ಚಿಕ್ಕಮಗಳೂರಲ್ಲಿ ಹಕ್ಕಿಗಳ ಸಾವು; ಜನರಲ್ಲಿ ಹಕ್ಕಿ ಜ್ವರದ ಆತಂಕ
ಚಿಕ್ಕಮಗಳೂರು, ಜನವರಿ 11: ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಜನರು ಆತಂಕಗೊಂಡಿದ್ದಾರೆ. ಚಿಕ್ಕಮಗಳೂರು ನಗರದ ಬಡಾವಣೆಯೊಂದರಲ್ಲಿ ನಾಲ್ಕು ಹಕ್ಕಿಗಳು ಸತ್ತು ಬಿದ್ದಿದ್ದು, ಜನರಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ.
ಜಯನಗರ ಬಡಾವಣೆಯ 7ನೇ ತಿರುವಿನಲ್ಲಿ ನಾಲ್ಕು ಹಕ್ಕಿಗಳು ಸತ್ತು ಬಿದ್ದಿವೆ. ಇವು ಹಕ್ಕಿಜ್ವರದಿಂದಲೇ ಸತ್ತಿರಬಹುದೆಂದು ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳಿಗೆ ಸಹ ಈ ಕುರಿತು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ನಿಗದಿತ ಸಮಯದೊಳಗೆ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಆದ್ದರಿಂದ, ಬೀದಿ ನಾಯಿಗಳು ಸತ್ತು ಬಿದ್ದಿದ್ದ ಹಕ್ಕಿಗಳನ್ನು ಹೊತ್ತಿಕೊಂಡು ಹೋಗಿವೆ. ಇದಕ್ಕೆ ಜನರು ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಚಿಕ್ಕಮಗಳೂರು ನಗರದಲ್ಲಿ ಕೆಲ ದಿನಗಳಿಂದ ವಿವಿಧ ಜಾತಿಯ ಹಕ್ಕಿಗಳು ಎಲ್ಲೆಂದರಲ್ಲಿ ಸತ್ತು ಬೀಳುತ್ತಿದ್ದು, ಈ ಹಕ್ಕಿಗಳು ಹಕ್ಕಿಜ್ವರದಿಂದ ಸಾಯುತ್ತಿವೆಯೋ? ಅಥವಾ ಬೇರೆ ರೋಗಗಳಿಂದ ಸಾಯುತ್ತಿವೆಯೋ? ಎಂಬುದು ಚರ್ಚೆಗೆ ಕಾರಣವಾಗಿದೆ.
ಇದು ಹಕ್ಕಿ ಜ್ವರವೇ? ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ದೃಢಪಡಿಸುವ ಮೂಲಕ ಜನರಲ್ಲಿ ಉಂಟಾಗಿರುವ ಆತಂಕಕ್ಕೆ ತೆರೆ ಎಳೆಯಬೇಕಾಗಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಎರಡು ಮೈನಾಗಳು ಮತ್ತು ಅರಣ್ಯ ಇಲಾಖೆ ಬಳಿ ಕಾಗೆಗಳು ಸತ್ತು ಬಿದ್ದಿದ್ದವು. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು.
ಬಿಸಿಲಿನ ಝಳಕ್ಕೆ ಮೈನಾ ಸಾವಪ್ಪಿದ್ದರೆ, ವಿದ್ಯುತ್ ಸ್ಪರ್ಶದಿಂದ ಕಾಗೆ ಸಾವನ್ನಪ್ಪಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಈಗ ಪುನಃ ನಾಲ್ಕು ಹಕ್ಕಿಗಳು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.












Click it and Unblock the Notifications