ಮಾಣಿಕ್ಯಧಾರಾ ಸೊಬಗಿಗೆ ಬಟ್ಟೆಗಳ ಕಂಟಕ
ಚಿಕ್ಕಮಗಳೂರು, ಜೂನ್ 26: ಅದು ಶೋಲಾ ಕಾಡಿನ ಜೀವಜಲ. ಆ ಜಲ ತನ್ನದೇ ಪ್ರಾಕೃತಿಕ ಸೊಬಗಿನೊಂದಿಗೆ ಅಗಾಧ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಈ ಜಲವೀಗ ಮೌಢ್ಯಕ್ಕೆ ತುತ್ತಾಗಿ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಯಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಇಂಥ ಸಮಯದಲ್ಲಿ ಇಲ್ಲೊಂದು ತಂಡ ಈ ಜೀವಜಲವನ್ನು ಉಳಿಸಲು ಮುಂದಾಗಿದೆ.
ಒಂದೆಡೆ ದಟ್ಟವಾದ ಹಸಿರು ಹೊದ್ದು ಮಲಗಿರುವ ಶೋಲಾ ಕಾಡು. ಮತ್ತೊಂದೆಡೆ ಮಂಜು ಮುಸುಕಿನ ಜೊತೆ ಹಾಲ್ನೊರೆಯಂತೆ ಎಳೆ ಎಳೆಯಾಗಿ ಬೀಳುತ್ತಿರುವ ಜಲಧಾರೆ, ಮತ್ತೊಂದೆಡೆ ಈ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಜಲಧಾರೆಯ ಇಕ್ಕೆಲಗಳಲ್ಲಿ ಬಟ್ಟೆಗಳ ರಾಶಿ ರಾಶಿ.
ಹೌದು. ಈ ದೃಶ್ಯ ಕಂಡು ಬರುವುದು ಪ್ರವಾಸಿಗರ ಸ್ವರ್ಗ ಎಂದು ಖ್ಯಾತಿ ಪಡೆದಿರುವ ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್ ಗಿರಿ ಶ್ರೇಣಿಯಲ್ಲಿ ಬರುವ ಮಾಣಿಕ್ಯಧಾರಾ ಜಲಪಾತದಲ್ಲಿ.

ಶೋಲಾಕಾಡುಗಳ ಹಸಿರ ರಾಶಿಯಲ್ಲಿಯೇ ಹುಟ್ಟಿ ಮೆಲ್ಲಗೆ ಧುಮ್ಮಿಕ್ಕುವ ಈ ಜಲಧಾರೆ ತನ್ನೊಳಗೆ ಅಗಾಧ ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ಹಲವು ಹಳ್ಳಿಗರು ಈ ಗಂಗೆಯನ್ನು ಪವಿತ್ರ ಗಂಗೆ ಎಂದು ಕುಡಿಯಲು ಉಪಯೋಗಿಸುತ್ತಾರೆ. ಆದರೆ ಇದರೊಂದಿಗೆ ಮೌಢ್ಯವೂ ಅಂಟಿಕೊಂಡಿದೆ. ಇಲ್ಲಿ ಸ್ನಾನ ಮಾಡಿ ಮೈಲಿಗೆ ಬಟ್ಟೆಯನ್ನು ಬಿಟ್ಟುಹೋದರೆ ತಮ್ಮೆಲ್ಲಾ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ ಈ ಜಲಸಿರಿಗೆ ಕಂಟಕವಾಗಿ ಮಾರ್ಪಟ್ಟಿದೆ.
ಈ ಮೌಢ್ಯದಿಂದಾಗಿಯೇ ಈ ಜಲಧಾರೆಯ ಸನಿಹ ಲೋಡ್ ಗಟ್ಟಲೆ ಬಟ್ಟೆಗಳ ರಾಶಿ ಬಿದ್ದಿದ್ದು, ಇಡೀ ಜಲಪಾತ ಸೇರಿದಂತೆ ಗಿರಿಶ್ರೇಣಿಯ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ತಂದಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಮಾತ್ರ ಕಣ್ಮುಚ್ಚಿ ಕೂತಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಸೌಂದರ್ಯ ಸವಿಯುತ್ತಿದ್ದಾರೆ. ಇದರೊಂದಿಗೆ ಆವರಣವನ್ನೂ ಗಲೀಜು ಮಾಡಿ ಹೋಗುತ್ತಿದ್ದಾರೆ. ಆದ್ದರಿಂದ ಇಂದು ಚಿಕ್ಕಮಗಳೂರಿನ ಅರಣ್ಯ ಇಲಾಖೆ ಜೊತೆ ಹಲವಾರು ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಆದರೆ ಈ ಕಾರ್ಯ ಅಲ್ಪ ಪ್ರಮಾಣದಲ್ಲಿ ನಡೆದಿದ್ದು, ಆಡಳಿತ ವ್ಯವಸ್ಥೆ ಈ ಪರಿಸರ ಉಳಿವಿಗೆ ಸೂಕ್ತ ನಿರ್ಧಾರ ಕೈಗೊಳ್ಳಲೇಬೇಕಾಗಿದೆ. ಪ್ರವಾಸಿಗರು ಸಹ ಪರಿಸರಕ್ಕೆ ಧಕ್ಕೆಯಾಗದ ರೀತಿ ನಡೆದುಕೊಳ್ಳಬೇಕಿದೆ ಎಂಬುದು ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಅಭಿಪ್ರಾಯ.
ಮಲೆನಾಡಿನ ನೈಸರ್ಗಿಕ ಸಂಪತ್ತೊಂದು ತನ್ನ ನೈಜತೆ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದೆ. ಇದರಿಂದ ಅದೆಷ್ಟೋ ಜೀವರಾಶಿಗೆ ಅಪಾಯ ಬಂದೊದಗುವ ಕಾಲ ಸನ್ನಿಹಿತವಾಗಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ಈ ಜಲಸಿರಿಯ ಬಳಿ ನಡೆಯುತ್ತಿರುವ ಮೌಢ್ಯಕ್ಕೆ ಅಂತ್ಯ ಹಾಡಬೇಕು ಎಂದು ಹೇಳುತ್ತಾರೆ ಪರಿಸರವಾದಿ ಗಿರೀಜಾ ಶಂಕರ್.












Click it and Unblock the Notifications