ಚಾರ್ಮಾಡಿ ಘಾಟಿನಲ್ಲಿ ನಿಸರ್ಗದ ತಪ್ಪಲಿನಲ್ಲಿ ಕಥಾಕಮ್ಮಟದ ಕಂಪು
ಕೊಟ್ಟಿಗೆಹಾರ (ಚಿಕ್ಕಮಗಳೂರು), ಅಕ್ಟೋಬರ್ 23: ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ 80ನೇ ಜನ್ಮದಿನದ ನೆನಪಿನಲ್ಲಿ ಮೂಡಿಗೆರೆ ಮತ್ತು ಬಣಕಲ್ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಚಾರ್ಮಾಡಿ ಘಾಟ್ನ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಕಥಾಕಮ್ಮಟ ಕಾರ್ಯಕ್ರಮವು ಯಶಸ್ವಿಯಾಗಿದೆ.
ಸಮಾಜವನ್ನು ಚಿಂತನೆಯೆಡೆಗೆ ಒಯ್ಯುವುದು ಸಾಹಿತ್ಯದ ಕೆಲಸವಾಗಿದೆ. ಅಕ್ಷರ ರೂಪದ ಮತ್ತು ಮೌಖಿಕ ಸಾಹಿತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಕಥಾಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿದರು.
ಮಾಗದರ್ಶನದ ಕೊರತೆಯಿಂದ ಕಥೆಗಾರರು ತೆರೆ ಮರೆಯಲ್ಲಿಯೆ ಉಳಿಯುವಂತಾಗಿದ್ದು ಬೆಳಕಿಗೆ ಬಾರದ ಕಥೆಗಾರರು ಕಥಾಕಮ್ಮಟದ ಮೂಲಕ ಅರ್ಥಪೂರ್ಣ ಕಥೆಗಳನ್ನು ಕಟ್ಟುವ ಮೂಲಕ ಬೆಳಕಿಗೆ ಬರುವಂತಾಗಲಿ ಎಂದರು.
ಖ್ಯಾತ ಕಥೆಗಾರರಾದ ಜೋಗಿ ಮಾತನಾಡಿ, ಪ್ರತಿಯೊಂದು ನಾಲ್ಕೈದು ಆಯಾಮಗಳಿರುತ್ತವೆ. ಆ ಆಯಾಮಗಳಿಂದ ನೋಡಿ ಕಥೆ ರಚಿಸಬೇಕು. ಕಥೆಯ ಅನುಕಂಪದ ಬಿಂದುವನ್ನು ಗುರುತಿಸಬೇಕೆಂದರೆ ನಾವು ಸಮಾಜದ ಒಟ್ಟಿಗಿರಬೇಕು. ಕಥೆಗೆ ಒಂದು ನಿರ್ದಿಷ್ಟ ವಿಚಾರವನ್ನು ಎತ್ತಿಕೊಂಡು ಒಳ್ಳೆಯ ಆರಂಭವನ್ನು ಕೊಟ್ಟು ಮದ್ಯದಲ್ಲಿ ಮೌಲ್ಯ ಪರಿವರ್ತನೆ ಮತ್ತು ಕಥೆಯಲ್ಲಿ ಒಂದು ಅನಿರೀಕ್ಷಿತ ಅಂತ್ಯವಿರಬೇಕು. ಕಥೆಗಾರನಿಗೆ ಬುದ್ದಿವಂತಿಕೆಗಿಂತ ಭಾವಪೂರ್ಣತೆ ಇರಬೇಕು ಎಂದರು.

ಕಥೆಗಾರ ಸ್ಥಿತಪ್ರಜ್ಞನಾಗಿರಬೇಕು
ರಿಪ್ಪನ್ಪೇಟೆಯ ಸಪಪೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಪತಿ ಹಳಗುಂದ ಮಾತನಾಡಿ ಕಥೆಗಾರ ಸ್ಥಿತಪ್ರಜ್ಞಾನಾಗಿರಬೇಕು. ಹೊಗಳಿಕೆ ಮತ್ತು ತೆಗಳಿಕೆಯನ್ನು ಏಕಪ್ರಕಾರವಾಗಿ ಸ್ವೀಕರಿಸಿದರೆ ಮಾತ್ರ ಬರಹಗಾರನಾಗಲು ಸಾಧ್ಯವಿದೆ ಎಂದರು.
ಶಿವಮೊಗ್ಗದ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ಡಾ.ಅನಿತಾ ಹೆಗ್ಗೋಡು ಮಾತನಾಡಿ, ರಾಮಾಯಣ ಮಹಾಭಾರತದ ವಸ್ತುಗಳನ್ನ ಸದ್ಯದ ಸ್ಥಿತಿಗೆ ಕೊಡುವ ಸಾಧ್ಯತೆಗಳು ಕೂಡ ಇದ್ದು ಕಥೆಗಾರರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಮಲೆನಾಡಿನ ಸಮೃದ್ದ ಬದುಕಿನಲ್ಲಿ ಕಥೆಗೆ ಸಾಕಷ್ಟು ವಸ್ತುಗಳು ಸಿಗುತ್ತವೆ. ಅವುಗಳನ್ನು ಗಮನಿಸಿ ಕಥಾರಚನೆಯ ಮಾಡಬಹುದು ಎಂದರು.

