ಮತ್ತೆ ರೇವಣ್ಣ ಟೆಂಪಲ್ ರನ್; ಸರ್ಕಾರ ಉಳಿವಿಗೆ ಶಾರದಾಂಬೆಗೆ ಪೂಜೆ
ಚಿಕ್ಕಮಗಳೂರು, ಜುಲೈ 21 : ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ಟೆಂಪಲ್ ರನ್ ಮುಂದುವರೆದಿದೆ. ಶೃಂಗೇರಿಗೆ ಅವರು ಭೇಟಿ ನೀಡಿದ್ದು, ತಾಯಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಜುಲೈ ತಿಂಗಳಿನಲ್ಲಿಯೇ 3ನೇ ಬಾರಿ ಅವರು ಶೃಂಗೇರಿಗೆ ಭೇಟಿ ಕೊಟ್ಟಿದ್ದಾರೆ.
ಭಾನುವಾರ ಮುಂಜಾನೆ 5.30ಕ್ಕೆ ಎಚ್. ಡಿ. ರೇವಣ್ಣ ಶೃಂಗೇರಿಗೆ ಆಗಮಿಸಿದರು. ತಾಯಿ ಶಾರದಾಂಬೆ ಮತ್ತು ತೋರಣ ಗಣಪತಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ 7.30ಕ್ಕೆ ವಾಪಸ್ ತೆರಳಿದರು. ಬರಿಗಾಲಿನಲ್ಲಿ ರೇವಣ್ಣ ಆಗಮಿಸಿದ್ದು ವಿಶೇಷವಾಗಿತ್ತು.

ಜುಲೈ ತಿಂಗಳಿನಲ್ಲಿಯೇ ಮೂರು ಬಾರಿ ರೇವಣ್ಣ ಶಾರದಾಂಬೆ ದರ್ಶನಕ್ಕಾಗಿ ಆಗಮಿಸಿದ್ದಾರೆ. ಸೋಮವಾರ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಅಂತಿಮ ಹಂತದ ಚರ್ಚೆ ನಡೆಯಲಿದೆ. ಅದಕ್ಕಾಗಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಎಚ್. ಡಿ. ದೇವೇಗೌಡರ ಕುಟುಂಬ ಹಲವು ಬಾರಿ ಶೃಂಗೇರಿಗೆ ಭೇಟಿ ಕೊಟ್ಟಿದೆ. ಹಲವು ಹೋವು, ವಿಶೇಷ ಪೂಜೆಗಳನ್ನು ಸಲ್ಲಿಸಿದೆ. ಸೋಮವಾರ ಮಹತ್ವದ ದಿನವಾದ ಕಾರಣ ಭಾನುವಾರ ವಿಶೇಷ ಪೂಜೆ ಮಾಡಿಸಲಾಗಿದೆ.
ಗುರುವಾರ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆಯನ್ನು ಆರಂಭಿಸಲಾಗಿದೆ. ಸೋಮವಾರ ಈ ಚರ್ಚೆ ಪೂರ್ಣಗೊಳ್ಳಲಿದ್ದು, ಮತದಾನ ನಡೆಯಲಿದೆ. ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಹಿನ್ನಲೆಯಲ್ಲಿ ದೇವರ ಮೊರೆ ಹೋಗಲಾಗಿದೆ.












Click it and Unblock the Notifications