ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ನಾಯಕರ ದಂಡು: ದಳಪತಿಗಳ ಬಗ್ಗೆ ತುಟಿ ಬಿಚ್ಚದ ಕಮಲ ನಾಯಕರು!
ಹಾಸನ ಜಿಲ್ಲೆಯಲ್ಲಿ ಬೇಲೂರಿನಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಶದಲ್ಲಿ ಜೆಪಿ ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು. ಆದರೆ ಭಾಷಣದಲ್ಲಿ ಎಲ್ಲಿಯೂ ಜೆಡಿಎಸ್ ವಿರುದ್ಧವಾಗಲೀ, ಜೆಡಿಎಸ್ ನಾಯಕರ ವಿರುದ್ಧವಾಗಲೀ ಮಾತನಾಡಿಲ್ಲ
ಹಾಸನ, ಫೆಬ್ರವರಿ 22: ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಮಂಗಳವಾರ ಬಿಜೆಪಿ ನಾಯಕರು ಮಿಂಚಿನ ಸಂಚಾರ ಮಾಡಿದರು. ಬೇಲೂರಿನಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಶದಲ್ಲಿ ಜೆಪಿ ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು. ಆದರೆ ಭಾಷಣದಲ್ಲಿ ಎಲ್ಲಿಯೂ ಜೆಡಿಎಸ್ ವಿರುದ್ಧವಾಗಲೀ, ಜೆಡಿಎಸ್ ನಾಯಕರ ವಿರುದ್ಧವಾಗಲೀ ಮಾತನಾಡಿಲ್ಲ ಎನ್ನುವುದು ಕುತೂಹಲಕಾರಿ ಸಂಗತಿ.
ಕರ್ನಾಟಕ ವಿಧಾನಸಭಾ ಚುನಾಚಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಿದರು. ಬೇಲೂರಿನ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಸಾರ್ವಜನಿಕರ ಸಮಾವೇಶದಲ್ಲಿಪಾಲ್ಗೊಂಡ ಜೆ.ಪಿ ನಡ್ಡಾಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಗೋಪಾಲಯ್ಯ ಸೇರಿ ಹಲವು ನಾಯಕರು ಸಾಥ್ ನೀಡಿದರು.
ಸಮಾವೇಶದಲ್ಲಿ ಜೆ.ಪಿ. ನಡ್ಡಾ ಮಾತನಾಡಿ, "ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿವೆ. ಈ ಸಲದ ಬಜೆಟ್ ನನಗೆ ಖುಷಿ ನೀಡಿದೆ. ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಒಳಿತು ಮತ್ತು ಎಲ್ಲಾ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮಾಜದಲ್ಲಿ ಒಡಕು ಸೃಷ್ಟಿಯಾಗುತ್ತದೆ, ಒಡೆದು ಆಳುವ ನೀತಿ ಕಾಂಗ್ರೆಸ್ನವರದ್ದು, ಸಿದ್ದರಾಮಯ್ಯ ಕಾಲದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿತ್ತು. ರಾಜ್ಯದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಪರವಾಗಿ ಇದ್ದಾರೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಎಂದು ಜೆ.ಪಿ ನಡ್ಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಬೇಲೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನವರಿಗೆ ಬೂಟಾಟಿಕೆ ಹಾಗೂ ಸುಳ್ಳು ಹೇಳುವುದು ಚಾಳಿ, ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ ಎಂದರು.
ಸಮಾವೇಶದ ಬಳಿಕ ಜೆ.ಪಿ ನಡ್ಡಾ ಹಾಗೂ ಬಿಜೆಪಿ ನಾಯಕರು ಐತಿಹಾಸಿಕ ಬೇಲೂರು ಚನ್ನಕೇಶವನ ದರ್ಶನ ಮಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಸುತ್ತಲೂ ಒಂದು ಸುತ್ತು ಬಂದು ಹೊಯ್ಸಳರ ಕೆತ್ತನೆ ಕಂಡು ಜೆ.ಪಿ ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಹಾಸನ ನಗರದಲ್ಲಿ ಆಯೋಜನೆಗೊಂಡಿದ್ದ ಬೂತ್ ಕಮಿಟಿ ಸಭೆಯನ್ನು ಸಭೆಯಲ್ಲಿ ಪಾಲ್ಗೊಂಡು, ಹಾಸನ ಜಿಲ್ಲೆಯಲ್ಲಿ ಗೆಲ್ಲುವ ರಣತಂತ್ರ ರೂಪಿಸಿದರು.

ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಬಿಜೆಪಿ ನಾಯಕರ ಭರವಸೆಗಳು ಕಾರ್ಯಕರ್ತರಲ್ಲಿ ಹಾಗೂ ಜನ ಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದರೆ ವೇದಿಕೆಯ ಮೇಲೆ ಭಾಷಣ ಮಾಡಿದ ನಾಯಕರು ಜೆಡಿಎಸ್ ಪಕ್ಷದ ವಿರುದ್ಧವಾಗಲೀ, ಜೆಡಿಎಸ್ ನಾಯಕರ ವಿರುದ್ಧವಾಗಲಿ ತುಟಿ ಬಿಚ್ಚಲಿಲ್ಲ. ಬದಲಿಗೆ ಬಿಜೆಪಿ ನಾಯಕರು ಎಂದಿನಂತೆ ಕೇವಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು. ಬಿಜೆಪಿ ನಾಯಕರ ಈ ನಡೆ ಕುತೂಹಲ ಮೂಡಿಸಿದ್ದು, ಜೆಡಿಎಸ್ ಬಗ್ಗೆ ಬಿಜೆಪಿ ಮೃಧುಧೋರಣೆ ತೋರುತ್ತಿದೆಯಾ ಎನ್ನುವ ಅನುಮಾನ ಮೂಡಿಸಿದೆ.












Click it and Unblock the Notifications