ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ; ಸ್ಪಷ್ಟನೆ ನೀಡಿದ ಎಚ್ಡಿ ಕುಮಾರಸ್ವಾಮಿ!
ಚಿಕ್ಕಮಗಳೂರು, ಜನವರಿ 11: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ. ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆಯೇ? ಎಂಬ ಚರ್ಚೆಗಳು ನಡೆಯುತ್ತಿವೆ.
ಗುರುವಾರ ಬೆಳಗ್ಗೆ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಬೆಂಗಳೂರಿಗೆ ಹೊರಡುವ ಮುನ್ನ ಮಾತನಾಡಿದ ಅವರು, "ಕಳೆದ ಬಾರಿಯ ಲೋಕಸಭೆ ಚುನಾವಣೆ ಬೇರೆ. ಈ ಚುನಾವಣೆ ಬೇರೆ, ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣ ಇದೆ" ಎಂದರು.

"ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದರು. ಜೆಡಿಎಸ್ ಬಿಟ್ಟು 2-3 ಪರ್ಸೆಂಟ್ ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲ" ಎಂದು ಹೇಳಿದರು.
"ಓರ್ವ ಸಾಮಾನ್ಯ ಕಾರ್ಯಕರ್ತ ಕೂಡ ಇಂದು ಗೆಲ್ಲುತ್ತಾನೆ. ಹೊಂದಾಣಿಕೆ ಆಗಿರುವುದರಿಂದ ಯಾರು?, ಎಲ್ಲಿ? ಎಂಬ ತೀರ್ಮಾನ ಆಗಿಲ್ಲ. ಹೊಂದಾಣಿಕೆಯ ಮಾತುಕಥೆಯ ಬಳಿಕ ಎಲ್ಲಿ?, ಯಾರು? ಎಂದು ತೀರ್ಮಾನ ಮಾಡುತ್ತೇವೆ. ಬಳಿಕ ಎಲ್ಲಾ ಸರಿಯಾಗುತ್ತದೆ" ಎಂದು ಸ್ಪಷ್ಟಪಡಿಸಿದರು.
3 ಡಿಸಿಎಂ ಸ್ಥಾನದ ಬೇಡಿಕೆ; ಕಾಂಗ್ರೆಸ್ ಪಕ್ಷದಲ್ಲಿ ಮೂವರು ಉಪ ಮುಖ್ಯಮಂತ್ರಿ ಹುದ್ದೆ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ಕಾಂಗ್ರೆಸ್ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಜಾತಿಗೊಂದು ಡಿಸಿಎಂ ಸ್ಥಾನ ನೀಡಿಬಿಡಿ. 30-35 ಜನಕ್ಕೂ ಡಿಸಿಎಂ ಸ್ಥಾನ ಕೊಡುವುದು ಒಳ್ಳೆಯದು. ಆಗ ಪ್ರತಿ ನಿತ್ಯ ಈ ರೀತಿಯ ಗೊಂದಲ ಇರಲ್ಲ" ಎಂದು ವ್ಯಂಗ್ಯವಾಡಿದರು.
"ಈಗ ಗ್ಯಾರಂಟಿ ನೋಡಿಕೊಳ್ಳುವುದಕ್ಕೆ ಓರ್ವ ಅಧ್ಯಕ್ಷ. ಅದಕ್ಕೆ ವಾರ್ಷಿಕ 16 ಕೋಟಿ ಖರ್ಚಂತೆ. ಐವರು ಉಪಾಧ್ಯಕ್ಷರಂತೆ ಏನಕ್ಕೆ?. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡೋಕೆ ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ" ಎಂದರು.
ಕಾಂಗ್ರೆಸ್ಸಿಗರು ರಾಮ ಮಂದಿರ ಉದ್ಘಾಟನೆಗೆ ಹೋಗದ ವಿಚಾರದ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. "ಯಾಕೆ ಹೋಗಲ್ಲ ಎಂದು ಅವರೇ ಹೇಳಬೇಕು. ಅವರ ತೀರ್ಮಾನ ನನಗೆ ಸಂಬಂಧವಿಲ್ಲ. ರಾಮ ಮಂದಿರ ಆಗಬೇಕು ಅನ್ನೋದು ದೇಶದ ಜನರ ನಿರೀಕ್ಷೆ ಹಲವು ವರ್ಷದ ಗೊಂದಲಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ ರಾಮ ಮಂದಿರ ನಿಜವಾದ ರಾಮ ರಾಜ್ಯದ ಕನಸು" ಎಂದು ತಿಳಿಸಿದರು.
ಬೆಂಗಳೂರಿಗೆ ವಾಪಸ್; ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಂಗಳವಾರ ರಾತ್ರಿಯಿಂದ ಚಿಕ್ಕಮಗಳೂರು ತಾಲೂಕಿನ ಹನಿ ಡ್ಯೂ ರೆಸಾರ್ಟ್ನಲ್ಲಿದ್ದರು. ಹಲವಾರು ಪಕ್ಷದ ನಾಯಕರ ಜೊತೆ ಲೋಕಸಭೆ ಚುನಾವಣೆಯ ಕುರಿತು ಸರಣಿ ಸಭೆಗಳನ್ನು ನಡೆಸಿದರು. ಗುರುವಾರ ಬೆಳಗ್ಗೆ ಅವರು ಬೆಂಗಳೂರಿಗೆ ವಾಪಸ್ ಆದರು.
ಬಿಜೆಪಿ ಜೊತೆಗಿನ ಮೈತ್ರಿಯ ಹಿನ್ನಲೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ಮಂಡ್ಯ, ಮೈಸೂರು ಲೋಕಸಭಾ ಕ್ಷೇತ್ರಗಳ ಮೇಲೆ ಅವರು ಕಣ್ಣಿಟ್ಟಿದ್ದು, ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿದರು. ಯಾವ ಕ್ಷೇತ್ರಗಳನ್ನು ಬಿಜೆಪಿಗೆಗ ಬಿಟ್ಟುಕೊಡಬೇಕು? ಎಂದು ಮಾತುಕತೆ ನಡೆಸಿದರು.
ಲೋಕಸಭೆ ಚುನಾವಣೆಗೆ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಸುಮಲತಾ ಮಂಡ್ಯ ಕ್ಷೇತ್ರದ ಹಾಲಿ ಸಂಸದರು. ಬಿಜೆಪಿಗೆ ಸೀಟು ಬಿಟ್ಟುಕೊಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications