ಚಿಕ್ಕಮಗಳೂರು: ಅರಣ್ಯದ ಮಧ್ಯದಲ್ಲಿ ಎರಡು ಕುಟುಂಬಗಳ ನರಕಯಾತನೆ ಜೀವನ
ಚಿಕ್ಕಮಗಳೂರು, ಆಗಸ್ಟ್, 17: ಚಿಕ್ಕಮಗಳೂರಿನ ಕುಂಡ್ರಿ ಗ್ರಾಮದ ತತ್ಕೋಳ, ಸಾರಗೋಡು ಮೀಸಲು ಅರಣ್ಯದಲ್ಲಿ ಎರಡು ಕುಟುಂಬಗಳು ನೆಲೆಸಿವೆ. ಈ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಾಳಿ ಹೆಚ್ಚಾಗಿದ್ದು, ಎರಡು ಕುಟುಂಬಗಳು ಕೈಯಲ್ಲಿ ಜೀವವನ್ನು ಹಿಡಿದು ಬದುಕುತ್ತಿದ್ದಾರೆ. ಇಲ್ಲಿಂದ ನಮ್ಮನ್ನು ಸ್ಥಳಾಂತರಿಸಿ ಎಂದು ಕೇಳಿಕೊಂಡರೂ ಕೂಡ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಪ್ರತಿ ಬಾರಿಯೂ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ಕೊಡುತ್ತಲೇ ಇದ್ದಾರೆ. ಅವರು ಮತ್ತೆ ಈ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಜನರು ಅಸಮಾಧಾನ ಹೊರಹಾಕಿದರು.
ಮೂಡಿಗೆರೆ ತಾಲೂಕಿನ ಬೆಳಗೋಡು ಬಳಿಯ ಕುಂಡ್ರಿ ಗ್ರಾಮದ ತತ್ಕೋಳ, ಸಾರಗೋಡು ಮೀಸಲು ಅರಣ್ಯದಲ್ಲಿ ಎರಡು ಕುಟುಂಬಗಳು ನೆಲೆಯೂರಿವೆ. ಮೀಸಲು ಅರಣ್ಯ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಎರಡು ಕುಟುಂಬಗಳ ದುಸ್ಥಿತಿ ಹೇಳತೀರದಾಗಿದೆ. ದಟ್ಟ ಕಾಡಿನ ಮಧ್ಯೆ ಇದ್ದ 80 ಕುಟುಂಬಗಳನ್ನು 15 ವರ್ಷಗಳ ಹಿಂದೆಯೇ ಸ್ಥಳಾಂತರಿದ್ದರು. ಆದರೆ ಈ ಎರಡು ಕುಟುಂಬಗಳನ್ನು ಮಾತ್ರ ಅಲ್ಲಿಯೇ ಉಳಿಸಿದ್ದರು.
ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ
ನಿಮ್ಮನ್ನು ಸ್ಥಳಾಂತರ ಮಾಡುತ್ತೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದರು. ಆದರೆ ಇದುವರೆಗೂ ಯಾವ ಅಧಿಕಾರಿಯೂ ಇತ್ತ ತಿರುಗಿಯೂ ನೋಡಿಲ್ಲ. ಇಲ್ಲಿಂದ ಬೇರೆಡೆಗೆ ಹೋಗುತ್ತೇವೆ ಎಂದರೂ ಅಧಿಕಾರಿಗಳು ನಮ್ಮನ್ನು ತಡೆಯುತ್ತಿದ್ದಾರೆ. ಯಾವುದೇ ದಾರಿ ಇಲ್ಲದೆ ನಾವು ಕಾಡು ಪ್ರಾಣಿಗಳ ನಡುವೆಯೇ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಅಲ್ಲಿನ ಜನರು ಅಳಲು ತೋಡಿಕೊಂಡರು.
