ಪರೀಕ್ಷೆ ಪಾಸ್ ಮಾಡು, ಹುಡ್ಗಿ ಲವ್ ಮಾಡುವಂತೆ ಮಾಡು.. ದೇವರ ಹುಂಡಿಯಲ್ಲಿ ಹೀಗೊಂದು ಲೆಟರ್ ಪತ್ತೆ
ಚಿಕ್ಕಮಗಳೂರು ಸೆಪ್ಟೆಂಬರ್ 20: ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿ ಕೂರಿಸಿದ್ದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 18ರಂದು ವಿಸರ್ಜನೆ ಮಾಡಲಾಯಿತು. ಇಂದು ಆ ದೇವರ ಹುಂಡಿಯಲ್ಲಿನ ಹಣ ಎಣಿಕೆ ಮಾಡುವ ವೇಳೆ ಕೆಲ ಪತ್ರಗಳು ಲಭ್ಯವಾಗಿವೆ. ಈ ಪತ್ರಗಳಲ್ಲಿ ಭಕ್ತರು ಗಣೇಶನಿಗೆ ಹಲವಾರು ಬೇಡಿಕೆಗಳನ್ನು ಇಟ್ಟಿದ್ದು ಕಂಡು ಬಂದಿದೆ. ಗಣೇಶನ ಹುಂಡಿಯಲ್ಲಿ ಸಿಕ್ಕ ಪತ್ರಗಳಲ್ಲಿ ಬರೆದ ವಿಷಯಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ.
'ಪರೀಕ್ಷೆ ಪಾಸ್ ಮಾಡು, ಹುಡ್ಗಿ ಲವ್ ಮಾಡುವಂತೆ ಮಾಡು.. ಸಿ.ಟಿ.ರವಿ ಮುಂದಿನ ಸಿಎಂ ಆಗಬೇಕು.. 'ಎಂಬಿತ್ಯಾದಿ ಬೇಡಿಕೆಗಳನ್ನು ಬರೆದು ಭಕ್ತರು ಗಣಪನ ಹುಂಡಿಗೆ ಹಾಕಿದ್ದಾರೆ. ಅಲ್ಲದೆ 'ಆಸ್ತಿ-ದುಡ್ಡು ಸಿಗುವಂತೆ ಮಾಡು... ಮದುವೆ ಮಾಡು' ಅಂತೆಲ್ಲಾ ಪತ್ರಗಳನ್ನು ಬರೆದು ಗಣೇಶನ ಹುಂಡಿಗೆ ಹಾಕಲಾಗಿದೆ.

ಸಾಮಾನ್ಯವಾಗಿ ದೇವರಿಗೆ ಭಕ್ತರು ಹಲವಾರು ಬೇಡಿಕೆಯನ್ನು ಇಡುತ್ತಾರೆ. ಆದರೆ ಚಿಕ್ಕಮಗಳೂರಿನ ದೇವರ ಹುಂಡಿಯಲ್ಲಿ ಸಿಕ್ಕ ಪತ್ರವೊಂದರಲ್ಲಿ ಬರೆದ ವಿಷಯಗಳು ಅಚ್ಚರಿ ಮೂಡಿಸುವಂತಿವೆ. ಫಾರ್ ದಿ ಫಸ್ಟ್ ಟೈಂ ದೇವರ ಹುಂಡಿಯಲ್ಲಿ ಹಿಂದುತ್ವ, ಹಿಂದೂಗಳ ಬಗ್ಗೆ ಪತ್ರ ಬರೆದಿರುವುದು ಕಂಡು ಬಂದಿದೆ.
ಹೌದು.. ದೇಶಭಕ್ತನೊಬ್ಬ ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು. ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು ಎಂದು ದೇವರಿಗೆ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಮತ್ತೊಂದು ಪತ್ರದಲ್ಲಿ ಸಿ.ಟಿ.ರವಿ ಮುಂದಿನ ಸಿಎಂ ಆಗಬೇಕು ಎಂದು ಬರೆಯಲಾಗಿದೆ.

ಸಾಬರ (ಮುಸ್ಲಿಂ) ಈದ್ ಮಿಲಾದ್ ಮೆರವಣಿಗೆಗಿಂತ ಹಿಂದೂಗಳ ಮೆರವಣಿಗೆ ಜೋರಾಗಬೇಕು. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಇರಬೇಕು. ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು ಎಂದು ಮತ್ತೊಬ್ಬ ಭಕ್ತ ಪತ್ರದ ಮೂಲಕ ದೇವರಿಗೆ ತನ್ನ ಬೇಡಿಕೆ ಇಟ್ಟಿದ್ದಾನೆ. ಮತ್ತೊಂದು ಪತ್ರದಲ್ಲಿ ನನ್ನ ಮಗನಿಗೆ ಮದುವೆ ಮಾಡು, ಮುಂದಿನ ವರ್ಷ ನಿನ್ನ ಸೇವೆ ಮಾಡ್ತೀನಿ ಎಂದು ಹಿಂದೂ ಮಹಾಸಭಾ ಗಣಪತಿಯ ಹುಂಡಿಯಲ್ಲಿ ಸಿಕ್ಕ ಪತ್ರದಲ್ಲಿ ಬರೆಯಲಾಗಿದೆ.
ಇನ್ನೂ ದೇವರ ಹುಂಡಿಯಲ್ಲಿ ಸಿಕ್ಕ ಮತ್ತೊಂದು ಪತ್ರದಲ್ಲಿ ಪರೀಕ್ಷೆ ಪಾಸ್ ಮಾಡು, ಹುಡ್ಗಿ ಲವ್ ಮಾಡುವಂತೆ ಮಾಡು ಎಂದು ಬರೆಯಲಾಗಿದೆ. ಹೀಗೆ ಗಣೇಶನಿಗೆ ಆತನ ಭಕ್ತರು ಚಿತ್ರ ವಿಚಿತ್ರವಾಗಿ ಬೇಡಿಕೆಯನ್ನು ಇಟ್ಟಿರುವುದು ಕಂಡು ಬಂದಿದೆ.












Click it and Unblock the Notifications