ಅದ್ಧೂರಿಯಾಗಿ ನಡೆದ ಹಿರೇಮಗಳೂರು ಕೋದಂಡರಾಮ ಬ್ರಹ್ಮರಥೋತ್ಸವ
ಚಿಕ್ಕಮಗಳೂರು, ಮಾರ್ಚ್ 05: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಗರದ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 6 ಗಂಟೆಯಿಂದ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಆರಂಭವಾದವು. ಮುಂಜಾನೆ ಸುಪ್ರಭಾತ, ಅಲಂಕಾರ ಸೇವೆ, ಯಾತ್ರಾದಾನ ಉತ್ಸವ ಹಾಗೂ ಭ್ರಹ್ಮರಥ ಶಾಂತಿ ಹೋಮಗಳು ನಡೆದವು. ರಥೋತ್ಸವದ ಪ್ರಯುಕ್ತ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾದ ಮಾರಿಕಾಂಬೆ; ನಾಳೆಯಿಂದ ದರ್ಶನ
ಮಧ್ಯಾಹ್ನ 12.15 ರಿಂದ 1 ಗಂಟೆ ವರೆಗೆ ಅಭಿಜಿನ ಮಹೂರ್ತದಲ್ಲಿ ವಿವಿಧ ಧಾರ್ಮಿಕ ವಿಧಿಗಳು ನಡೆದ ನಂತರ, ಕನ್ನಡ ರಾಮನ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸುತ್ತಿದ್ದಂತೆ ಅಲ್ಲಿ ಸೇರಿದ್ದ ಸಾವಿರಾರು ಭಕ್ತರು ಹರೇ ರಾಮ, ಗೋವಿಂದಾ.. ಗೋವಿಂದಾ ಎನ್ನುವ ಘೋಷಣೆಗಳನ್ನು ಕೂಗಿದರು.
ಪಾಚರಾತ್ರ ಆಗಮೋಕ್ತವಾಗಿ ಬಲಿಪೂಜೆ ನಡೆದ ನಂತರ ಮಂಗಳವಾದ್ಯದ ಜೊತೆಗೆ ಕಹಳೆಯ ಧ್ವನಿ ಮೊಳಗುತ್ತಿದ್ದಂತೆ ನೂರಾರು ಜನರು ಸೇರಿ ರಥವನ್ನು ಎಳೆದರು. ವೇದ ವಿದ್ವಾಂಸರ ಮಂತ್ರಘೋಷ, ಭಕ್ತರಿಂದ ಶ್ರೀರಾಮನ ಭಜನೆಯೊಂದಿಗೆ ರಥವವನ್ನು ದೇವಸ್ಥಾನದ ಆವರಣದ ರಸ್ತೆಯಲ್ಲಿ ಎಳೆದು ತರಲಾಯಿತು.
ಪ್ರಧಾನ ಅರ್ಚಕ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ವೇದಬ್ರಹ್ಮ ಶ್ರೀನಿವಾಸಾಚಾರ್ಯ, ವೇದಾಂತಾಚಾರ್ಯ, ಹಿರೇಮಗಳೂರಿನ ವೇದಾಧ್ಯಾಯಿ ವೈಷ್ಣವಸಿಂಹ ಅವರುಗಳು ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು.
ಮನೆಗಳ ಮುಂದೆ ರಂಗೋಲಿ ಹಾಕಿ ಉತ್ಸವ ಮೂರ್ತಿಯನ್ನು ಸ್ವಾಗತಿಸಿದ ಗ್ರಾಮಸ್ಥರು, ಆರತಿ ಎತ್ತಿ ಇಡುಗಾಯಿ ಒಡೆದು ಬೀಳ್ಕೊಟ್ಟರು, ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬೆಳಗ್ಗೆ ಕನ್ನಡ ರಾಮನಿಗೆ ಸುಪ್ರಭಾತ ಸೇವೆ, ವಿಶೇಷ ಅಲಂಕಾರ, ಬ್ರಹ್ಮರಥ ಶಾಂತಿ ಹೋಮ, ಯಾತ್ರಾ ದಾನ, ಶ್ರೀ ಕೃಷ್ಣಗಂಧೋತ್ಸವ ಜರುಗಿದವು.
ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು.