Get Updates
Get notified of breaking news, exclusive insights, and must-see stories!

ಹಿಜಾಬ್ ವಿವಾದ: ಫೆ.23ರವರೆಗೆ ನಿಷೇಧಾಜ್ಞೆ ಜಾರಿ ಮಾಡಿದ ಚಿಕ್ಕಮಗಳೂರು ಡಿಸಿ

ಚಿಕ್ಕಮಗಳೂರು, ಫೆಬ್ರವರಿ 16: ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯದಾದ್ಯಂತ ವ್ಯಾಪಿಸಿ, ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಲೇಜು ಪುನರಾರಂಭವಾಗಿದ್ದು, ಕೆಲ ಕಾಲೇಜು ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಫೆಬ್ರವರಿ 16ರಿಂದ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರಿನ ಶಾಲಾ- ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 16ರಿಂದ 23ರ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕಾಫಿನಾಡಿನಲ್ಲಿ ಮುಂದುವರಿದ ಹಿಜಾಬ್ ವಿವಾದ
ಕಾಫಿನಾಡಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಸರ್ಕಾರಿ ಕಾಲೇಜುಗಳಲ್ಲಿದ್ದ ವಿವಾದ ಈಗ ಖಾಸಗಿ ಕಾಲೇಜುಗಳಿಗೆ ವ್ಯಾಪಿಸಿದೆ. ಚಿಕ್ಕಮಗಳೂರು ನಗರದ ಮಲೆನಾಡು ವಿದ್ಯಾಸಂಸ್ಥೆ, ಮೌಂಟೆನ್‍ವ್ಯೂ ಕಾಲೇಜಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡಬೇಕೆಂದು ಕಾಲೇಜು ಆವರಣದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ದಿನವಿಡೀ ನಗರದಲ್ಲಿ ಹೈಡ್ರಾಮ ನಡೆಯಿತು.

Hijab Controversy: DC KN Ramesh Issued Order Section 144 in Colleges Surround Till February 23

ಕೇಸರಿ ಶಾಲು- ಹಿಜಾಬ್ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಪ್ರೌಢಶಾಲೆಗಳನ್ನು ಸೋಮವಾರದಿಂದ ಆರಂಭಿಸಲಾಗಿತ್ತು. ಪದವಿ ಕಾಲೇಜುಗಳನ್ನು ಬುಧವಾರದಿಂದ ಪ್ರಾರಂಭಿಸಲಾಗಿದ್ದು, ಐಡಿಎಸ್‍ಜಿ ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಹಾಜರಾದರೆ, ಮಲೆನಾಡು ವಿದ್ಯಾಸಂಸ್ಥೆ, ಮೌಂಟೆನ್‍ವ್ಯೂ ಕಾಲೇಜು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.

ಮೌಂಟೆನ್ ವ್ಯೂ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡದಿದ್ದರಿಂದ ಕಾಲೇಜು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಮುಸ್ಲಿಂ ಧರ್ಮಗುರು ಅಗ್ಸರ್ ಅಲಿ ಮಧ್ಯಪ್ರವೇಶಿಸಿ, ವಿದ್ಯಾರ್ಥಿನಿಯರ ಮನವೊಲಿಸಿದ ಬಳಿಕ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ವಾಪಸ್ಸಾದರು. ಮಲೆನಾಡು ವಿದ್ಯಾಸಂಸ್ಥೆಯ ಪದವಿ ತರಗತಿಯ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದರಿಂದ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾದರು.

ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು, ಕಾಲೇಜು ಗೇಟಿನ ಹೊರಭಾಗದಲ್ಲಿ ನಿಂತು 'ನಮಗೆ ನ್ಯಾಯಬೇಕು. ಹಿಜಾಬ್ ನಮ್ಮ ಹಕ್ಕು' ಹಿಜಾಬ್ ತೆಗೆಯುವುದಿಲ್ಲ, ಎಂದು ಘೋಷಣೆಗಳನ್ನು ಕೂಗಿದರು.

Hijab Controversy: DC KN Ramesh Issued Order Section 144 in Colleges Surround Till February 23

ಈ ವೇಳೆ ವಿದ್ಯಾರ್ಥಿನಿಯರ ಪೋಷಕರು ಬೆಂಬಲಕ್ಕೆ ನಿಂತರು. ಕೆಲ ಸಮಯದ ಬಳಿಕ ಕಾಲೇಜು ಆವರಣದೊಳಗೆ ತೆರಳಿದ ವಿದ್ಯಾರ್ಥಿನಿಯರು ತರಗತಿಯೊಳಗೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಹಠ ಹಿಡಿದರು. ಈ ವೇಳೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.

ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶವಿಲ್ಲ, ಹಿಜಾಬ್ ತೆಗೆದು ತರಗತಿ ಪ್ರವೇಶಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಸ್ಪಷ್ಟಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ ನ್ಯಾಯಾಲಯದ ಆದೇಶ ಪಾಲನೆ ಪರಿಶೀಲನೆಗೆ ರಚಿಸಿರುವ ತಹಶೀಲ್ದಾರ ಡಾ.ಕೆ.ಜೆ. ಕಾಂತರಾಜ್ ನೇತೃತ್ವದ ಸೋಮಶೇಖರ್, ತಿರುಮಲೇಶ್, ರವಿ ಕುಮಾರ್, ತಾರಾನಾಥ್ ತಂಡ ಸ್ಥಳಕ್ಕಾಗಮಿಸಿ ವಿದ್ಯಾರ್ಥಿನಿಯರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಮುಂದುವರೆಸಿದರು. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಪೋಷಕರು ಸಮುದಾಯದ ಮುಖಂಡರು ಕಾಲೇಜು ಗೇಟ್ ಮುಂದೆ ಪ್ರತಿಭಟಿಸಿ ಹಿಜಾಬ್ ಧರಿಸಿ ತರಗತಿಗೆ ಹೋಗಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಕಾಲೇಜು ಆಡಳಿತ ಮಂಡಳಿ, ಅಧಿಕಾರಿಗಳು, ಉಪನ್ಯಾಸಕರು ಮನವೊಲಿಸುವ ವಿಫಲ ಯತ್ನ ನಡೆಸಿದರು.

ಕುಂಕುಮ ಇಟ್ಟುಕೊಂಡು ಕೆಲವರು ತರಗತಿಗೆ ಹೋಗಿದ್ದಾರೆ. ಅವರಿಗೊಂದು ಕಾನೂನು ನಮಗೊಂದು ಕಾನೂನು ಎಂದು ಪ್ರಶ್ನಿಸಿದ ವಿದ್ಯಾರ್ಥಿನಿಯರು, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನಮಗೆ ಶಿಕ್ಷಣ ಮುಖ್ಯವಾಗಿರುವುದರಿಂದ ಆನ್‌ಲೈನ್ ತರಗತಿ ನಡೆಸಬೇಕು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಆಡಳಿತ ಮಂಡಳಿ ಮನಗಾಣಬೇಕು ಎಂದು ಮನವಿ ಮಾಡಿದರು.

Hijab Controversy: DC KN Ramesh Issued Order Section 144 in Colleges Surround Till February 23

ಕಾಲೇಜು ಗೇಟ್ ಹೊರಗೆ ಪೋಷಕರು ಪ್ರತಿಭಟನೆ ನಡೆಸಿದರೆ, ವಿದ್ಯಾರ್ಥಿನಿಯರು ಕಾಲೇಜು ಆವರಣದೊಳಗೆ ಪ್ರತಿಭಟನೆ ನಡೆಸಿದರು. ಡಿವೈಎಸ್‍ಪಿ ಪ್ರಭು, ನ್ಯಾಯಾಲಯದ ಮಧ್ಯಂತರ ಆದೇಶದ ಬಗ್ಗೆ ತಿಳಿ ಹೇಳಿದರು. ವಿದ್ಯಾರ್ಥಿನಿಯರು ಮಾತ್ರ ತಮ್ಮ ಹಠ ಮುಂದುವರೆಸಿದರು. ಅಧಿಕಾರಿಗಳು ವಿದ್ಯಾರ್ಥಿನಿಯರ ಮನವೊಲಿಸಲು ಪೋಷಕರ ಸಭೆ ನಡೆಸಲು ಮುಂದಾದರು. ಇದೇ ವೇಳೆ ಪಿಯು ವಿದ್ಯಾರ್ಥಿಗಳು ಕಾಲೇಜಿನ ಹೊರಗಡೆ ಪೋಷಕರೊಂದಿಗೆ ಕೈಜೋಡಿಸಿ ಪ್ರತಿಭಟನೆ ನಡೆಸಿದರು.

ಪೋಷಕರ ಸಭೆಯ ಬಳಿಕ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್ ಅಹ್ಮದ್, ಪೋಷಕರ ಸಭೆಯ ತೀರ್ಮಾನದಂತೆ ಪ್ರತಿಭಟನಾ ವಿದ್ಯಾರ್ಥಿಗಳಿಗೆ ಹಾಜರಾತಿ ಮಧ್ಯಂತರ ಪರೀಕ್ಷೆ ಮುಂದೂಡಿ, ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಆಡಳಿತ ಮಂಡಳಿ ಒಪ್ಪಿರುವ ವಿಷಯವನ್ನು ಪ್ರಸ್ತಾಪಿಸಿ ಪ್ರತಿಭಟನೆ ಹಿಂಪಡೆಯುವಂತೆ ಪೋಷಕರಲ್ಲಿ ಮನವಿ ಮಾಡಿದರು. ಬಳಿಕ ಪೋಷಕರು ಪ್ರತಿಭಟನೆ ಹಿಂಪಡೆದು ಸ್ಥಳದಿಂದ ತೆರಳಿದರು.

ಮಧ್ಯಾಹ್ನದ ವೇಳೆಗೆ ಧರ್ಮಗುರು ಅಗ್ಸರ್ ಅಲಿ ಮತ್ತು ಪೊಲೀಸರು ವಿದ್ಯಾರ್ಥಿನಿಯರ ಮನವೊಲಿಸಿ, ಕಾಲೇಜಿಗೆ ರಜೆ ಘೋಷಣೆ ಮಾಡಿದ ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.

ಪಿಎಫ್‌ಐ ಸಂಘಟನೆ ಜಿಲ್ಲಾಧ್ಯಕ್ಷ ಪ್ರತಿಭಟನೆಯಲ್ಲಿ ಭಾಗಿ
ಚಿಕ್ಕಮಗಳೂರು ನಗರದ ಎಂಇಎಸ್ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆಯಲ್ಲಿ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ನಿಷೇಧವಿರುವ ಶಾಲಾ ಆವರಣಕ್ಕೆ ಪ್ರವೇಶ ನೀಡಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+