ಭಯದಲ್ಲಿ ಜೀವನ ನಡೆಸುತ್ತಿರುವ ಜನರು
ಈ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿಯೇ ಇರುತ್ತದೆ. ಈ ಕುಟುಂಬಗಳ ಮೇಲೆ ಯಾವುದೇ ಕಾಡುಪ್ರಾಣಿಗಳು ದಾಳಿ ಮಾಡಿದರೂ ಕ್ಯಾರೆ ಅನ್ನುವವರಿಲ್ಲ. ಇವರು ರಾತ್ರಿ ಕಳೆಯುವುದಕ್ಕೆ ಕಾಯುತ್ತಿರುತ್ತಾರೆ. ಇನ್ನು ಈ ಪ್ರದೇಶದಲ್ಲಿ ಪ್ರಾಣಿಗಳು ಹೆಚ್ಚಾಗಿರುವುದರಿಂದ ಜನರು ಬೆಳಗಾದರೆ ಹೊರಗಡೆ ಹೋಗುವುದು ಹೇಗೆ ಎನ್ನುವ ಭಯಲ್ಲಿ ಬದುಕುತ್ತಿದ್ದಾರೆ. ಮನೆ ಬಾಗಿಲು ಬಳಿ ಕಾಡಾನೆ, ಹುಲಿ ಸೇರಿದಂತೆ ಇತರ ಕಾಡುಪ್ರಾಣಿಗಳ ಹೆಜ್ಜೆ ಗುರುತುಗಳಿರುತ್ತವೆ. ಸಂಜೆ 6 ಗಂಟೆ ಆಯ್ತು ಅಂದರೆ ಮನೆ ಸೇರಬೇಕು. ಇಲ್ಲವಾದರೆ ಬೇರೆಯವರ ಮನೆಯಲ್ಲಿ ಉಳಿಯಬೇಕು.
ಅರಣ್ಯದ ಮಧ್ಯೆ ಎರಡು ಕುಟುಂಬಗಳ ವಾಸ
ಇತ್ತೀಚೆಗೆ ಕಾಡಾನೆಯೊಂದು ನಮ್ಮ ಮೇಲೆ ದಾಳಿ ಮಾಡಿತ್ತು. ಇಲ್ಲಿ ಪ್ರಾಣಿಗಳ ದಾಳಿ ನಡುವೆಯೂ ನಾವು ಉಳಿದಿರುವುದೇ ಹೆಚ್ಚು. ಕಾಡಾನೆ, ಹುಲಿ, ಚಿರತೆ ಸೇರಿದಂತೆ ಹಲವು ಪ್ರಾಣಿಗಳು ದಟ್ಟ ಅಣ್ಯದಲ್ಲಿ ಓಡಾಡುತ್ತಲೇ ಇರುತ್ತವೆ. ಈ ದಟ್ಟ ಅರಣ್ಯದ ಮಧ್ಯೆ ಓಡಾಡಬೇಕು ಎಂದರೆ ಸುಲಭದ ಮಾತಲ್ಲ. ಕಾಡಿನ ಮಧ್ಯೆ ಈ ಎರಡು ಕುಟುಂಬಗಳ ಬದುಕು ಕಾಡುಪ್ರಾಣಿಗಳಿಗಿಂತ ಕಡೆ ಆಗಿದೆ.
ಸರ್ಕಾರದ ವಿರುದ್ಧ ಜನಾಕ್ರೋಶ
ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳಾಂತರ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಹೋಗುತ್ತಾರೆ. ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ನಮ್ಮ ಬದುಕು ನಿಜಕ್ಕೂ ದುರಂತವಾಗಿದೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಮನವಿ
ಒಟ್ಟಾರೆ ಕಾಫಿನಾಡಿನ ದಟ್ಟ ಅರಣ್ಯದಲ್ಲಿರುವ ಎರಡು ಕುಟುಂಬಗಳ ಬದುಕು ನರಕದಂತಾಗಿದೆ. ಇವರು ಕಾಡು ಪ್ರಾಣಿಗಳ ಜೊತೆ ಭಯದಲ್ಲೇ ಬದುಕುವಂತಾಗಿದೆ. ಐ.ಬಿ.ಎಸ್. ವಿದ್ಯುತ್ ತಂತಿ ಬೇಲಿಯನ್ನು ದಾಟಿಕೊಂಡು ಹೋಗಬೇಕು. ಹೊರಗಡೆ ಹೋದರೆ ಮತ್ತೆ ಹಿಂತಿರುಗಿ ಬರುತ್ತೇವೆ ಎಂಬ ನಂಬಿಕೆ ಇವರಿಗಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಕಾಡುಪ್ರಾಣಿಗಳ ಬಾಯಿಗೆ ಆಹಾರ ಆಗುವುದಂತೂ ನಿಶ್ಚಿತ. ಆದ್ದರಿಂದ ಇಲ್ಲಿನ ಜನರು ನಮ್ಮನ್ನು ಹೇಗದರೂ ಮಾಡಿ ಕಾಡಿನಿಂದ ಹೊರಗಡೆ ತಲುಪಿಸುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಬೇಡಿಕೊಳ್ಳುತ್ತಿದ್ದಾರೆ.
Recommended Video