ಬಿ. ಎಸ್. ರಾಜು ಅಧಿಕಾರ ಸ್ವೀಕಾರ; ಹುಟ್ಟೂರು ಅಜ್ಜಂಪುರದಲ್ಲಿ ಸಂಭ್ರಮ
ಚಿಕ್ಕಮಗಳೂರು, ಮೇ 01; ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಯೋಧ ಬಿ. ಎಸ್. ರಾಜು ಭಾನುವಾರ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮನೋಜ್ ನರವಣೆ ಸೇನೆಯ ಮುಖ್ಯಸ್ಥರಾಗಿ ನೇಮಕವಾದ ನಂತರ ಅವರಿಂದ ತೆರವಾದ ಸ್ಥಾನಕ್ಕೆ ಕನ್ನಡಿಗ ಬಿ. ಎಸ್. ರಾಜು ನೇಮಕಗೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬಿ. ಎಸ್. ರಾಜು ಸ್ವಗ್ರಾಮ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬಿ. ಎಸ್. ರಾಜು ಪ್ರಪಂಚದ 3ನೇ ಶಕ್ತಿಯುತ ಸೇನೆಯಾಗಿರುವ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗುತ್ತಿರುವುದಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಈ ನಡುವೆ ಬಗ್ಗವಳ್ಳಿಯಲ್ಲಿ ಗ್ರಾಮದಲ್ಲೂ ಕೂಡ ತಮ್ಮೂರಿನ ಹುಡುಗ ಸೇನೆಯ ಎರಡನೇ ಅತ್ಯುನ್ನತ ಸ್ಥಾನ ಅಲಂಕರಿಸುತ್ತಿರುವುದಕ್ಕೆ ಸಂಭ್ರಮ ಮನೆ ಮಾಡಿದೆ. ಸುದ್ದಿ ಗೊತ್ತಾಗುತ್ತಿದ್ದಂತೆ ಎಲ್ಲರೂ ಒಂದೆಡೆ ಸೇರಿ ಬಿ. ಎಸ್. ರಾಜುಗೆ ಅಭಿನಂದನೆ ಸಲ್ಲಿಸಿ, ಅವರು ನಡೆದು ಬಂದ ದಾರಿಯನ್ನು ಮೆಲುಕು ಹಾಕಿ, ಸಿಹಿ ಹಂಚಿ ಸಂಭ್ರಮಪಟ್ಟರು.

ಚಿಕ್ಕಮಗಳೂರಿನಲ್ಲಿ ಸಂಭ್ರಮ
ಬಿ. ಎಸ್. ರಾಜು ಹುಟ್ಟೂರು ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜನರು ದೇಶಕ್ಕೆ, ಬಿ. ಎಸ್. ರಾಜುಗೆ ಜಯಘೋಷ ಕೂಗಿ, ನಮ್ಮೂರಿನ ಹುಡುಗ ಮತ್ತಷ್ಟು ಎತ್ತರಕ್ಕೆ ಏರಲಿ ಅಂತಾ ಹಾರೈಸಿದರು. ಬಿ. ಎಸ್. ರಾಜು ಕುಟುಂಬದವರ ಸಂತಸಕ್ಕಂತೂ ಪಾರವೇ ಇರಲಿಲ್ಲ.
1963ರಲ್ಲಿ ಜನಿಸಿದ ಬಿ. ಎಸ್. ರಾಜು ಬಿ. ಎಸ್. ಸೋಮಶೇಖರ್, ವಿಮಲಾ ದಂಪತಿಯ ಪುತ್ರ. ಬಾಲ್ಯದಲ್ಲಿಯೇ ಸೈನ್ಯದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗಿ, 5ನೇ ತರಗತಿಗೆ ಬಿಜಾಪುರದ ಸೈನಿಕ ಶಾಲೆಗೆ ಸೇರಿ ಸೈನಿಕನಾಗುವ ಕನಸು ಕಂಡರು.

ಕಾರ್ಗಿಲ್ ಯುದ್ಧದಲ್ಲಿ ಬಹುದೊಡ್ಡ ಪಾತ್ರ
1984ರಲ್ಲಿ ಸೇನೆಗೆ ಸೇರಿದ ಬಿ. ಎಸ್. ರಾಜು ಸೇನೆಯ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿದ್ದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೇನೆ ಗೆಲ್ಲಲು ಕರುನಾಡಿನ ಬಿ. ಎಸ್. ರಾಜಯ ಪಾತ್ರವೂ ಬಹು ದೊಡ್ದದು. ಆ ಬಳಿಕ ಸೈನಿಕರಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದರು. ಈಗ ಸೇನೆಯ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ನಲ್ಲೂ ಮಾರ್ಗದರ್ಶನ
ಉರಿ ಪ್ರದೇಶದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ನಲ್ಲೂ ಕೂಡ ಬಿ. ಎಸ್. ರಾಜು ಬುದ್ಧಿವಂತಿಕೆ ಕೆಲಸ ಮಾಡಿತ್ತು ಅಂತ ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಸೇನೆಯ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವ ಕನ್ನಡಿಗರ ಹೆಮ್ಮೆ ಬಿ. ಎಸ್. ರಾಜು ದೇಶ ಕಾಯುವ ಅತ್ತುನ್ನತ ಕಾಯಕದಲ್ಲೂ ಜಯಕಂಡು ಮತ್ತುಷ್ಟು ಗೌರವ, ಕೀರ್ತಿ ಸಂಪಾದಿಸಲಿ ಎಂದು ಊರಿನ ಜನರು ಹಾರೈಸಿದ್ದಾರೆ.

ಕುಗ್ರಾಮದಲ್ಲಿ ಜನನ
ಬಗ್ಗುವಳ್ಳಿ ಎಂಬ ಕುಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಬಿ. ಎಸ್. ರಾಜು ಇಂದು ರಾಜ್ಯ, ದೇಶವೇ ಹೆಮ್ಮೆಪಡುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ. ದೇಶದ ಜನರು ಸೇರಿದಂತೆ ಶತ್ರುದೇಶಗಳು ಕೂಡ ಬಿ. ಎಸ್. ರಾಜು ಪೂರ್ವಪರ ತಿಳಿಯಲು ಗೂಗಲ್ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ದೇಶದ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಕರುನಾಡಿನ ಹೆಮ್ಮೆಯ ಸೈನಿಕ ಪಣ ತೊಡಲಿದ್ದಾರೆ.












Click it and Unblock the Notifications