ಅರಣ್ಯ ಇಲಾಖೆ ಸಿಬ್ಬಂದಿಯ ಪ್ಲಾನ್ ತಲೆಕೆಳಗೆ ಮಾಡಿದ ಚಾಲಾಕಿ ಚಿರತೆ
ಚಿಕ್ಕಮಗಳೂರು, ಡಿಸೆಂಬರ್ 3: ಪ್ರತಿದಿನ ಬರುವ ಚಿರತೆಗಾಗಿ ಬೋನ್ ಇಟ್ಟು ಅದರ ಒಳಗೆ ನಾಯಿ ಕಟ್ಟಿದ್ದರು. ಬೋನ್ ಅನ್ನು ಸುತ್ತುವರಿಯುವ ಚಿರತೆ, ಬೋನಿನ ಒಳ ಹೋಗದೆ ಹೊರಭಾಗದಿಂದಲೇ ನಾಯಿಯನ್ನು ಎಳೆಯಲು ವಿಫಲ ಪ್ರಯತ್ನ ನಡೆಸಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದಷ್ಟೆ ಕಾಟಿಗನೆರೆ ಗ್ರಾಮದ ಶಿವಪ್ರಸಾದ್ ಎಂಬುವರ ಗೊಬ್ಬರ ತಯಾರಿಕ ಘಟಕಕ್ಕೆ ಬಂದಿದ್ದ ಚಿರತೆ ನಾಯಿಯನ್ನು ಹೊತ್ತೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನು ಕಂಡ ಸುತ್ತಮುತ್ತಲಿನ ಗ್ರಾಮದ ಜನ ಕೂಡ ಆತಂಕಕ್ಕೀಡಾಗಿದ್ದರು. ವಿಷಯ ತಿಳಿದು ಅರಣ್ಯ ಇಲಾಖೆಯವರು ತೋಟದಲ್ಲಿ ಚಿರತೆ ನಾಯಿ ಹೊತ್ತೊಯ್ದ ಸ್ಥಳದಲ್ಲಿ ಬೋನ್ ಇಟ್ಟು ಅದರ ಮೇಲೆ ಗೋಣಿಚೀಲ ಮುಚ್ಚಿದ್ದರು.

ಕಳೆದ ರಾತ್ರಿ 12 ಗಂಟೆಯಿಂದ ಮೂರು ಗಂಟೆಯೊಳಗೆ ಮೂರು ಬಾರಿ ಬಂದಿರುವ ಚಿರತೆ ಒಮ್ಮೆಯೂ ಬೋನಿನ ಒಳಗೆ ಹೋಗಿಲ್ಲ. ಎರಡು ವಿಭಾಗದ ಬೋನಿನೊಳಗೆ ಒಮ್ಮೆ ಅರ್ಧ ಹೋಗಿರುವ ಚಿರತೆ ನಾಯಿ ಇರುವ ಜಾಗಕ್ಕೆ ಹೋಗದೇ ಅರಣ್ಯ ಇಲಾಖೆ ಸಿಬ್ಬಂದಿಯ ಪ್ಲಾನ್ ತಲೆಕೆಳಗೆ ಮಾಡಿದೆ.

ಬೋನಿನಿಂದ ಹೊರಬಂದು ಬೋನಿನ ಹೊರಭಾಗದಿಂದಲೇ ನಾಯಿಯನ್ನು ಎಳೆಯಲು ವಿಫಲ ಪ್ರಯತ್ನ ನಡೆಸಿ ವಾಪಸ್ ಹೋಗಿದೆ. ಚಿರತೆ ಹೀಗೆ ಪ್ರತೀ ದಿನ ಬಂದು ಹೋಗುತ್ತಿರುವುದರಿಂದ ಕಾಟಿಗನೆರೆ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಆತಂಕ ಎದುರಾಗಿದೆ.












Click it and Unblock the Notifications