ದತ್ತಪೀಠಕ್ಕೆ ವ್ಯವಸ್ಥಾಪನ ಸಮಿತಿ ರಚನೆ ಬೆನ್ನಲ್ಲೇ ಎದುರಾದ ಮತ್ತೊಂದು ಸಂಕಷ್ಟ
ಚಿಕ್ಕಮಗಳೂರು, ಡಿಸೆಂಬರ್, 01: ಚಿಕ್ಕಮಗಳೂರಿನಲ್ಲಿ ಡಿಸೆಂಬರ್ 6,7,8 ರಂದು ನಡೆಯುವ ದತ್ತಜಯಂತಿಗೆ ಭರ್ಜರಿ ತಯಾರಿ ನಡೆದಿದೆ. ದತ್ತ ಜಯಂತಿಯನ್ನು ಆಚರಣೆ ಮಾಡಲು ಹೈಕೋರ್ಟ್ ಕೂಡ ಅನುಮತಿ ನೀಡಿದೆ. ಈ ಹಿನ್ನೆಲೆ ದತ್ತಭಕ್ತರಲ್ಲಿ ಸಂತೋಷ ಮನೆ ಮಾಡಿದೆ. ಇನ್ನು ಕೋರ್ಟ್ ಅನುಮತಿಯಿಂದ ದಶಕಗಳ ಕನಸು ನನಸಾದಂತಿದೆ.
ಸರ್ಕಾರದ ಶಿಫಾರಸ್ಸಿನಂತೆ ದತ್ತಪೀಠದಲ್ಲಿ ಪೂಜಾ ವಿಧಿವಿಧಾನ ನಡೆಸಲು ಮತ್ತು ದತ್ತ ಪಾದುಕೆ ದರ್ಶನ ಮಾಡಲು ಕೋರ್ಟ್ ಅವಕಾಶ ನೀಡಿದೆ. ಹಿಂದೂ ಅರ್ಚಕರಿಂದಲೇ ದತ್ತಾತ್ರೇಯನಿಗೆ ಪೂಜೆ ನಡೆಯಬೇಕು ಅನ್ನುವ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಹೀಗಾಗಿ ಈ ಹಿಂದಿನ ವರ್ಷದಂತೆ ಲಕ್ಷಕ್ಕೂ ಅಧಿಕ ಜನ ನಗರದಲ್ಲಿ ನಡೆಯಲಿರುವ ಶೋಭಾಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಸಾವಿರಾರು ಜನರು ದತ್ತಪೀಠವನ್ನು ಏರಲಿದ್ದಾರೆ. ಒಂದು ಕಡೆ ಹಿಂದೂ ಸಂಘಟನೆಗಳು ದತ್ತಜಯಂತಿ ಆಚರಿಸಲು ತುದಿಗಾಲಲ್ಲಿ ನಿಂತಿದ್ದರೆ, ಮತ್ತೊಂದೆಡೆ ಕೋಮು ಸೌಹಾರ್ದ ವೇದಿಕೆ ಸರ್ಕಾರ ರಚಿಸಿರುವ ವ್ಯವಸ್ಥಾಪನ ಸಮಿತಿಯ ವಿರುದ್ಧವೇ ಆಕ್ಷೇಪ ವ್ಯಕ್ತಪಡಿಸಿದೆ.

ಸಮಿತಿ ರಚಿಸುವಂತೆ ಹೇಳಿದ್ದ ಕೋರ್ಟ್
ಹೈಕೋರ್ಟ್ 8 ಜನರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಹೇಳಿತ್ತು. ಆದರೆ ಒಂದೇ ಕೋಮಿಗೆ ಸೇರಿದ 7 ಜನರನ್ನು, ಮುಸ್ಲಿಂ ಧರ್ಮಕ್ಕೆ ಸೇರಿದ ಕೇವಲ ಒಬ್ಬರನ್ನು ಸಮಿತಿ ಸದಸ್ಯರಾಗಿ ನೇಮಿಸಿರುವುದು ಯಾವ ನ್ಯಾಯ? ಅಂತಾ ಪ್ರಶ್ನೆ ಮಾಡಿದೆ. ಈ ವಿಚಾರವಾಗಿ ನಾವು ಹೈಕೋರ್ಟ್, ಸುಪ್ರಿಂ ಕೋರ್ಟ್ನಲ್ಲಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸಮಾನ ಸದಸ್ಯರು ಸಮಿತಿಯಲ್ಲಿ ಇಲ್ಲದೇ ಇರುವುದರಿಂದ ಇದು ಅನ್ಯಾಯವಾದಂತಾಗಿದೆ. ನೀವು ಕೋರ್ಟ್ನ ನಿರ್ದೇಶನವನ್ನೇ ಗಾಳಿಗೆ ತೂರುತ್ತಿದ್ದೀರಿ. ಸರ್ಕಾರ ಹಾಗೂ ಮುಜರಾಯಿ ಇಲಾಖೆ ವಿರುದ್ಧ ನಾವು ಮೊಕದ್ದಮೆ ದಾಖಲಿಸುತ್ತೇವೆ ಅಂತಾ ಕೋಮು ಸೌಹಾರ್ದ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಸಮಿತಿಯ ಆಸ್ತಿತ್ವದ ಬಗ್ಗೆಯೇ ಪ್ರಶ್ನೆ
ದತ್ತಪೀಠದ ಉಮೇದುವಾರಿಕೆ ಬಗ್ಗೆ ಇನ್ನೂ ಅಂತಿಮ ತೀರ್ಪು ಬಂದಿಲ್ಲ. 2018ರಲ್ಲಿ ದತ್ತಪೀಠದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿಯನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಅದನ್ನು ರದ್ದುಪಡಿಸಿದ ಹೈಕೋರ್ಟ್ ಏಕಸದಸ್ಯಪೀಠ ಪ್ರಕರಣವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಹೊಸದಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ 2021ರ ಸೆಪ್ಟೆಂಬರ್ 28ರಂದು ನಿರ್ದೇಶಿಸಿತ್ತು. ಆ ಬಳಿಕ ಸರ್ಕಾರ ವ್ಯವಸ್ಥಾಪನ ಸಮಿತಿಯನ್ನು ಇತ್ತೀಚಿಗೆ ರಚಿಸಿತ್ತು. ಆದರೂ ಇದೀಗ ದತ್ತಜಯಂತಿ ಬೆನ್ನಲ್ಲೇ ಸಮಿತಿಯ ಆಸ್ತಿತ್ವದ ಬಗ್ಗೆಯೇ ಪ್ರಶ್ನೆ ಮೂಡಿದ್ದು, ಭಾರಿ ಆಕ್ಷೇಪಗಳು ವ್ಯಕ್ತವಾಗಿವೆ. ಈ ಮಧ್ಯೆ ದತ್ತಜಯಂತಿಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ದತ್ತಪೀಠದ ವಿಚಾರವಾಗಿ ಮತ್ತೆನಾದರೂ ಸಂಘರ್ಷ ಎದುರಾಗುತ್ತಾ? ಅನ್ನುವ ಆತಂಕ ಎದುರಾಗಿದೆ.












Click it and Unblock the Notifications