ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಇವರೊಬ್ಬರೇ ಸಾಕು!
ಚಿಕ್ಕಮಗಳೂರು, ನವೆಂಬರ್.21: ಕಾಂಗ್ರೆಸ್ ಮುಕ್ತ ಭಾರತ. ಇದು ಬಿಜೆಪಿಯವರ ಘೋಷವಾಕ್ಯ. ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕು ಎನ್ನುತ್ತಲೇ ಕೇಂದ್ರದಲ್ಲಿ ನರೇಂದ್ರ ಮೋದಿ ಚುನಾವಣೆಗೆ ಇಳಿದರು. ಇದೇ ಘೋಷವಾಕ್ಯ ಇದೀಗ ರಾಜ್ಯದಲ್ಲೂ ಮೊಳಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನ್ನು ಹೇಳ ಹೆಸರಿಲ್ಲದಂತೆ ಮಾಡಲು ಕೇಸರಿ ಪಡೆ ಪ್ಲಾನ್ ಮಾಡಿಕೊಳ್ಳುತ್ತಿದೆ. ಇದರ ನಡುವೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೀಡಿರುವ ಹೇಳಿಕೆ ಎಂಥವರನ್ನೂ ಬೆರಗುಗೊಳ್ಳುವಂತೆ ಮಾಡಿದೆ.
ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿಯ ಸ್ನೇಹಿತರೆಲ್ಲ ಕೋಟಿ ಕುಳಗಳೇ!
ಹೌದು, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಬಿಜೆಪಿಗರು ಶ್ರಮ ಪಡುವ ಅಗತ್ಯವೇ ಇಲ್ಲವಂತೆ. ಇಲ್ಲೊಬ್ಬ ಮಾಜಿ ಮುಖ್ಯಮಂತ್ರಿಗಳು ಮನಸು ಮಾಡಿದ್ರೆ ಸಾಕು. ಕರ್ನಾಟಕ ಕಾಂಗ್ರೆಸ್ ಮುಕ್ತ ಆಗಿ ಬಿಡುತ್ತದೆ ಎಂದು ನಳಿನ್ ಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಪಣ!
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಿದ್ದರಾಮಯ್ಯನ ಆಶಯವೇ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದಾಗಿದೆ. ಅವರೇ ಅದನ್ನು ಮಾಡುತ್ತಾರೆ.
ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಸಿದ್ದರಾಮಯ್ಯ ವರ್ತನೆ ಹೀಗೆ ಮುಂದುವರಿದರೆ, ಅವರೇ ಕಾಂಗ್ರೆಸ್ ಮುಕ್ತ ಮಾಡುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸಿದ್ದು, ಮಾಜಿ ಮುಖ್ಯಮಂತ್ರಿಯನ್ನೇ ಪಕ್ಷ ಬಿಡಿಸಿದರು!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಸತ್ಯ ಹೇಳಲಿಲ್ಲ, ಈಗಲೂ ಸತ್ಯ ಹೇಳುತ್ತಿಲ್ಲ. ಅವರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಹಿರಿಯ ಮುಖಂಡರೇ ಕಾಂಗ್ರೆಸ್ ನ್ನು ಬಿಟ್ಟು ಹೋಗಿದ್ದಾರೆ. ದಶಕಗಳ ಕಾಲ ಕಾಂಗ್ರೆಸ್ ನ್ನು ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಬಿಡಲು ಸಿದ್ದರಾಮಯ್ಯನವರೇ ಕಾರಣ ಎಂದು ನಳಿನ್ ಕುಮಾರ್ ದೂರಿದರು.
ಕಾಂಗ್ರೆಸ್ಸಿಗರನ್ನು ಸೋಲಿಸುವುದೇ ಸಿದ್ದರಾಮಯ್ಯ ಗುರಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರೇ ಸೋತಿದ್ದಾರೆ. ರಾಣಿಬೆನ್ನೂರಿನಲ್ಲಿ ಮಾಜಿ ಸಚಿವ ಕೆ.ಬಿ.ಕೋಳಿವಾಡರನ್ನು ಸೋಲಿಸಿದರು. ತುಮಕೂರಿನಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟರು ಎಂದು ನಳಿನ್ ಕುಮಾರ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಮಾತನ್ನು ಕೇಳುವವರು ಯಾರು?
ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರನ್ನೇ ಸಿದ್ದರಾಮಯ್ಯ ಮೂಲೆಗುಂಪು ಮಾಡಿದರು. ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿಟ್ಟರು. ಪಕ್ಷದಲ್ಲಿ ಏಕಚಕ್ರಾಧಿಪತ್ಯ ಸಾಧಿಸಲು ಹೋಗಿ ಈಗ ಕಾಂಗ್ರೆಸ್ ನಲ್ಲೇ ಭಿನ್ನಮತ ಶುರುವಾಗಿದೆ. ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ಮಾತನ್ನು ಕೇಳುವವರು ಇಲ್ಲ. ಹೀಗೆ ಮುಂದುವರಿದರೆ ರಾಜ್ಯ ಖಂಡಿತವಾಗಿಯೂ ಕಾಂಗ್ರೆಸ್ ಮುಕ್ತವಾಗುತ್ತದೆ ಎಂದು ನಳಿನ್ ಕುಮಾರ್ ಹೇಳಿದರು.