ಬುಡಕಟ್ಟು ಜನರಿಗೆ ಮಳೆಗಾಲದಲ್ಲಿ ನೀಡುವ ಆಹಾರ ಸಾಮಗ್ರಿ ನೀಡದ ಜಿಲ್ಲಾಡಳಿತ
ಚಿಕ್ಕಮಗಳೂರು, ಡಿ. 03: ವಾರ್ಷಿಕವಾಗಿ ಯತೇಚ್ಛವಾಗಿ ಮಳೆ ಸುರಿಯುವ ಜಿಲ್ಲೆಯ ಮಲೆನಾಡು ಭಾಗದ ಬುಡಕಟ್ಟು ಜನಾಂಗದವರಿಗೆ ಮಳೆಗಾಲದಲ್ಲಿ ನೀಡುವ ಆಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಇನ್ನೂ ನೀಡಿಲ್ಲ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಳದಲ್ಲಿ ಬುಡಕಟ್ಟು ಜನಾಂಗದವರಿಗೆ ಆಹಾರ ಸಾಮಾಗ್ರಿ ನೀಡಿ ಅದು ಖಾಲಿ ಆಗುವ ಹಂತಕ್ಕೆ ಬಂದಿದೆ. ಆದರೆ, ಜಿಲ್ಲೆಯಲ್ಲಿ ಅದಕ್ಕೆ ಇನ್ನೂ ಟೆಂಡರ್ ಕೂಡ ಕರೆದಿಲ್ಲ. ಬುಡಕಟ್ಟು ಜನಾಂಗದವರಿಗೆ ಆಹಾರ ನೀಡಲು ಬಂದ ಎಂಟು ಕೋಟಿ ರೂಪಾಯಿ ಜಿಲ್ಲಾಧಿಕಾರಿ ಅಕೌಂಟ್ನಲ್ಲಿ ಹಾಗೇ ಉಳಿದಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಹಣವೂ ಖರ್ಚಾಗಿಲ್ಲ. ಫಲಾನುಭವಿಗಳಿಗೆ ಆಹಾರ ಸಾಮಗ್ರಿಯೂ ಸಿಕ್ಕಿಲ್ಲ.
Datta Jayanthi : ಚಿಕ್ಕಮಗಳೂರಿನಲ್ಲಿ ನವೆಂಬರ್ 28ರಿಂದ ಡಿ. 8ರವರೆಗೆ ದತ್ತ ಜಯಂತಿ ಕಾರ್ಯಕ್ರಮ, ಇಲ್ಲಿದೆ ವಿವರ
ಸರ್ಕಾರ ಪ್ರತಿ ವರ್ಷ ಮಳೆಗಾಲದಲ್ಲಿ ಮಲೆನಾಡಿನ ಕುಗ್ರಾಮಗಳು ಹಾಗೂ ಬುಡಕಟ್ಟು ಜನಾಂಗದವರಿಗೆ ಅನುಕೂಲವಾಗಲೆಂದು ಜೂನ್ ತಿಂಗಳಿಂದ ನವೆಂಬರ್ ವರೆಗೂ ಆಹಾರ ಸಾಮಾಗ್ರಿಗಳನ್ನ ಉಚಿತವಾಗಿ ನೀಡುತ್ತೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬಂದು ಬಂದ ಹಣವೂ ಖಾಲಿಯಾಗಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಯೂ ಸಿಕ್ಕಿದೆ. ಆದರೆ, ಚಿಕ್ಕಮಗಳೂರಲ್ಲಿ 6 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆ ವ್ಯಾಪ್ತಿಯಲ್ಲಿದ್ದು, ಈ ಯೋಜನೆಗೆಂದು ಬಂದ ಸುಮಾರು ಎಂಟು ಕೋಟಿ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿ ಹಾಗೇ ಉಳಿದಿದ್ದು ಮಳೆಗಾಲ ಮುಗಿದರೂ ಅವರಿಗೆ ಆಹಾರ ಸಾಮಾಗ್ರಿ ಸಿಕ್ಕಿಲ್ಲ.

