ಲೋಕಕಲ್ಯಾಣಕ್ಕಾಗಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಹಾ ಚಂಡಿಕಾ ಯಾಗ
ಚಿಕ್ಕಮಗಳೂರು, ಅಕ್ಟೋಬರ್ 8 : ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಚಂಡಿಕಾಹೋಮ ನಡೆಸಲಾಗಿದೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಜಿಲ್ಲೆಯ ಹೊರನಾಡಿನಲ್ಲಿ ನವರಾತ್ರಿಯನ್ನ ಅದ್ದೂರಿಯಾಗಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಶುಕ್ರವಾರ ವಿಶೇಷ ಚಂಡಿಕಾ ಹೋಮ ನಡೆಸುವ ಮೂಲಕ ನವರಾತ್ರಿಗೆ ವಿದ್ಯುಕ್ತ ತೆರೆ ಬಿದ್ದಿತು.
ಅನ್ನಪೂರ್ಣೇಶ್ವರಿಯನ್ನು ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಕೊನೆಯ ದಿನವಾದ ಶುಕ್ರವಾರ ದ್ವಾದಶಿಯಾಗಿದ್ದು ಋತ್ವಿಜರು ಸಾಮೂಹಿಕವಾಗಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಚಂಡಿಕಾ ಹೋಮವನ್ನು ನೆರವೇರಿಸಿದರು. ಮಹಾಚಂಡಿಕಾ ಹೋಮವನ್ನು ನಡಿಸುವುದರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಸಂರಕ್ಷಣೆ ನೆಲೆಸಲಿದೆ ಎಂಬುವ ನಂಬಿಕೆ ಭಕ್ತರಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿ
ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಯನ್ನ ಅನ್ನಪೂರ್ಣೇಶ್ವರಿ ದೇವಿಗೆ ಸಲ್ಲಿಸಲಾಯಿತು. ಮಹಾಚಂಡಿಕಾ ಹೋಮದ ಪ್ರಯುಕ್ತ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿಯನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ಅನ್ನದಾತೆಗೆ ಹೋಮದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅರ್ಚನೆಯನ್ನು ನೆರವೇರಿಸಲಾಯಿತು. ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ ಮಹಾಚಂಡಿಕಾ ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಹೊರರಾಜ್ಯಗಳಿಂದಲೂ ಭಕ್ತರ ಆಗಮನ
ದ್ವಾದಶಿಯಂದು ನಡೆಯುವ ಈ ವಿಶೇಷ ಚಂಡಿಕಾ ಹೋಮವನ್ನು ಕಣ್ತುಂಬಿಕೊಳ್ಳುವ ಭಕ್ತರಿಗೆ ಒಳಿತಾಗುತ್ತದೆ ಎನ್ನುವ ನಂಬಿಕೆಯಿಂದಲೇ ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಹೊರನಾಡಿಗೆ ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದರು. ಈ ಬಾರಿಯ 11 ದಿನಗಳ ಕಾಲ ನಡೆದ ನವರಾತ್ರಿ ಸಂಭ್ರಮ ಚಂಡಿಕಾ ಹೋಮದೊಂದಿಗೆ ಸಂಪನ್ನವಾಯಿತು. ಈ ಬಾರಿ ಜಲಪ್ರಳಯದ ನೊಂದ ಜನರಿಗೆ ಉತ್ತಮ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ದ್ವಾದಶಿದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಮಹತ್ವ
