Chikkamagaluru Utsava 2023:ಸಾಂಸ್ಕೃತಿಕ ವೈಭವದ ಅದ್ಧೂರಿ ಮೆರವಣಿಗೆ
ಚಿಕ್ಕಮಗಳೂರು ಜನವರಿ 18 : ಜಿಲ್ಲಾ ಉತ್ಸವ 2023ರ ಚಿಕ್ಕಮಗಳೂರು ಹಬ್ಬ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಲಾ ಪ್ರಕಾರಗಳ ಭವ್ಯ ಮೆರವಣಿಗೆ ಸಾಕ್ಷತ್ ಮಲೆನಾಡು ದಕ್ಷಿಣ ಭಾರತದ ವೈಭವದ ಸಂಸ್ಕೃತಿಯ ವಿರಾಟ್ ಪ್ರದರ್ಶನವಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಹನುಮಂತಪ್ಪ ಸರ್ಕಲ್ ಬಳಿ ನಾಡ ದೇವಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಟೌನ್ ಕ್ಯಾಂಟೀನ್ ಸಮೀಪ ಆರಂಭಗೊಂಡ ಬೃಹತ್ ಮೆರವಣಿಗೆ ಬೆಸ್ಕಾಂ ಕಚೇರಿ, ಬಸವನಹಳ್ಳಿ ರಸ್ತೆ ಮೂಲಕ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡಿತ್ತು.
ವಿವಿಧ ಕಲಾಪ್ರಕಾರಗಳ ಪ್ರದರ್ಶನದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದ ಬೃಹತ್ ಮೆರವಣಿಗೆಯನ್ನು ನಗರದ ಟೌನ್ ಕ್ಯಾಂಟೀನ್ ಸಮೀಪ ಇಂಧನ ಸಚಿವ ಸುನಿಲ್ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಸುನಿಲ್ಕುಮಾರ್ ಸಾಂಸ್ಕೃತಿಕವಾಗಿ ಇಡೀ ರಾಜ್ಯದ ಜನರನ್ನು ಒಂದುಗೂಡಿಸುವ ಮೂಲಕ ಸಾಂಸ್ಕೃತಿಕ ಉತ್ಸವ ಮಾಡಲಾಗುತ್ತಿದೆ. ಹೊಸ ಆಯಾಮಗಳ ಮೂಲಕ ಎಲ್ಲರೂ ಒಂದಾಗುವುದು ಉತ್ತಮ ಬೆಳವಣಿಗೆ. ಸಾಂಸ್ಕೃತಿಕ ಚಟುವಟಿಕೆಗಳ ಉತ್ಸಾಹಗೊಳಿಸುತ್ತವೆ. ಭಾರತ ಸಾಂಸ್ಕೃತಿಕವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸಿ.ಟಿ. ರವಿ ಮಾತನಾಡಿ, ಭಾರತ ಅತ್ಯಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಶ್ರೀಮಂತ ರಾಷ್ಟ್ರ. ಕಲೆ ಸಂಸ್ಕೃತಿ ಹೊಂದಿರುವ ಜೀವನ ನಾಗರಿಕತೆ ಶ್ರೀಮಂತಿಕೆ ತೋರಿಸುತ್ತಿದೆ. ಎಲ್ಲ ಕಲೆಗಳನ್ನು ಒಳಗೊಂಡ ಹಬ್ಬ ಇದಾಗಿದೆ. ಪ್ರಾಚೀನ ಕೃಷಿ, ವಿಜ್ಞಾನ, ಕಲೆ ಬಿಂಬಿಸಲಾಗುತ್ತಿದೆ ಎಂದರು.
ನೋಡುಗರ ಕಣ್ಮನಗಳ ತಣಿಸಿದ ಮೆರವಣಿಗೆ
ವೈವಿಧ್ಯಮಯ ಕಲಾ ಶ್ರೀಮಂತಿಕೆ ಹೊಂದಿದ್ದ ಬೃಹತ್ ಮೆರವಣಿಗೆ ನೋಡುಗರ ಕಣ್ಮನಗಳ ತಣಿಸಿತು. ಭಾರತೀಯ ಕಲಾ ಪ್ರಪಂಚದ ಪರಿಚಯ ಮಾಡುವ ವೇಷಭೂಷಣದ ವಿವಿಧ ಕಲಾವಿದರು ಭಾಗವಹಿಸಿದ್ದರು. ದಕ್ಷಿಣ ಕನ್ನಡದ ಆಳ್ವಾಸ್ ಸಂಸ್ಥೆಯ 3,500ಕ್ಕೂ ಹೆಚ್ಚು ಕಲಾವಿದರೂ ಮೆರವಣಿಗೆ ಪ್ರಮುಖ ಆಕರ್ಷಣೆ ಕೇಂದ್ರವಾಗಿದ್ದರು. ಸ್ಥಳೀಯ 25ಶಾಲಾ ಕಾಲೇಜಿನ 3,000ವಿದ್ಯಾರ್ಥಿಗಳು ಸಾಂಸ್ಕತಿಕ ಕಲೆಗಳ ವೇಷಭೂಷಣ ಧರಿಸಿ ಗಮನ ಸೆಳೆದರು. ೪೫ ವಿವಿಧ ವೇಷ ಭೂಷಣಗಳು, ಸ್ಥಳೀಯ 25ಕಲಾ ತಂಡಗಳ ಕಲಾವಿದರ ವೈಭವದ ಮೆರವಣಿಗೆ ನೋಡಲು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದರು. ದಾಸಯ್ಯ ವೇಷದಾರಿ, ಕೊಂಬು ಕಹಳೆ ಊದುವವರು,, ತಟ್ಟೆರಾಯ ವೇಷ ಧರಿಸಿದವರು ಮೆರವಣಿಗೆಯ ರಂಗನ್ನು ಹೆಚ್ಚಿಸಿದರು.
ನೋಡುಗರ ಗಮನ ಸೆಳೆದ ಘಟೋದ್ಗಜ ಹಾಗೂ ರೋಬೋಟ್ ವೇಷಧಾರಿ
ಗೋರವ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ಬೇಡರ ಕುಣಿತ, ಹುಲಿ ವೇಷದಾರಿಗಳ ಕುಣಿತ ಯುವ ಜನರ ಮನ ಸೂರೆಗೊಂಡಿತು. ಕೇರಳದ ವಿವಿಧ ದೇವರ ವೇಷಗಳ ಕಲಾವಿದರು, ಶೃಂಗಾರ ಮೇಳ, ಬೃಹತ್ ಗಾತ್ರದ ಹುಲಿ, ಕೋಳಿ, ಸಿಂಹ, ಮೀನುಗಳ ಪ್ರತಿಕೃತಿಗಳು, ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳದವು. ಘಟೋದ್ಗಜ ಹಾಗೂ ರೋಬೋಟ್ ವೇಷಧಾರಿಗಳ ಕಲಾವಿದರು ಹೆಚ್ಚು ಗಮನ ಸೆಳೆದರು.
ಚಿಕ್ಕಮಗಳೂರಲ್ಲಿ ಜೀವಿಸುವ ಪ್ರತಿಯೊಬ್ಬರು ಧನ್ಯರು
ಚಿಕ್ಕಮಗಳೂರು ಉತ್ಸವ 2023ರ ಸಭೆ ಕಾರ್ಯಕ್ರಮಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಲೆಯ ಸಾಂಸ್ಕೃತಿಕ ಸಿರಿ ಹೊಂದಿರುವ ಕರ್ನಾಟಕ ದೇವರು ಅತ್ಯಂತ ಹೆಚ್ಚು ಪ್ರೀತಿಸುವ ನಾಡು. ಕಲೆ, ಸಾಹಿತ್ಯದ ತವರುರಾದ ಚಿಕ್ಕಮಗಳೂರಲ್ಲಿ ಪಂಚ ಜೀವ ನದಿಗಳಿವೆ. ಶೃಂಗೇರಿಯಲ್ಲಿ ಶಾರದಾಂಬೆ, ತಾಯಿ ಅನ್ನಪೂರ್ಣೆ ನೆಲೆಸಿರುವ ನೆಲವೀಡು. ಇಂತಹ ಪುಣ್ಯಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬರು ಧನ್ಯರು ಎಂದು ಶ್ಲಾಘಿಸಿದರು.
ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಸಲು ಸರ್ಕಾರ ಸಿದ್ಧವಿದೆ
ಮಾತು ಮುಂದುವರಿಸಿದ ಅವರು ಪ್ರಧಾನಿ ಮೋದಿ ಅವರು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿದ್ದಾರೆ. ಮನೆ ಮನೆಗೆ ೫೦ ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಡಲಾಗುತ್ತಿದೆ. ಶುದ್ದ ನೀರು ಆರೋಗ್ಯ ಕೊಡಬಲ್ಲದು. ಚಿಕ್ಕಮಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸಾಧ್ಯವಿದೆ. ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಸಲು ಸರ್ಕಾರ ಸಿದ್ಧವಿದೆ. ಸ್ವಿಡ್ಜರ್ಲ್ಯಾಂಡ್ನಂತೆ ಪ್ರವಾಸೋದ್ಯಮ ಚಿಕ್ಕಮಗಳೂರು, ಕೊಡಗನ್ನು ಬೆಳಸಲು ನಾವು ಬದ್ದವಾಗಿದೆ ಎಂದು ಹೇಳಿದರು.