ಚಿಕ್ಕಮಗಳೂರಿನಲ್ಲಿ ಅನಧಿಕೃತವಾಗಿ ಮಂಜೂರು ಮಾಡಿದ್ದ 2,000 ಎಕರೆ ಭೂಮಿ ಜಿಲ್ಲಾಡಳಿತ ವಶ
ಚಿಕ್ಕಮಗಳೂರು, ಜನವರಿ 3: ಜಿಲ್ಲಾದ್ಯಂತ ಅನಧಿಕೃತವಾಗಿ ಮಂಜೂರು ಮಾಡಿದ್ದ ಅಂದಾಜು 2,000 ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು ನಿವೇಶನ ರಹಿತರು, ಸ್ಮಶಾನ ಭೂಮಿ ಸೇರಿದಂತೆ ಇತರೆ ಸಾರ್ವಜನಿಕ ಉಪಯೋಗಕ್ಕೆ ಖಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಡಿಗೆರೆ ತಾಲೂಕು ಒಂದರಲ್ಲೇ 980 ಎಕರೆ ಜಮೀನು ಹಿಂಪಡೆಯಲಾಗಿದೆ. ಶೃಂಗೇರಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ 100 ಹಾಸಿಗೆ ಆಸ್ಪತೆಗೆ 10 ಎಕರೆ ಜಾಗಕೊಡಬೇಕಿದ್ದು 35 ದಿನಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಕಂದಾಯ ಭೂಮಿಯನ್ನು ಅನಾಧಿಕೃತವಾಗಿ ಮಂಜೂರು ಮಾಡಿದ್ದ 7 ಜನ ಕಂದಾಯ ಅಧಿಕಾರಿಗಳು ಈಗಾಗಲೇ ಜೈಲು ಪಾಲಾಗಿದ್ದಾರೆ. ಅನಾಧಿಕೃತವಾಗಿ ಕಂದಾಯ ಭೂಮಿಯನ್ನು ಮಂಜೂರು ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ನಗರದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣದ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ 7ಕೋಟಿ ರೂಪಾಯಿ ಹಣ ನೀಡಿದೆ. 20 ಆಸನವುಳ್ಳ 925 ಮೀಟರ್ ಹೊಂದಿದ ಮಿನಿ ವಿಮಾನ ನಿಲ್ದಾಣಕ್ಕೆ 105 ಎಕರೆ ಭೂಮಿ ಗುರುತಿಸಲಾಗಿದೆ. 40 ಆಸನವುಳ್ಳ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 19 ಎಕರೆ ಜಮೀನು ಬೇಕಿದೆ ಎಂದರು.
ಜಿಲ್ಲೆಯಲ್ಲಿ ಕೃಷಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಕಾಡಾನೆ ದಾಳಿಯಿಂದ ಮೂವರು ಸಾವನಪ್ಪಿದ್ದು, ಮೃತರ ಕುಟುಂಬಕ್ಕೆ 2ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ನೀಡಲಾಗುತ್ತಿದ್ದ 7.50 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು 15ಲಕ್ಷ ರೂಪಾಯಿಗೆ ಏರಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 4 ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದರು.
ಇನ್ನು ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಲಾಗುತ್ತಿದೆ. ಕಾಫಿ ಬೆಳೆಯನ್ನು ವಿಮಾ ವ್ಯಾಪ್ತಿಗೆ ತರಬೇಕಿದೆ ಎಂದ ಅವರು, ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸಿದ 56,402 ರೈತರಿಗೆ 128ಕೋಟಿ ರೂಪಾಯಿ ಬೆಳೆ ಪರಿಹಾರವನ್ನು ನೀಡಲಾಗಿದೆ ಎಂದರು.

ಚಿಕ್ಕಮಗಳೂರು ನಗರದಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಕುರಿತು ಜನವರಿ 4ರಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಸಭೆ ನಡೆಸಲಿದ್ದಾರೆ. ಅಮೃತ್ ಕುಡಿಯುವ ನೀರು ಯೋಜನೆ 24 ಡಿಎಂಎ ಮುಗಿದಿದೆ. 16 ಡಿಎಂಎ ನಗರಸಭೆ ಪರಿಶೀಲನೆ ನಡೆಸಿದ್ದು, ಅದರಲ್ಲಿ 7 ಸರಿಯಾಗಿದ್ದಲ್ಲಿ ನಗರಸಭೆಗೆ ಹಸ್ತಾಂತರವಾಗಲಿದೆ ಎಂದು ಹೇಳಿದರು.
ಒಳಚರಂಡಿ ಕಾಮಗಾರಿ ಕೆಲಸ ಬಹಳಷ್ಟು ಬಾಕಿ ಇದೆ. ಗುತ್ತಿಗೆದಾರರನ್ನು ಕರೆಸಲಾಗಿದೆ. ಮುಖ್ಯ ಎಂಜಿನಿಯರಿಗೆ 2-3 ಗುರಿ ನಿಗದಿಪಡಿಸಲಾಗಿದೆ ಎಂದ ಅವರು, ಪ್ರವಾಸೋದ್ಯಮ ಇಲಾಖೆಯಲ್ಲಿ 500 ಮಂದಿ ಹೋಂಸ್ಟೇ ನೋಂದಣಿ ಮಾಡಿಸಿಕೊಂಡಿದ್ದಾರೆ. ದಾಖಲೆ ಸರಿ ಇಲ್ಲದಿರುವ ಹೋಮ್ಸ್ಟೇ ವಿರುದ್ಧ ನೋಟಿಸ್ ನೀಡಲಾಗಿದೆ. ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.












Click it and Unblock the Notifications