ಕಾಫಿನಾಡಿನಲ್ಲಿ ಕಾಂಗ್ರೆಸ್, ಬಿಜೆಪಿಯಿಂದ ಮುಂದುವರೆದ ಕುಕ್ಕರ್ ಪಾಲಿಟಿಕ್ಸ್, ಫೋಟೋ ವೈರಲ್
ಚಿಕ್ಕಮಗಳೂರು, ಮಾರ್ಚ್, 10: ಕಾಫಿನಾಡಿನಲ್ಲಿ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಆಡಳಿತ ಪಕ್ಷದ ಟಿಕೆಟ್ ಆಕಾಂಕ್ಷಿಗಳು ವಿವಿಧ ಕ್ಷೇತ್ರಗಳ ಅಲ್ಲಲ್ಲಿ ಸೀರೆ ಹಂಚುವ ಮೂಲಕ ಮತದಾರನ್ನು ತಮ್ಮತ್ತ ಸೆಳೆದುಕೊಳ್ಳುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ.
ಸದ್ಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ನಾನೇನು ಕಮ್ಮಿ ಇಲ್ಲ ಎಂಬಂತೆ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಕುಕ್ಕರ್ ಹಂಚಿಕೆ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಶಾಸಕ ಟಿ.ಡಿ.ರಾಜೇಗೌಡ ಅವರು, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿ ನೆನಪಿಗಾಗಿ ಎಂಬ ಬರಹದೊಂದಿಗೆ ತಮ್ಮ ಫೋಟೋ ಇರುವ ಕುಕ್ಕರ್ ಅನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಶಾಸಕರ ಹಿಂಬಾಲಕರು ಮತದಾರರ ಮನೆ ಬಾಗಿಲಿಗೆ ತೆರಳಿ ಕುಕ್ಕರ್ ಹಂಚಿಕೆ ಮಾಡಿರುವ ಫೋಟೋಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೆಯೇ ಕ್ಷೇತ್ರದಾದ್ಯಂತ ಸುಮಾರು 1ಲಕ್ಷ ಕುಕ್ಕರ್ಗಳನ್ನು ಹಂಚಿಕೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸಿ.ಟಿ. ರವಿ ಬೆಂಬಲಿಗರಿಗೆ ಕ್ಲಾಸ್
ಹಾಗೆಯೇ ಚುನಾವಣೆ ನೆಪದಲ್ಲಿ ಮುಂಬರುವ ಯುಗಾದಿ ಹಬ್ಬಕ್ಕೆ ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದರು. ಇದೇ ವಿಚಾರಕ್ಕೆ ಇದೀಗ ಸಿ.ಟಿ.ರವಿ ಬೆಂಬಲಿಗರಿಗೆ ಮತದಾರರು ಮೈಚಳಿ ಬಿಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿತ್ತು.

ಸೀರೆ ಸುಟ್ಟುಹಾಕಿದ ವ್ಯಕ್ತಿ
ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ. ಈ ವೇಳೆ ಮನೆಗೆ ಬಂದ ಮದ್ಯವ್ಯಸನಿಯೊಬ್ಬ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಸ್ತೆ ಮಧ್ಯೆ ಸೀರೆಯನ್ನು ಸುಟ್ಟು ಬಿಜೆಪಿ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾನೆ.
ಕೊರೊನಾ ಸಂದರ್ಭದಲ್ಲಿ ಒಂದು ಕೆ.ಜಿ. ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ ಅಂತಾ ಸೀರೆ ಹಂಚಲು ಬಂದಿದ್ಧೀರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸೂಕ್ತವಾದ ಮೂಲಭೂತ ಸೌಲಭ್ಯ ಬೇಕು ಎಂದು ನಶೆಯಲ್ಲಿ ಬಿಜೆಪಿಗರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೆಯೇ ಎರಡ್ಮೂರು ಸೀರೆಗಳನ್ನು ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾನೆ. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.












Click it and Unblock the Notifications