ಧರ್ಮಸ್ಥಳ ಸನ್ನಿಧಿ ತಲುಪಿದ ಚಿಕ್ಕಮಗಳೂರು ನಗರಸಭೆ ವಿವಾದ!
ಚಿಕ್ಕಮಗಳೂರು, ಮೇ 25; ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರು, ಸದಸ್ಯರ ಹಗ್ಗಜಗ್ಗಾಟ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಒಬ್ಬರ ಮೇಲೋಬ್ಬರು ದೂರು ನೀಡಿ ಪ್ರಕರಣ ದಾಖಲಾದ ಬೆನ್ನಲ್ಲೆ ಅಭಿವೃದ್ಧಿ ಆಡಳಿತದ ವಿವಾದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಾಗಿಲು ಬಡಿದಿದೆ.
ನಗರಸಭೆಯ ಬಿಜೆಪಿ-ಜೆಡಿಎಸ್ನ ಅಭಿವೃದ್ಧಿಯ ಆಂತರಿಕ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಶೀತಲ ಸಮರ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಸದ್ಯಕ್ಕೆ ಧರ್ಮಸ್ಥಳ ತಲುಪಿದೆ.
ಜೆಡಿಎಸ್-ಬಿಜೆಪಿ ಸದಸ್ಯರುಗಳ ಒಳಜಗಳದಿಂದ ಒಬ್ಬರ ಮೇಲೋಬ್ಬರು ದೂರು ನೀಡಿದ ಪರಿಣಾಮ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಜೆಡಿಎಸ್ನಿಂದ ನಗರಸಭೆ ಸದಸ್ಯರಾಗಿರುವ ಕುಮಾರ್ಗೌಡ ನಗರಸಭೆಗೆ ಪ್ರವೇಶಿಸುವಾಗ ನೀವು ನಿಮ್ಮ ವಾರ್ಡಿನ ಕೆಲಸಗಳನ್ನು ಮಾತ್ರ ಮಾಡಿಸಬೇಕು ಎಂದು ದ್ವಾರಪಾಲಕ ಪ್ರಕಾಶ್ ತಡೆದಿದ್ದಾರೆ. ದ್ವಾರಪಾಲಕನ ವರ್ತನೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇಬ್ಬರ ನಡುವಿನ ಜಗಳದ ವೇಳೆ ಕುಮಾರ್ಗೌಡ ನನ್ನನ್ನು ಬೈದರು, ಜಾತಿ ನಿಂದನೆ ಮಾಡಿದ್ದಾರೆಂದು ದ್ವಾರಪಾಲಕ ಪ್ರಕಾಶ ನಗರಸಭೆ ಸದಸ್ಯನ ವಿರುದ್ಧ ದೂರು ನೀಡಿದ್ದಾರೆ.

ತನ್ನನ್ನ ತುಳಿಯುವ ಯತ್ನ ನಡೆಯುತ್ತಿದೆ
ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದರು ಕುಮಾರಗೌಡ, "ಬಿಜೆಪಿ ಮತ್ತು ನಗರಸಭೆ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾತೆತ್ತಿದರೆ ನಮ್ಮದು ಭ್ರಷ್ಟಾಚಾರ ರಹಿತ ಅಭಿವೃದ್ಧಿ ಆಡಳಿತ ಅಂತೀರಲ್ಲ, ಹಾಗಾದರೆ ನಾನು ಆರ್.ಟಿ.ಐ.ನಲ್ಲಿ ಕೇಳಿದ ದಾಖಲೆಗಳ ವಿವರ ಏಕೆ ನೀಡಿಲ್ಲ. ಇದುವರಗೆ ನಾನು ಕೇಳಿದ ಒಂದೂ ದಾಖಲೆಗಳಿಗೆ ಉತ್ತರಿಸಿಲ್ಲ. ನನ್ನ ವಿರುದ್ಧ ದೂರು ನೀಡುವ ಮೂಲಕ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿರುವುದಕ್ಕೆ ದೂರು ದಾಖಲಿಸಿ ನನ್ನನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.

ಸರ್ಕಾರಿ ಕಾರು ಬಳಸಿ ಪ್ರವಾಸ
"ನಗರಸಭೆಯ ಅಧ್ಯಕ್ಷ ವೇಣುಗೋಪಾಲ್ ಸರ್ಕಾರಿ ಕಾರಿನಲ್ಲಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬದ ಜೊತೆ ಪ್ರವಾಸ ಮಾಡುವ ಮೂಲಕ ಸರಕಾರದ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದರು. ಸರಕಾರದ ವಾಹನ, ನಮ್ಮ ತೆರಿಗೆ ದುಡ್ಡನ್ನು ನಗರಸಭೆ ಕೆಲಸಕ್ಕೆ ಮಾತ್ರ ಬಳಸಬೇಕು. ಹೊರ ಹೋಗಬೇಕೆಂದರೆ ಕಡತಗಳ ಜೊತೆ ಜಿಲ್ಲಾಧಿಕಾರಿ ಅನುಮತಿಯೂ ಬೇಕು. ಇವರು ಏನು ಇಲ್ಲದೆ, ಯಾವ ದಾಖಲೆಯೂ ಇಲ್ಲದೆ ಸಂಸಾರ ಸಮೇತ ಟ್ರಿಪ್ ಹೋಗಿದ್ದಾರೆ. ಹೊರಗಡೆ ಹೋದಾಗ ಹೆಚ್ಚು-ಕಮ್ಮಿಯಾದರೆ ಇನ್ಸುರೆನ್ಸ್ ಸಿಗುವುದು ಕೂಡ ಕಷ್ಟವಾಗುತ್ತದೆ. ಅದಕ್ಕೆ ಜವಾಬ್ದಾರಿ ಯಾರು?" ಎಂದು ಕುಮಾರ್ ಗೌಡ ಪ್ರಶ್ನಿಸಿದ್ದಾರೆ.

