ಕಿಂತ ಅಧಿಕ ಸಂಖ್ಯೆಯ ಮಂಗಗಳು ತಂಡೋಪತಂಡವಾಗಿ ಮರದಿಂದ ಮರಕ್ಕೆ ಹಾರಿ, ನುಗ್ಗಿ ಕಾಫಿ ಬೆಳೆಯನ್ನು ಹಾಳು ಮಾಡುತ್ತಿವೆ.

ಜನರಿಗೂ ಹೆದರದೇ ನಿರಂತರವಾಗಿ ಓಡಾಡುತ್ತಿವೆ
ಹಿಂದೆ ಅರಣ್ಯ ಪ್ರದೇಶದ ಬದಿಯ ತೋಟಗಳಿಗೆ ಮಾತ್ರ ಮಂಗಗಳು ಲಗ್ಗೆಯಿಟ್ಟು ಕಾಫಿ ಬೆಳೆಯನ್ನು ತಿನ್ನುತ್ತಿದ್ದವು. ಆಗ ಬೆಳೆಗಾರರು ಪಟಾಕಿ ಮತ್ತು ದಡಾಕಿ ಸಿಡಿಸಿ ಶಬ್ಧ ಬಂದಾಗ ಮಂಗಗಳು ಪಲಾಯನ ಮಾಡುತ್ತಿದ್ದವು. ಈಗ ಅವುಗಳಿಗೂ ಹೆದರುತ್ತಿಲ್ಲ. ಬಹುತೇಕ ಕಾಫಿ ತೋಟ ಮತ್ತು ಜನವಸತಿ ಪ್ರದೇಶದಲ್ಲೇ ಜನರಿಗೂ ಹೆದರದೇ ನಿರಂತರವಾಗಿ ಓಡಾಡುತ್ತಿವೆ.

ಸುಳಿಯನ್ನು ತಿಂದು ಗಿಡವನ್ನೇ ನಾಶ ಮಾಡುತ್ತವೆ
ಕಾಫಿ ಮಾತ್ರವಲ್ಲದೇ ಕಿತ್ತಲೆ, ಅನಾನಾಸ್ ಬೆಳೆಯನ್ನು ತಿನ್ನುತ್ತಿದ್ದು, ಬಾಳೆ, ಏಲಕ್ಕಿ, ಅಡಕೆ, ತೆಂಗಿನ ಗಿಡಗಳ ಸುಳಿಯನ್ನು ತಿಂದು ಗಿಡವನ್ನೇ ನಾಶ ಮಾಡುತ್ತವೆ. ಮಂಗಗಳ ಉಪಟಳ ಹೆಚ್ಚಾಗಿರುವುದರಿಂದ ಅವುಗಳನ್ನು ಗುತ್ತಿಗೆ ಆಧಾರದಲ್ಲಿ ಹಿಡಿದು ಸಾಗಿಸುವವರನ್ನು ಕರೆಸಿದಾಗ ಅವರು, ಬಲೆ ಬೀಸಿ ಅವುಗಳನ್ನು ವಾಹನಗಳಲ್ಲಿ ತುಂಬಿಸಿ ಕೊಂಡೊಯ್ದು ಬೇರೆ ಊರಿನ ತೋಟಗಳಿಗೆ ಬಿಡುತ್ತಾರೆ.
Recommended Video

ಹುಲಿ ಚಿತ್ರ ಕಂಡರೆ ಮಾತ್ರ ಭಯ
ಇದರಿಂದ ಎಲ್ಲೆಡೆ ಮಂಗಗಳ ಕಾಟ ಹೆಚ್ಚಾಗಿದೆ. ಹಾಗಾಗಿ ಹುಲಿಯು ಮಂಗಗಳನ್ನು ಹಿಡಿದು ಗಾಯಗೊಳಿಸುವ ಚಿತ್ರವಿರುವ ಬ್ಯಾನರ್ ಗಳನ್ನು ಬೆಳೆಗಾರರು ಕಾಫಿ ತೋಟದಲ್ಲಿ ಅಳವಡಿಸಲು ಆರಂಭಿಸಿದ್ದಾರೆ. ಅದನ್ನು ನೋಡಿ ಹುಲಿ ನಮ್ಮನ್ನು ಹಿಡಿದು ತಿನ್ನುತ್ತವೆ ಎಂಬ ಭಯದಿಂದ ತೋಟದಿಂದ ಪಲಾಯನ ಮಾಡುತ್ತವೆ. ಈ ಚಿತ್ರವಿರುವ ಬ್ಯಾನರ್ ಮಾತ್ರ ಸದ್ಯಕ್ಕೆ ಕಾಫಿ ಬೆಳೆಗಾರರಿಗೆ ವರದಾನವಾಗಲಿದೆ.












Click it and Unblock the Notifications