ಹಿರಿಯ ಪತ್ರಕರ್ತ ಎಸ್.ಕೆ. ಶಾಮಸುಂದರ ಮಾತನಾಡಿ
ಏಷ್ಯಾನೆಟ್ ಅಂತರಜಾಲ ಪತ್ರಿಕೆಯ ಪ್ರಧಾನ ಸಂಪಾದಕರಾದ ಎಸ್.ಕೆ. ಶಾಮಸುಂದರ ಮಾತನಾಡಿ, ನಿಸರ್ಗದ ನಡುವೆ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ರಾಜ್ಯದ ವಿವಿದೆಡೆಯಿಂದ ಆಗಮಿಸಿರುವ ಶಿಬಿರಾರ್ಥಿಗಳು ಕಮ್ಮಟದ ಪಾಠವನ್ನು ತಮ್ಮ ಸಾಹಿತ್ಯ ರಚನೆಗೆ ಮೆಟ್ಟಿಲಾಗಿಸಿಕೊಳ್ಳಿ ಎಂದರು. ಸರ್... ವಯಸ್ಸು 60 ಆಯ್ತು. ನಾನ್ ಕಥೆ ಬರಿಬಹುದಾ? ಮದ್ಯಾಹ್ನದ ಊಟದ ವಿರಾಮದ ನಂತರ ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ನಡುವೆ ನಡೆದ ಕಥೆಯ ಕುರಿತ ಮುಕ್ತಸಂವಾದ ಸ್ವಾರಸ್ಯಕರವಾಗಿತ್ತು.

'ಇವುಗಳಿಂದ ಬರೆಯಲು ಸ್ಪೂರ್ತಿ ಸಿಗುತ್ತಾ?'
ಶಿಬಿರಾರ್ಥಿಯೊಬ್ಬರು 'ಸರ್ ನನಗೆ ವಯಸ್ಸು 60. ಈ ವಯಸ್ಸಿನಲ್ಲೂ ನಾನು ಕಥೆ ಬರೆಯಬಹುದಾ?' ಎಂದಾಗ ಕಥಾರಚನೆಗೆ ವಯಸ್ಸಿನ ಮಿತಿ ಇಲ್ಲ. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗುವುದಿಲ್ಲ. ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿ ಬರೆವಾಗ ಸುಮಾರು 50 ವರ್ಷವಾಗಿತ್ತು. ಕಥೆಯ ಹಿಂದಿನ ಮನಸ್ಸಿಗೆ ವಯಸ್ಸಿನ ಅಡ್ಡಿ ಇಲ್ಲ ಎಂದು ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.

‘ಕಥೆ ಬರಿಯೋಕೆ ಕೆಲಸಾಹಿತಿಗಳು ಮದ್ಯ ಸಿಗರೇಟ್ ಸೇದುತ್ತಾರೆ
ಮತ್ತೊಬ್ಬ ಶಿಬಿರಾರ್ಥಿ 'ಕಥೆ ಬರಿಯೋಕೆ ಕೆಲಸಾಹಿತಿಗಳು ಮದ್ಯ ಸಿಗರೇಟ್ ಸೇದುತ್ತಾರೆ. ಇವುಗಳಿಂದ ಬರೆಯಲು ಸ್ಪೂರ್ತಿ ಸಿಗುತ್ತಾ?' ಎಂದು ಕೇಳಿದಾಗ ಬರಹಗಾರನಿಗೆ ಮದ್ಯದ ಮತ್ತಿಗಿಂತ ಕಾವ್ಯದ ಮತ್ತಿರಬೇಕು. ಸಾಹಿತ್ಯದ ಮತ್ತಿನಲ್ಲಿ ಬರೆದಾಗ ಮಾತ್ರ ಉತ್ತಮ ಕಥೆ ಮೂಡಿಬರಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಹೀಗೆ ಹಲವಾರು ಶಿಬಿರಾರ್ಥಿಗಳು ಮುಕ್ತಸಂವಾದದಲ್ಲಿ ಕಥೆಯ ಕುರಿತ ಅನುಮಾನಗಳನ್ನು ಸಂಪನ್ಮೂಲ ವ್ಯಕ್ತಿಗಳ ಮುಂದಿಟ್ಟರು.

ಮಲೆನಾಡ ಸೊಗಡಿನ ಊಟದ ವ್ಯವಸ್ಥೆ
ಕಮ್ಮಟದಲ್ಲಿ ಬಳ್ಳಾರಿ, ಮೈಸೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 80 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿದರು. ಕಮ್ಮಟದಲ್ಲಿ ಕಥೆಯ ಸೃಷ್ಟಿ, ಕಥಾ ರಚನಾ ತಂತ್ರ, ನಿರ್ದಿಷ್ಟ ಕಥೆಗಳ ಬಗ್ಗೆ ಚರ್ಚೆ ನಡೆಯಿತು. ಗಮನ ಸೆಳೆದ ಮಲೆನಾಡ ಸೊಗಡಿನ ಅಡುಗೆ ಕಥಾಕಮ್ಮಟದ ಪ್ರಯುಕ್ತ ಆಲೇಖಾನ್ ಹೊರಟ್ಟಿ ಗ್ರಾಮಸ್ಥರು ಶಿಭಿರಾರ್ಥಿಗಳು ಹಾಗೂ ಅತಿಥಿಗಳಿಗಾಗಿ ಮಲೆನಾಡ ಸೊಗಡಿನ ಊಟದ ವ್ಯವಸ್ಥೆ ಮಾಡಿದ್ದರು.

ಮಲೆನಾಡು ಭಾಗದ ಗ್ರಾಮೀಣ ಸೊಗಡಿನ ವಸ್ತು ಪ್ರದರ್ಶನ
ಕೆಸುವಿನ ಗಂಟಿನ ಪಲು, ಬೈನೆ ದಿಂಡು ಮತ್ತು ಕಡ್ಲೆ ಪಲ್ಯದ ವಿಶೇಷ ಅಡುಗೆಯನ್ನು ಶಿಬಿರಾರ್ಥಿಗಳು ಹಾಗೂ ಅತಿಥಿಗಳು ಸವಿದರು.ಮಲೆನಾಡು ಭಾಗದ ಗ್ರಾಮೀಣ ಸೊಗಡಿನ ಪುರಾತನ ವಸ್ತುಗಳ ಪ್ರದರ್ಶನ ಕೂಡ ಗಮನ ಸೆಳೆಯಿತು. ಕೂರಿಗೆ, ಬೈನೆಕತ್ತಿ, ಮುಂತಾದ ಮರೆಯಾಗುತ್ತಿರುವ ದಿನಬಳಕೆ ವಸ್ತುಗಳು ವಸ್ತು ಪ್ರದರ್ಶನದಲ್ಲಿ ಕಾಣಸಿಕ್ಕವು. ತೇಜಸ್ವಿ ಪುಸ್ತಕಕ್ಕೆ ಪುಲ್ ಡಿಮ್ಯಾಂಡ್ ಕಥಾಕಮ್ಮಟದಲ್ಲಿ ಪುಸ್ತಕ ಮಾರಾಟ ಮಳಿಗೆಯಲ್ಲಿ ಶಿಬಿರಾರ್ಥಿಗಳು ಮುಗಿ ಬಿದ್ದು ಪುಸ್ತಕ ಖರೀದಿಸಿದರು.

ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಅದರಲೂ ತೇಜಸ್ವಿ ಪುಸ್ತಕಗಳನ್ನು ಹೆಚ್ಚು ಕೊಳ್ಳುತ್ತಿರುವುದು ಕಂಡುಬಂತು. ಕಾಡಿನ ನಡುವಿನ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಮಾರಾಟ ಭರ್ಜರಿಯಾಗಿತ್ತು. ಪುಸ್ತಕ ಮಾರಾಟಗಾರರ ಮುಖದಲ್ಲಿ ಸಂತಸ ಮನೆ ಮಾಡಿತು. ಬಕ್ಕಿ ಮಂಜು ಮತ್ತು ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಕಸಾಪ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಗ್ರಾಮದ ಹಿರಿಯರಾದ ಹೆಚ್.ಕೆ ಮಂಜೆಗೌಡ, ಗ್ರಾಮಸ್ಥರು, ಶಿಬಿರಾರ್ಥಿಗಳು, ಸಾಹಿತ್ಯಾಭಿಮಾನಿಗಳು ಇದ್ದರು.












Click it and Unblock the Notifications