17 ಎಕರೆ ಹುಲ್ಲುಗಾವಲು ಗೋಮಾಳದ ಮೇಲೆ ಸರ್ಕಾರದ ಕಣ್ಣು, ರೈತರ ಆಕ್ರೋಶ
ಚಿಕ್ಕಮಗಳೂರು,ಜು1: 300 ಎಕರೆ ಗೋಮಾಳವನ್ನ 4(1) ನೋಟಿಫಿಕೇಶನ್ ಮೂಲಕ ಅರಣ್ಯ ಇಲಾಖೆಗೆ ನೀಡಿರುವ ಜಿಲ್ಲಾಡಳಿತ ಜಾನುವಾರುಗಳಿಗಾಗಿ ಮೀಸಲಿಟ್ಟಿರುವ 17 ಎಕರೆ ಹುಲ್ಲುಗಾವಲಿನ ಗೋಮಾಳದ ಮೇಲೆ ಕಣ್ಣು ಹಾಕಿರುವುದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಪಾಪುರದಲ್ಲಿ ನಡೆದಿದೆ.
ತಾಲೂಕಿನ ಹಂಪಾಪುರ ಹಾಗೂ ಬೀಕನಹಳ್ಳಿಯಲ್ಲಿ ಸುಮಾರು 4000 ಸಾವಿರದಷ್ಟು ಜನಸಂಖ್ಯೆ ಇದೆ. ಅಂದಾಜು 2500-3000 ದಷ್ಟು ರಾಸುಗಳಿವೆ. ಇಲ್ಲಿನ ನೂರಾರು ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿವೆ. ಆದರೆ, ಇಲ್ಲಿನ ಸಾವಿರಾರು ರಾಸುಗಳು ಮೇಯಲು ಇರುವ ಸುಮಾರು 17 ಎಕರೆ ಗೋಮಾಳದ ಜಾಗವನ್ನ ಸರ್ಕಾರ ತೋಟಗಾರಿಕೆ ಇಲಾಖೆ ನೀಡಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತೋಟಗಾರಿಕೆ ಇಲಾಖೆ ಗಿಡ ನೆಡಲು ನೀಡಿರುವುದು ರೈತರ ಆಕ್ರೋಶ
ಸಾಲದಕ್ಕೆ ಈ ಗೋಮಾಳ ಅಪರೂಪದ ಗೋಮಾಳ. 17 ಎಕರೆಯೂ ಸಂಪೂರ್ಣ ಹುಲ್ಲುಗಾವಲಿನ ಗೋಮಾಳ. ಒಂದು ಹದ ಮಳೆ ಬಿದ್ದರೂ ಇಲ್ಲಿ ಹುಲ್ಲು ಹುಲುಸಾಗಿ ಬೆಳೆಯುತ್ತೆ. ಆದರೆ, ಸರ್ಕಾರ ಈ ಜಾಗವನ್ನೂ ತೋಟಗಾರಿಕೆ ಇಲಾಖೆ ಗಿಡ ನೆಡಲು ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ಜಾಗದ ಸರ್ವೇಗೆ ಬಂದ ಅಧಿಕಾರಿಗಳಿಗೆ ಸ್ಥಳೀಯರು ಮುಂದೆ ಹೋಗಲು ಬಿಟ್ಟಿಲ್ಲ. ಅಧಿಕಾರಿಗಳು ಸರ್ವೇಗೆ ಹೋಗುವ ಜಾಗದಲ್ಲೇ ಜೆಸಿಬಿಯಲ್ಲಿ ಗುಂಡಿ ತೆಗೆಸಿ ಹೊಂಡ ಮಾಡಿದ್ದಾರೆ. ದಾರಿಗೆ ಎತ್ತು-ಗಾಡಿಯನ್ನು ಅಡ್ಡ ನಿಲ್ಲಿಸಿ ಆಕ್ರೋಶ ಹೊರಹಾಕಿದ್ದಾರೆ.