ಬುಡಕಟ್ಟು ಜನಾಂಗದವರ ಕುರಿತು ಬೇಜವಾಬ್ದಾರಿ: ಆರೋಪ
ನಮಗೆ ಮಳೆಗಾಲದಲ್ಲಿ ಬೇಕಾದ ಆಹಾರ ಸಾಮಾಗ್ರಿಗಳನ್ನ ಇನ್ನೂ ನೀಡಿಲ್ಲ. ಬುಡಕಟ್ಟು ಜನಾಂಗದವರ ಮೇಲೆ ಏಕಿಂತಾ ಬೇಜವಾಬ್ದಾರಿ ಎಂದು ಬುಡಕಟ್ಟು ಜನಾಂಗದವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇಲಾಖೆಯ ಅಧಿಕಾರಿಗಳು ಕೂಡ ಪರ್ಸಂಟೇಜ್ ರೀತಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಸಂದೇಹ ಉಂಟಾಗಿದೆ. ಡಿಸೆಂಬರ್ 20ರೊಳಗೆ ನಮ್ಮ ಹಕ್ಕನ್ನ ನಮಗೆ ನೀಡದಿದ್ದರೆ 6 ಸಾವಿರ ಕುಟುಂಬಗಳು ಡಿಸಿ ಕಚೇರಿ ಬಾಗಿಲಲ್ಲಿ ಕೂರೋದಾಗಿ ಎಚ್ಚರಿಕೆ ನೀಡಿದ್ದಾರೆ.
ಗಿರಿಜನರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡುವ ಯೋಜನೆಯಡಿಯಲ್ಲಿ ಜಿಲ್ಲಾಡಳಿತ ಇದುವರೆಗೂ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಲ್ಲ. ಈ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಟೆಂಡರ್ ಆಗಿಲ್ಲ ಎಂಬ ಕುಂಟು ನೆಪ ಹೇಳುತ್ತಾ ಸೌಲಭ್ಯವನ್ನು ಗಿರಿಜನರಿಗೆ ನೀಡುತ್ತಿಲ್ಲ.

ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಟ್ಟಿಲ್ಲ!
ಅಧಿಕಾರಿಗಳು ಕಮೀಷನ್ ದಂಧೆಯಲ್ಲಿ ತೊಡಗಿರುವ ಕಾರಣದಿಂದ ಯೋಜನೆ ಜಾರಿ ವಿಳಂಬವಾಗುತ್ತಿದೆ. ಮಕ್ಕಳು ಕೂಡ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಸರ್ಕಾರ ಕೊಡುವ ಮೊಟ್ಟೆ, ಬೇಳೆ-ಕಾಳುಗಳಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತಿತ್ತು. ನೆನಪಿನ ಶಕ್ತಿಯೂ ಚೆನ್ನಾಗಿರೋದು. ಆದರೆ, ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಟ್ಟಿಲ್ಲ. ಎಲ್ಲಾ ಜಿಲ್ಲೆಯಲ್ಲೂ ಯೋಜನೆ ಜಾರಿಗೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಏಕೆ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬುಡಕಟ್ಟು ಜನಾಂಗದವರು ಆರೋಪಿಸಿದ್ದಾರೆ.
ರಾಜ್ಯ ಸರಕಾರ ಇತ್ತೀಚೆಗೆ ಎಸ್ಟಿ ಸಮುದಾಯಕ್ಕೆ ನೀಡಿರುವ ಶೇ.7 ಮೀಸಲಾತಿ ಪೈಕಿ 12 ಮೂಲ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಶೇ.3ಮೀಸಲಾತಿಯನ್ನು ನೀಡಬೇಕು, ಇಲ್ಲವೇ ಈ ಬುಡಕಟ್ಟು ಸಮುದಾಯಗಳಿಗೆ ಭೂಮಿ ಹಕ್ಕು ನೀಡಬೇಕು ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎನ್.ವಿಠಲ್ ಆಗ್ರಹಿಸಿದ್ದಾರೆ.

ಎಸ್ಟಿ ಮೀಸಲಾತಿ ಹೆಚ್ಚಳ, ಆದರೂ ಸಿಗದ ಪ್ರಯೋಜನ!
ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡಲು ಹಿಂದಿನ ಸರಕಾರ ಜಸ್ಟೀಸ್ ನಾಗಮೋಹನ್ದಾಸ್ ನೇತೃತ್ವದಲ್ಲಿ ಆಯೋಗ ನೇಮಿಸಿದ್ದು, ಈ ಆಯೋಗ ಮೀಸಲಾತಿ ಹೆಚ್ಚಳ ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಇತ್ತೀಚೆಗೆ ರಾಜ್ಯ ಸರಕಾರ ಎಸ್ಸಿ ಸಮುದಾಯದ ಶೇ.15 ಮೀಸಲಾತಿಯನ್ನು 17ಕ್ಕೇರಿಸಿದ್ದು, ಎಸ್ಟಿ ಸಮುದಾಯದ ಶೇ.3 ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದೆ. ಇದು ಸ್ವಾಗತಾರ್ಹವಾಗಿದ್ದರೂ ಎಸ್ಟಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದರೂ ಈ ಮೀಸಲಾತಿ ಹೆಚ್ಚಳದ ಪ್ರಯೋಜನ ಎಸ್ಟಿ ಸಮುದಾಯದಲ್ಲಿರುವ 12 ಮೂಲ ಬುಡಕಟ್ಟು ಸಮುದಾಯಗಳಿಗೆ ಸಿಗದಂತಾಗಿದೆ ಎಂದು ಕೆ.ಎನ್.ವಿಠಲ್ ತಿಳಿಸಿದ್ದಾರೆ.

ಮೂಲ ಬುಡಕಟ್ಟು ಸಮುದಾಯಗಳಿಗೆ ಸಿಗದ ಮೀಸಲಾತಿ ಪ್ರಯೋಜನ
ಎಸ್ಟಿ ಪಟ್ಟಿಯಲ್ಲಿದ್ದ ಎಲ್ಲ ಜಾತಿಗಳಿಗೂ ಸೇರಿ ಶೇ.3 ಮೀಸಲಾತಿಯನ್ನೇ ಮುಂದುರಿಸಲಾಗಿತ್ತು. ನಾಯಕ ಸಮುದಾಯವು ಜನಸಂಖ್ಯೆಯಲ್ಲಿ ಹೆಚ್ಚಿರುವ ಕಾರಣದಿಂದಾಗಿ ಸದ್ಯ ಈ ಸಮುದಾಯದ 15 ಎಂಎಲ್ಎಗಳು ಹಾಗೂ 2 ಎಂಪಿಗಳಿದ್ದು, ಶೇ.3 ಮೀಸಲಾತಿಯ ಸಂಪೂರ್ಣ ಲಾಭ ಈ ಸಮುದಾಯ ಅನುಭವಿಸುವಂತಾಗಿದೆ.
ಆದರೆ ಮೂಲ ಬುಡಕಟ್ಟು ಸಮುದಾಯಗಳಾದ ಹಸಲರು, ಇರುಳಿಗರು, ಬೆಟ್ಟಕುರುಬ, ಜೇನುಕುರುಬ, ಮಲೇರು, ಸೋಲಿಗರು ಹಾಗೂ ಕೊರಗ, ಗೌಡ್ಲು, ಸಿದ್ದಿ, ಕುಡಿಯ, ಮಲೆಕುಡಿಯ, ಯರವ ಸಮುದಾಯಗಳಿಗೆ ಶೇ. 3 ಮೀಸಲಾತಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಶೇ.7 ಮೀಸಲಾತಿ ನೀಡಲಾಗಿದೆಯಾದರೂ ಮೂಲ ಆದಿವಾಸಿ ಸಮುದಾಯಗಳಿಗೆ ಈ ಮೀಸಲಾತಿಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್ಟಿ ಸಮುದಾಯಕ್ಕೆ ನೀಡಿರುವ ಶೇ.7 ಮೀಸಲಾತಿಯಲ್ಲಿ ಮೂಲ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಶೇ.3 ಮೀಸಲಾತಿ ನೀಡಿ, ಉಳಿದ ಶೇ.4 ಮೀಸಲಾತಿಯನ್ನು ಎಸ್ಟಿ ಪಟ್ಟಿಯಲ್ಲಿರುವ ಉಳಿದ ಜಾತಿಯವರಿಗೆ ನೀಡಬೇಕು.
ಸರಕಾರದಿಂದ ಇದು ಸಾಧ್ಯವಾಗದಿದ್ದಲ್ಲಿ ಮೂಲ ಆದಿವಾಸಿ ಬುಡಕಟ್ಟು ಸಮುದಾಯಗಳ ಎಲ್ಲ ಕುಟುಂಬಗಳಿಗೆ ಭೂಮಿಯ ಹಕ್ಕು ನೀಡಬೇಕು. ಭೂಮಿ ಹಕ್ಕು ನೀಡಿದಲ್ಲಿ ಈ ಸಮುದಾಯಗಳಿಗೆ ಸರಕಾರದ ಮೀಸಲಾತಿಯೇ ಬೇಡ. ಅರಣ್ಯವನ್ನು ನಂಬಿ ಈ ಮೂಲ ಆದಿವಾಸಿ ಸಮುದಾಯಗಳು ಇಂದಿಗೂ ಬುದಕಿದ್ದು, ಮುಂದೆಯೂ ಕಾಡನ್ನೇ ನಂಬಿ ಈ ಸಮುದಾಯಗಳು ಬದುಕುತ್ತವೆ. ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ಈ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.