ದತ್ತ ಭಕ್ತರು ಭಿಕ್ಷಾಟನೆ ಮಾಡ್ತಾರೆಂಬ ಸಿಎಂ ಹೇಳಿಕೆಗೆ ಶಾಸಕ ಸಿಟಿ ರವಿ ಕಿಡಿ
Recommended Video

ಚಿಕ್ಕಮಗಳೂರು, ಡಿಸೆಂಬರ್ 21: ದತ್ತಭಕ್ತರು ಭಿಕ್ಷಾಟನೆ ಮಾಡ್ತಾರೆಂಬ ಸಿಎಂ ಹೇಳಿಕೆಗೆ ಸಿ.ಟಿ.ರವಿ ಕಿಡಿಕಾರಿದ್ದಾರೆ. ಯಾರೇ ಆದ್ರೂ ಮತ್ತೊಬ್ಬರ ಭಾವನೆಗೆ ಅಗೌರವದ ರೀತಿಯಲ್ಲಿ ಮಾತಾನಾಡಬಾರದು. ನೋಯಿಸುವ ಮಾತು ಅವರಿಗೆ ಸಂತೋಷ ತಂದ್ರು, ಇನ್ನೊಬ್ಬರಿಗೆ ನೋವು ತರುತ್ತೆ ಎಂದು ತಿಳಿಸಿದ್ದಾರೆ.
ಓಟಿನ ಆಸೆಗೆ ಜೊಲ್ಲು ಸುರಿಸಿ, ದತ್ತಪೀಠ ಆಂದೋಲನಕ್ಕೆ ಅವಹೇಳನ ಮಾಡುವುದ ಜನ ಸಹಿಸಲ್ಲ. ಕುಮಾರಸ್ವಾಮಿ ಅವಹೇಳನ ಮಾಡುವಂತಹ ಕೆಲಸ ಮಾಡಬಾರದು. ನೀವು ಸ್ವಾರ್ಥದಿಂದ ದೇವಸ್ಥಾನಕ್ಕೆ ಹೋಗಬಹುದು, ನಾವು ಸಮಾಜದ ಹಿತ ಹಾಗೂ ದತ್ತಪೀಠವನ್ನು ಪಡೆಯುವ ಸಂಕಲ್ಪದಿಂದ ಹೋಗ್ತೀವಿ. ಅಪಮಾನ ಮಾಡುವುದರಿಂದ ನಿಮಗೆ ಯಾವ ರೀತಿ ಸಂತೃಪ್ತಿ ಸಿಕುತ್ತೆ ನೀವೇ ಯೋಚನೆ ಮಾಡಿ ಎಂದು ಹೇಳಿದ್ದಾರೆ.
ನಿನ್ನೆಯಿಂದ ಆರಂಭವಾದ ದತ್ತ ಜಯಂತಿ ಅಂಗವಾಗಿ ಇಂದು ಶುಕ್ರವಾರ ಮಾಲಾಧಾರಿ ಶಾಸಕ ಸಿ.ಟಿ ರವಿ ಭಿಕ್ಷಾಟನೆ ಮಾಡಿದರು. ಚಿಕ್ಕಮಗಳೂರು ನಗರದ ನಾರಾಯಣಪುರದ 20ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿದ್ರು. ಇದೇ ವೇಳೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಸಾಥ್ ನೀಡಿದ್ರು. ಮಾಲಾಧಾರಿ ದತ್ತ ಭಕ್ತರು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಭಕ್ತಾಧಿಗಳನ್ನು ದತ್ತ ಜಯಂತಿಗೆ ಆಹ್ವಾನಿಸಿದ್ರು.

ನಾಳೆ ಶನಿವಾರ ಇರುಮುಡಿ ಹೊತ್ತ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಾತ್ರೇಯನಿಗೆ ಅರ್ಪಿಸಲಿದ್ದಾರೆ. ಇನ್ನು ಸಂಜೆ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ದತ್ತ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಇನ್ನು ಇದೇ ವೇಳೆ ಮಾತಾನಾಡಿದ ಶಾಸಕ ಸಿ.ಟಿ.ರವಿ ಮೋದಿ ಮತ್ತೆ ಪ್ರಧಾನಿಯಾದ್ರೆ ಭಾರತದ ಭವಿಷ್ಯ ಗಟ್ಟಿಯಾಗುತ್ತದೆ. ಹಾಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ದತ್ತಾತ್ರೇಯನ ಬಳಿ ನಾನು ಹರಕೆ ಕಟ್ಟಿಕೊಂಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350 ಕ್ಕೂ ಹೆಚ್ಚು ಸ್ಥಾನಗಳಿಂದ ಗೆಲ್ಲಬೇಕು, ದೇಶಕ್ಕೆ ಸ್ವಾರ್ಥ ರಹಿತ ರಾಜಕಾರಣದ ಅವಶ್ಯಕತೆಯಿದೆ ಎಂದರು. ಈಗ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ, ದೇಶದ ಪ್ರಗತಿಗೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇನೆ ಎಂದರು.












Click it and Unblock the Notifications