ಜಾತಿ ನಿಂದನೆ ಪ್ರಕರಣ ದಾಖಲು
ನಗರಸಭೆಯ ಮತ್ತೋರ್ವ ಜೆಡಿಎಸ್ ಸದಸ್ಯ ಗೋಪಿ ಅಧ್ಯಕ್ಷ ಬಿಜೆಪಿಯ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ನಗರಸಭೆಯ ಅಫಿಷಿಯಲ್ ವಾಟ್ಸಪ್ ಗ್ರೂಪಿನಿಂದ ನನ್ನನ್ನ ರಿಮೂವ್ ಮಾಡಿದ್ದರು. ಹಾಗಾಗಿ, ಅದರ ಬಗ್ಗೆ ಹಾಗೂ ನನ್ನ ವಾರ್ಡಿನ ಕೆಲಸದ ನಿಮಿತ್ತ ಅಧ್ಯಕ್ಷರ ಬಳಿ ಚರ್ಚಿಸಲು ಹೋಗಿದ್ದ ಸಂದರ್ಭದಲ್ಲಿ ಕೇಳಿದ್ದಕ್ಕೆ, ಅಧ್ಯಕ್ಷರು ಹಾಗೂ ಆಯುಕ್ತರು ನೀನು ಈ ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಏನು ಬೇಕಾದರು ಮಾಡಿಕೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆಂದು ಗೋಪಿ ನಗರ ಸಭೆಯ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ನನ್ನ ಮೇಲೆ ಸುಳ್ಳು ಪ್ರಕರಣ
ಸರಕಾರದ ವಾಹನದಲ್ಲಿ ಟೂರ್ ಹೋಗಿ ಬಂದ ಅಧ್ಯಕ್ಷ ವೇಣುಗೋಪಾಲ್ ಒಪ್ಪಿಕೊಂಡಿದ್ದಾರೆ. "ನಾನು ಪ್ರವಾಸ ಹೋಗಿದ್ದು ನಿಜ. ಆದರೆ, ಕಾರಿಗೆ ನನ್ನ ದುಡ್ಡಲ್ಲಿ ಡಿಸೇಲ್ ಹಾಕಿಸಿಕೊಂಡು ಹೋಗಿದ್ದೆ. ನನ್ನ ತಪ್ಪಿಲ್ಲದೇ ಹೋದರೂ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಅದಕ್ಕೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಅವರನ್ನ ನೀವೇ ನೋಡಿಕೊಳ್ಳಿ ಎಂದು ಕೈಮುಗಿದು ಬಂದಿದ್ದೇನೆ" ಎಂದು ತಿಳಿಸಿದರು.
ಹೀಗೆ ನಗರಸಭೆಯಲ್ಲಿರುವ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವಿನ ಕಾದಾಟ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಪ್ರಸ್ತುತ ದ್ವಾರಪಾಲಕ ಪ್ರಕಾಶ ಮೂಲಕ ಜೆಡಿಎಸ್ ಸದಸ್ಯ ಕುಮಾರಗೌಡ ವಿರುದ್ಧ , ಜೆಡಿಎಸ್ ಸದಸ್ಯ ಗೋಪಿ ಮೂಲಕ ನಗರಸಭೆಯ ಅಧ್ಯಕ್ಷ ವೇಣುಗೋಪಾಲ್ ಮತ್ತು ಕಮಿಷನರ್ ಬಸವಾರಾಜು ವಿರುದ್ಧ ದೂರುಗಳು ದಾಖಲಾಗಿವೆ. ಈ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೆ? ಎಂದು ಜನರು ಕೇಳುತ್ತಿದ್ದಾರೆ.

ಭದ್ರತೆಗಾಗಿ ಎಸ್ಪಿಗೆ ಪತ್ರ ಬರೆದ ವೇಣುಗೋಪಾಲ್
ಈ ಜಗಳ ಮಧ್ಯೆಯೇ ನನಗೆ ಗನ್ ಮ್ಯಾನ್ ನೀಡಿ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎಸ್ಪಿ ಅಕ್ಷಯ್ ಗೆ ಪತ್ರ ಬರೆದಿದ್ದಾರೆ. ನಾನು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆ ಯಾಗಿದ್ದೇನೆ, ನಾನು ಅಧ್ಯಕ್ಷನಾದಾಗಿನಿಂದ ಕಿಡಿಗೇಡಿಗಳು ನನಗೆ ತೊಂದರೆ ಕೊಡುತ್ತಿದ್ದಾರೆ. ನಾನು ಕುಟುಂಬದ ಜೊತೆ ಧರ್ಮಸ್ಥಳಕ್ಕೆ ಹೋದಾಗಲೂ ಫಾಲೋ ಮಾಡಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ನನ್ನ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಗನ್ ಮ್ಯಾನ್ ನೀಡುವಂತೆ ಎಸ್ಪಿಗೆ ಅಕ್ಷಯ್ಗೆ ಮನವಿ ಮಾಡಿದ್ದಾರೆ.












Click it and Unblock the Notifications