ಸರ್ವೇಗೆ ಬಂದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ ಜನ
ಸರ್ಕಾರ ಗೋಮಾಳ ಜಾಗವನ್ನ ತಿದ್ದುಪಡಿ ಮಾಡಿ ತೋಟಗಾರಿಕೆ ಇಲಾಖೆ ನೀಡಿರುವುದು ರೈತರಿಗೆ ಗೊತ್ತಿಲ್ಲ. ವಿಷಯ ತಿಳಿದ ರೈತರು ಸರ್ವೇಗೆ ಬಂದ ಅಧಿಕಾರಿಗಳನ್ನ ವಾಪಸ್ ಕಳಿಸಿದ್ದಾರೆ. ಹಂಪಾಪುರ ಹಾಗೂ ಬೀಕನಹಳ್ಳಿ ಜಾನುವಾರುಗಳಿಗೆ ಈ ಜಾಗ ಬಿಟ್ಟರೆ ಮೇಯಲು ಬೇರೆ ಜಾಗವಿಲ್ಲ. ಇದನ್ನೂ ಸರ್ಕಾರ ವಶಪಡಿಸಿಕೊಂಡರೇ ರಾಸುಗಳಿಗೆ ಮೇವನ್ನ ಎಲ್ಲಿಂದ ತರುವುದು ಅನ್ನೋದು ರೈತರ ಆತಂಕ. ಹಾಗಾಗಿ, ಅರಣ್ಯ ಇಲಾಖೆಗೆ ನೀಡಿರುವು ಜಾಗದಲ್ಲೇ ತೋಟಗಾರಿಕೆ ಇಲಾಖೆಗೆ ಗಿಡ ನೆಡಲು ನೀಡಬಹುದು. ಇದೇ ಜಾಗ ಏಕೆ ಬೇಕು ಅನ್ನೋದು ರೈತರ ಪ್ರಶ್ನೆ.

ಈ ಜಾಗ ಮಾತ್ರ ಬಿಡಲ್ಲ ಎನ್ನುತ್ತಿರುವ ಜನರು
ಇಲ್ಲಿನ ನೂರಾರು ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿವೆ. ರೈತರು ಕೃಷಿ ಮಾಡಿಕೊಂಡು ಜಾನುವಾರುಗಳನ್ನ ಎಲ್ಲಿಗೋ ಮೇಯಲು ಹೊಡೆಯುವುದು. ಸುತ್ತಲೂ ಕಾಡಿದೆ. ಮೇಯಲು ಹೋದ ರಾಸುಗಳು ಸಂಜೆ ಮನೆಗೆ ಬರುವುದೇ ಗ್ಯಾರಂಟಿ ಇಲ್ಲ. ಈ ಪ್ರದೇಶ ಹುಲ್ಲುಗಾವಲು ಪ್ರದೇಶ. ಒಂದು ಹದ ಮಳೆ ಬಂದರೂ ಹುಲ್ಲು ಸಲೀಸಾಗಿ ಬೆಳೆಯುತ್ತೆ. ರಾಸುಗಳಿಗೆ ಆಹಾರವಾಗುತ್ತೆ. ಹಾಗಾಗಿ, ನಮಗೆ ಪರ್ಯಾಯ ಜಾಗವೂ ಬೇಡ. ಏನೂ ಬೇಡ. ಸರ್ಕಾರ ಬೇರೆ ಯಾವ ಜಾಗದಲ್ಲಿ ಏನೂ ಬೇಕಾದರು ಮಾಡಿಕೊಳ್ಳಲಿ. ಆದರೆ, ನಾವು ಪ್ರಾಣ ಬೇಕಾದರೂ ಕೊಡುತ್ತೇವೆ ಆದರೆ, ಈ ಜಾಗ ಮಾತ್ರ ಬಿಡಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಆಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್
ಇನ್ನು ಹಂಪಾಪುರ, ಬೀಕನಗಳ್ಳಿ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯುವ ವಿಚಾರ ತಿಳಿದ ಪೊಲೀಸರು ಸ್ಥಳದಲ್ಲಿ ಹತ್ತಾರು ಪೊಲೀಸರನ್ನ ನಿಯೋಜನೆ ಮಾಡಿದ್ದರು, ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನಚರಿಕಾ ಕ್ರಮವಾಗಿ ಪೊಲೀಸರನ್ನ ಪೊಲೀಸ್ ಇಲಾಖೆ ನಿಯೋಜನೆ ಮಾಡಿತ್ತು.












Click it and Unblock the Notifications