ಮೂಡಿಗೆರೆ: ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಅಲುಗಾಡುತ್ತದೆ ಈ ಹುತ್ತ
ಚಿಕ್ಕಮಗಳೂರು ನವೆಂಬರ್8 : ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಉಣ್ಣಕ್ಕಿ ಹುತ್ತ ದನ ಕಾಯುವ ಹುಡುಗರು ಕಟ್ಟಿದ ಮಣ್ಣಿನ ಗೂಡು ಎಂದು ಪ್ರತೀತಿ ಇದ್ದು, ಇಂದು ಸಾವಿರಾರು ಭಕ್ತರ ಇಷ್ಟದೈವವಾಗಿದೆ.
ಪ್ರತಿ ವರ್ಷ ದೀಪಾವಳಿ ಅಮವಾಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯಂದು ನಡೆಯುವ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತಾ 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತದೆ ಎನ್ನುವ ನಂಬಿಕೆ ಇದೆ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವ ಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ.
ಆಪರೇಷನ್ ಭೈರ ವಿಫಲ: ದಸರಾ ಆನೆಗಳು ವಾಪಸ್, ಸ್ಥಳೀಯರ ಆಕ್ರೋಶ
ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನು ನೋಡಲೆಂದು ನೂರಾರು ಭಕ್ತರು ದೂರದ ಊರುಗಳಿಂದ ಬರುತ್ತಾರೆ. ಹೀಗೆ ಒಮ್ಮೆಲೆ ಬಂದವರು, ನಾಗದೇವರ ಭಕ್ತರಾಗಿ ಪ್ರತಿವರ್ಷವೂ ಕೂಡ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಮಕ್ಕಳ ಹುಣ್ಣೆಮೆಯಂದು ನಡೆಯುವ ಉತ್ಸವದಲ್ಲಿ ಯಾವುದೇ ಗಾಯವಾಗದ ಆರೋಗ್ಯವಾ್ ಕರುವಿನ ಕಿವಿಯನ್ನು ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡುವ ಆಚರಣೆ ಇದೆ. ಇದರಿಂದ ಊರಿನಲ್ಲಿರುವ ದನಕರುಗಳು ಆರೋಗ್ಯದಿಂದಿದ್ದು, ಯಾವುದೇ ಅನಾಹುತಗಳು ನಡೆಯುವುದಿಲ್ಲ ಎನ್ನುವುದು ಭಕ್ತರ ನಂಬಿಕೆ.
ದನ ಕಾಯುವ ಹುಡುಗರು ಕಟ್ಟಿದ ಹುತ್ತವಾಗಿರುವುದರಿಂದ ಕರುವನ್ನು ಕಾಡಿಗೆ ಬಿಡುವ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನು ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕುತ್ತೇವೆ ಎಂದು ಹರಕೆ ಕಟ್ಟಿಕೊಂಡರೆ ಎಂತಹಾ ಕಷ್ಟವೂ ಕಳೆಯುತ್ತದೆ ಎಂದು ಜನರು ನಂಬುತ್ತಾರೆ. ಚರ್ಮರೋಗ, ಮಕ್ಕಳಾಗದವರು, ಮನೆಯಲ್ಲಿ ದನಕರುಗಳು ಸಾಯುತ್ತಿದ್ದರೆ ಅಥವಾ ಜಾನುವಾರುಗಳ ಆರೋಗ್ಯ ಹದಗೆಟ್ಟಿದ್ದರೆ ಇಲ್ಲಿಗೆ ಹರಕೆ ಕಟ್ಟಿದರೆ ಸಾಕು ವರ್ಷದೊಳಗೆ ಆ ಹರಕೆ ಈಡೇರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಒಟ್ಟಾರೆ ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತವಾಗಿದೆ. ಉತ್ಸವದ ದಿನ ಹುತ್ತ ಅಲುಗಾಡುವುದರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೇವರ ಶಕ್ತಿಯ ಪ್ರಭಾವವಿದೆಯೋ ಎನ್ನುವುದು ಇಂದಿಗೂ ನಿಗೂಢವಾಗಿದೆ. ದನಕಾಯುವ ಹುಡುಗರ ಭಕ್ತಿಯ ಹಿಂದಿರುವ ಈ ಹುತ್ತಾ ಅಲುಗಾಡುತ್ತಾ ಪವಾಡವನ್ನೇ ಸೃಷ್ಟಿಸಿದರೆ, ಹುತ್ತ ಅಲುಗಾಡುವುದರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದಗಳಿಗೆ. ಆದರೆ ನೋಡುಗರ ಕಣ್ಮುಂದೆ ನಡೆಯುವ ಈ ವಿಚಿತ್ರ ಹಾಗೂ ವಿಶಿಷ್ಟ ಪವಾಡ ಮಾತ್ರ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದೆ.