ಉಪಚುನಾವಣೆ ಅಭ್ಯರ್ಥಿ ಘೋಷಣೆ ಬಗ್ಗೆ ಕಾಂಗ್ರೆಸ್ ಗೆ ಕುಟುಕಿದ ಸಿ.ಟಿ.ರವಿ
ಚಿಕ್ಕಮಗಳೂರು, ನವೆಂಬರ್ 1: "ಅಭ್ಯರ್ಥಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ ಕಾಂಗ್ರೆಸ್ನಲ್ಲಿದೆ. ಅದಕ್ಕೆ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ" ಎಂದು ಸಚಿವ ಸಿ.ಟಿ.ರವಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಉಪ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಮಾಡಿರುವ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, "ಚುನಾವಣೆ ಘೋಷಣೆಯೇ ಆಗಿಲ್ಲ. ಅದಿನ್ನು ಸುಪ್ರಿಂ ಕೋರ್ಟ್ ಅಂಗಳದಲ್ಲಿದೆ. ನಾಮಪತ್ರ ಸಲ್ಲಿಕೆಗೂ ಮುಂಚೆ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ನಮ್ಮದು ಅಭ್ಯರ್ಥಿಗಳ ಮೇಲೆ ಚುನಾವಣೆ ನಡೆಸೋ ಪಕ್ಷವಲ್ಲ. ಸಂಘಟನೆ ಮೇಲೆ ಚುನಾವಣೆ ನಡೆಯುತ್ತದೆ. ಅಭ್ಯರ್ಥಿ ಅದಕ್ಕೆ ಸಹಾಯಕವಾಗ್ತಾನಷ್ಟೆ. ಒಳ್ಳೆ ಅಭ್ಯರ್ಥಿ ಹಾಕೋದು ಪೂರಕ ಅಂಶ. ಅಭ್ಯರ್ಥಿಯೇ ಎಲ್ಲಾ ಮಾಡಿಕೊಳ್ಳಬೇಕಾದ ಸ್ಥಿತಿ ಕಾಂಗ್ರೆಸ್ನಲ್ಲಿದೆ" ಎಂದು ಕಾಂಗ್ರೆಸ್ ಗೆ ಕುಟುಕಿದ್ದಾರೆ.

"ನಮ್ಮಲ್ಲಿ ಅಭ್ಯರ್ಥಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ ಇಲ್ಲ. ಪಕ್ಷ ಬಹುತೇಕ ಎಲ್ಲಾ ಮಾಡುತ್ತೆ. ಸಂಘಟನೆಯಾಗಿ ಚುನಾವಣೆ ತಯಾರಿ ಕೆಲಸ ಮಾಡಿದ್ದೇವೆ" ಎಂದಿದ್ದಾರೆ. ಇದೇ ವೇಳೆ, ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜಾರೋಹಣದ ಕುರಿತೂ ಮಾತನಾಡಿ, "ಹಿಂದೆಯೂ ಕನ್ನಡ ಧ್ವಜವನ್ನು ಹಾರಿಸಿರಲಿಲ್ಲ. ಹಾಗಾಗಿ, ಈ ವರ್ಷವೂ ಹಾರಿಸಿಲ್ಲ. ಸರ್ಕಾರ ನಾಡಧ್ವಜ ಹಾರಿಸುವುದು ಬೇಡವೆಂದು ಆದೇಶಿಸಿರುವುದು ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಪ್ರವಾಸೋದ್ಯಮ ನೀತಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಜನವರಿ ಅಂತ್ಯದಲ್ಲಿ ಯಾವುದೇ ಅನವಶ್ಯಕ ಘಟನೆ ನಡೆಯದಿದ್ದರೆ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರುತ್ತೇವೆ" ಎಂದು ಉತ್ತರಿಸಿದ್ದಾರೆ. ಈ ಉತ್ತರ, ಸರ್ಕಾರದ ಅಳಿವು-ಉಳಿವಿನ ಬಗೆಗಿನ ಅವರ ನಂಬಿಕೆಯನ್ನೇ ಪ್ರಶ್ನಿಸುವಂತೆ ಮಾಡಿದೆ.












Click it and Unblock the Notifications