ಚಿಕ್ಕಮಗಳೂರು: ಎಂಎಲ್ಸಿ ಬೋಜೇಗೌಡರಿಗೂ ಕೊರೊನಾ ವೈರಸ್ ಸೋಂಕು
ಚಿಕ್ಕಮಗಳೂರು, ಜುಲೈ 8: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮುಂದುವರಿದಿವೆ. ಪೊಲೀಸ್ ಆಯ್ತು, ಕೈದಿ ಆಯ್ತು, ಡಾಕ್ಟರ್ ಆಯ್ತು, ಕೆಎಸ್ಆರ್ಟಿಸಿ ಡ್ರೈವರ್, ಕಂಡಕ್ಟರೂ ಆಯ್ತು. ಇದೀಗ ಜನಪ್ರತಿನಿಧಿಗಳ ಸರದಿ. ಜಿಲ್ಲೆಯಲ್ಲಿ ಎಂಎಲ್ಸಿ ಸೇರಿದಂತೆ ಪ್ರಮುಖ ನಾಯಕರುಗಳನ್ನು ಕೊರೊನಾ ವೈರಸ್ ಸುತ್ತಿಕೊಳ್ಳುತ್ತಿದೆ.
ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅವರಿಗೂ ಮಹಾಮಾರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2 ದಿನಗಳ ಹಿಂದೆ ಬಿಜೆಪಿ ಎಂಎಲ್ಸಿ ಎಂ.ಕೆ ಪ್ರಾಣೇಶ್ ದಂಪತಿಗೆ ಕೊರೊನಾ ವೈರಸ್ ದೃಢವಾಗಿತ್ತು. ಹೀಗೆ ಒಬ್ಬೊಬ್ಬ ಜನಪ್ರತಿನಿಧಿಯಲ್ಲೂ ಕೊರೊನಾ ಸೋಂಕು ಕಂಡುಬರುತ್ತಿರುವುದು ರಾಜಕಾರಣಿಗಳ ವಲಯದಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.

ಯಾರಿಂದ ಯಾರಿಗೆ ಕೊರೊನಾ ಸೋಂಕು ತಗುಲುತ್ತಿದೆ ಎನ್ನುವುದು ಗೊತ್ತಾಗದ ರೀತಿಯಲ್ಲಿ ವೈರಸ್ ಹರಡುತ್ತಿದೆ. ಸದ್ಯ ಕೊರೊನಾ ಸೋಂಕಿತರಾಗಿರುವ ವಿಧಾನ ಪರಿಷತ್ ಸದಸ್ಯರ ಜೊತೆ ಹಲವರು ಸಂಪರ್ಕ ಹೊಂದಿದ್ದು, ಜೆಡಿಎಸ್ ಮುಖಂಡರು, ಕಾರ್ಯಕರ್ತರಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕಬಂಧ ಬಾಹುವನ್ನು ಕೊರೊನಾ ವೈರಸ್ ಚಾಚುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಶತಕದತ್ತ ದಾಪುಗಾಲಿಡುತ್ತಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications