ದತ್ತಪೀಠ ಮಾರ್ಗದಲ್ಲಿ ಮೊಳೆ ಚೆಲ್ಲಿದ್ದ ಆರೋಪಿಗಳ ಬಂಧನ: ಸತ್ಯ ಬಾಯ್ಬಿಟ್ಟ ಕಿಡಿಗೇಡಿಗಳು
ಚಿಕ್ಕಮಗಳೂರು, ಡಿಸೆಂಬರ್ 17 : ದತ್ತಜಯಂತಿ ಸಂದರ್ಭದಲ್ಲಿ ನಡೆದ ಅನುಸೂಯಾ ಜಯಂತಿ ವೇಳೆ ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಮೊಳೆಗಳನ್ನು ಎಸೆದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಆ ತಂಡ ನಗರದ ದುಬೈ ನಗರದ ನಿವಾಸಿಗಳಾದ ಮೊಹಮದ್ ಶಹಬಾಸ್ ಮತ್ತು ವಾಹಿದ್ ಹುಸೇನ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಇರುವ ಸಂಬಂಧ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ ಎಂದರು.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ: ಚಿಕ್ಕಮಗಳೂರು ಜಿಲ್ಲಾಧಿಕಾರಿ
ಮೊಹಮದ್ ಶಹಬಾಸ್ ಕಟ್ಟಡ ನಿರ್ಮಾಣ ಕೆಲಸ ಹಾಗೂ ವಾಹಿದ್ ಹುಸೇನ್ ಪ್ಲಬಿಂಗ್ ಕೆಲಸ ಮಾಡಿ ಕೊಂಡಿದ್ದಾರೆ. ಇತ್ತೀಚೆಗೆ ಚಿಪ್ಸ್ಕೆಫೆ ಸಂಸ್ಥೆಯವರು ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಕೆಲಸವನ್ನು ಇವರಿಗೆ ವಹಿಸಿದ್ದು, ಇದಕ್ಕಾಗಿ ಮೊಳೆಗಳನ್ನು ಖರೀದಿಸಿದ್ದರು. ಖರೀದಿಸಿದ ಮೊಳೆಗಳನ್ನು ಈ ಕೃತ್ಯಕ್ಕೆ ಬಳಸಿದ್ದಾರೆ. ಇವರ ಹಿಂದೆ ಬೇರೆಯವರ ಕೈವಾಡ ಇದೆಯೇ, ಇವರಿಗೆ ಯಾವುದಾರೂ ಸಂಘಟನೆಗಳ ಬೆಂಬಲವಿದೆಯೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ದತ್ತಜಯಂತಿ ವೈಭವದಿಂದ ನಡೆಯಬಾರದು ಎಂದು ಕೃತ್ಯ
ಮಾತು ಮುಂದುವರಿಸಿದ ಅವರು, ಈ ಬಾರಿ ದತ್ತಜಯಂತಿಯನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ದತ್ತಜಯಂತಿ ವೇಳೆ ಅನ್ಯಕೋಮಿನ ಬಗ್ಗೆ ಅವಹೇಳನಕಾರಿಯಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಆದ್ದರಿಂದ ದತ್ತಜಯಂತಿ ವಿಜೃಂಭಣೆಯಿಂದ ನಡೆಯಬಾರದು ಎಂಬ ಉದ್ದೇಶದಿಂದ ದತ್ತಪೀಠಕ್ಕೆ ಸಾಗುವ ದಾರಿಯಲ್ಲಿ ಮೊಳೆಗಳನ್ನು ಹಾಕಿದರೆ ವಾಹನಗಳು ಪಂಚರ್ ಆಗುತ್ತವೆ, ಟ್ರಾಫಿಕ್ ಜಾಮ್ ಆಗುತ್ತದೆ, ದತ್ತಜಯಂತಿ ವೈಭವದಿಂದ ನಡೆಯುವುದಿಲ್ಲ ಎಂಬ ದೃಷ್ಟಿಯಿಂದ ಮೊಳೆಗಳನ್ನು ಹಾಕಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಶಾಸಕ ಡಿ.ಎಸ್.ಸುರೇಶ್ ದಲಿತರು, ಅಲ್ಪಸಂಖ್ಯಾತರ ವಿರೋಧಿ- ಲೋಕೇಶ್ ತಾಳಿಕಟ್ಟೆ
ಉನ್ನತ ಮಟ್ಟದ ತನಿಖೆ ನಡೆಸುವಂತೆ ಬಜರಂಗದಳ ಒತ್ತಾಯ
ದತ್ತಜಯಂತಿ ಸಂದರ್ಭ ನಡೆದ ಅನಸೂಯಾ ಜಯಂತಿ ಸಂದರ್ಭದಲ್ಲಿ ಅನಾಹುತವನ್ನು ಸೃಷ್ಟಿಸುವ ಸಂಬಂಧ ದತ್ತಪೀಠಕ್ಕೆ ತೆರಳುವ ಮಾರ್ಗದ ಕಡಿದಾದ ತಿರುವುಗಳಲ್ಲಿ ಮೊಳೆಗಳನ್ನು ಹಾಕಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಿಡಿಗೇಡಿಗಳ ಹಿಂದಿರುವ ಜಾಲವನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ರಘು ಸಕಲೇಶಪುರ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಸೂಯಾ ಪೂಜೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ವಾಹನಗಳ ಚಕ್ರಗಳನ್ನು ಪಂಚರ್ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಲು ಹುನ್ನಾರ ನಡೆಸಲಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ ಎಂದರು.
ಪೊಲೀಸರಿಂದ ಅಯಸ್ಕಾಂತ ವಾಹನ ಬಳಸಿ ಮೊಳೆ ತೆರವು
ದತ್ತಪೀಠದಲ್ಲಿ ಹೋಮಹವನ ತಯಾರಿಗೆ ಹೊರಟಿದ್ದ ವಾಹನಗಳ ಪೈಕಿ ಕೆಲ ವಾಹನಗಳು ಪಂಚರ್ ಆಗಿದ್ದವು. ಎಚ್ಚೆತ್ತ ಪೊಲೀಸ್ ಇಲಾಖೆ ದುಷ್ಕರ್ಮಿಗಳು ಹಾಕಿದ್ದ ಮೊಳೆಗಳನ್ನು ಹುಡುಕಾಡಿದ್ದು, ಈ ವೇಳೆ ರಸ್ತೆಯಲ್ಲಿ ಪತ್ತೆಯಾದ ಮೊಳೆಗಳನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಬಜರಂಗದಳದ ಕಾರ್ಯಕರ್ತರು ಸಹಕರಿಸಿದ್ದು, ಸುಮಾರು ಒಂದೂವರೆ ಕೆಜಿ ಮೊಳೆಗಳನ್ನು ರಸ್ತೆಯಿಂದ ತೆರವು ಮಾಡಲಾಗಿತ್ತು. ಬಳಿಕ ಶ್ವಾನದಳ ಹಾಗೂ ವಿಶೇಷ ಕಾರ್ಯಪಡೆ ಜಂಟಿಯಾಗಿ ಅಯಸ್ಕಾಂತ ವಾಹನ ಬಳಸಿ ಮೊಳೆಗಳನ್ನು ತೆರವು ಮಾಡಿದ್ದರು.
ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು
ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೃತ್ಯ ಎಸಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದ ದುಬೈ ನಗರದ ಮುಹಮ್ಮದ್ ಶಹಬಾಸ್ ಮತ್ತು ವಾಹಿದ್ ಹುಸೈನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇವರ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ ಹಿಂದೂ ಪದ್ಧತಿಯಂತೆ ಪೂಜೆ ನಡೆಸಲು ಅವಕಾಶ ಮಾಡಿ ಕೊಟ್ಟ ಹಿನ್ನೆಲೆಯಲ್ಲಿ ಹತಾಶರಾಗಿ ದತ್ತಜಯಂತಿ ಮತ್ತು ಅನುಸೂಯಾ ಜಯಂತಿ ಕಾರ್ಯಕ್ರಮವನ್ನು ಹಾಳು ಮಾಡುವ ದುರುದ್ದೇಶದಿಂದ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವ ಎಲ್ಲರನ್ನು ಬಂಧಿಸಬೇಕು. ಧಾರ್ಮಿಕ ಭಾವನೆಗೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕೆಂದು ತಿಳಿಸಿದರು.