ಆಧಿಶಕ್ತಿ ಅನ್ನಪೂರ್ಣೇಶ್ವರಿ ನೆಲೆಸಿರುವ ದಿವ್ಯತಾಣ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ಈ ತಾಯಿಯ ದರ್ಶನದಿಂದ ಪುನೀತರಾಗುತ್ತಿದ್ದಾರೆ. ನವರಾತ್ರಿಯ ಸಮಯದಲ್ಲಿ ಅನ್ನಪೂಣೇಶ್ವರಿಯಂತು ಸಾಕ್ಷಾತ್ ತಾಯಿಯ ಸ್ವರೂಪ, ಸುಮಾರು ನಾಲ್ಕು ಅಡಿ ಎತ್ತರ, ತಲೆಗೆ ಬಂಗಾರದ ಕಿರೀಟ, ಕಿರೀಟದ ಹಿಂದೆ ಏಳು ಎಡೆಯ ಆದಿಶೇಷನ ಪ್ರಭಾವಳಿ, ಸುಂದರವಾದ ದುಂಡನೆಯ ಮುಖ. ಹಣೆಯಲ್ಲಿ ಕಾಸಗಲದ ಕುಂಕುಮ, ಮೂಗಿಗೆ ಲಕ್ಷಣವಾದ ಮೂಗುತಿ, ಮಂದಹಾಸ ಬೀರುತ್ತಿರೋ ಮುಖ, ಅನ್ನದಾತೆ ಅನ್ನಪೂರ್ಣೇಶ್ವರಿಯನ್ನ ವರ್ಣಿಸಲು ಪದಪುಂಜಗಳೇ ಸಾಲದು. ಅದರಲ್ಲೂ ನವರಾತ್ರಿ ಮುಗಿದು ದ್ವಾದಶಿಯಂದು ನಡೆಯುವ ಧಾರ್ಮಿಕ ಕಾರ್ಯಗಳು ಇಲ್ಲಿ ಮಹತ್ವವನ್ನು ಪಡೆದುಕೊಂಡಿವೆ.
ಒಂಭತ್ತೂ ದಿನವೂ ಕೂಡಾ ವಿಶೇಷ ಪೂಜೆ
ನವರಾತ್ರಿ ಉತ್ಸವದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಪೂಜೆ ಅತ್ಯಂತ ಶ್ರೇಷ ಎನ್ನುವ ಪ್ರತೀತಿ ಇದೆ. ಅನ್ನಪೂಣೇಶ್ವರಿ ಸನ್ನಿಧಾನದಲ್ಲಿ ನಡೆದ ಚಂಡಿಕಾ ಹವನದಲ್ಲಿ ಅರ್ಚಕರು ದೇವಿಗೆ ಅಗ್ನಿಗೆ ಬೇರೆ ಬೇರೆ ತರದ ಅಪೀಸುಗಳನ್ನು ನೀಡಲಾಗುತ್ತದೆ. ಆ ಮೂಲಕ ದೇವಿಯನ್ನು ಸಂತುಷ್ಟಗೊಳಿಸಲಾಗುತ್ತದೆ. ಇನ್ನು ನವರಾತ್ರಿಯ ಒಂಭತ್ತೂ ದಿನವೂ ಕೂಡಾ ವಿಶೇಷ ಪೂಜೆ ಪುನಸ್ಕಾರಗಳನ್ನ ದೇವಿಗೆ ನೆರವೇರಿಸಲಾಗುತ್ತದೆ. ಮಹಿಳೆಯರು ಈ ಸಂದರ್ಭದಲ್ಲಿ ಅಕ್ಕಿ ತಂದು ಸಮರ್ಪಿಸುತ್ತಾರೆ. ಜತೆಗೆ ಹಣ್ಣು ಕಾಯಿ ಕುಂಕುಮ ಕೊಬ್ಬರಿ ಬೆಲ್ಲ ಇಂತಹ ಮಂಗಳಕರ ವಸ್ತುಗಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ.
ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ
ನವರಾತ್ರಿ ಉತ್ಸವದ ಅಂಗವಾಗಿ ಮಹಾಚಂಡಿಕಾ ಹೋಮ ಬೆಳಗ್ಗೆ 9.30ಕ್ಕೆ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು. ಒಟ್ಟಿನಲ್ಲಿ ಹೊರನಾಡಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರದ್ದಾಭಕ್ತಿಯಿಂದ ಮಹಾ ಚಂಡಿಕಾಯಾಗ ನಡೆಯುವುದರೊಂದಿಗೆ 11 ದಿನಗಳ ಕಾಲ ನಡೆದ ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆಬಿದ್ದಂತಾಗಿದೆ.