ಚಿಕ್ಕಮಗಳೂರು, ಹಾಸನ ನಗರಸಭೆ ಅಧ್ಯಕ್ಷ, ಉಪ್ಯಾಧ್ಯಕ್ಷ ಚುನಾವಣೆ: ಯಾರಿಗೆ ಗೆಲುವು?
ಚಿಕ್ಕಮಗಳೂರು ಆಗಸ್ಟ್ 22: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಮತ್ತು ಉಪ್ಯಾಧ್ಯಕ್ಷ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಜಯ ಸಿಕ್ಕಿದೆ. ಒಗ್ಗಟ್ಟಿಗೆ ಚಿಕ್ಕಮಗಳೂರು ನಗರಸಭೆ ಬಿಜೆಪಿ ಜೆಡಿಎಸ್ ಪಾಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮೈತ್ರಿ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ.
ಬಿಜೆಪಿ ಪಕ್ಷದಿಂದ ಅಧ್ಯಕ್ಷರಾಗಿ ಸುಜಾತ ಶಿವಕುಮಾರ್, ಉಪ್ಯಾಧ್ಯಕ್ಷರಾಗಿ ಅನು ಮಧುಕರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಲ್ಮಾ ಹಾಗೂ ಉಪ್ಯಾಧ್ಯಕ್ಷ ಸ್ಥಾನಕ್ಕೆ ಇಂದಿರಾ ಶಂಕರ್ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ 25 ಮತಗಳು, ಕಾಂಗ್ರೆಸ್ ಅಭ್ಯರ್ಥಿಗಳ ಪರ 15 ಮತಗಳನ್ನು ಚಲಾಯಿಸಲಾಗಿದೆ.

ಬಿಜೆಪಿ ಅಭ್ಯರ್ಥಿಗಳು ಪರ 18 ಬಿಜೆಪಿ ನಗರಸಭಾ ಸದಸ್ಯರು, ಜೆಡಿಎಸ್ 2, ಒಬ್ಬರು ಪಕ್ಷೇತರರು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ, ಎಂ ಕೆ ಪ್ರಾಣೇಶ್ , ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಪರ 12 ನಗರಸಭಾ ಸದಸ್ಯರು, ಎಸ್ಡಿಪಿಐನ ಒಬ್ಬರು, ಒಬ್ಬರು ಪಕ್ಷೇತರರು, ಕೈ ಶಾಸಕ ಹೆಚ್ ಡಿ ತಮ್ಮಯ್ಯರಿಂದ ಬೆಂಬಲ ವ್ಯಕ್ತವಾಯಿತು. ಹೀಗಾಗಿ ಒಗ್ಗಟ್ಟು ಪ್ರದರ್ಶನ ಮಾಡಿದ ಜೆಡಿಎಸ್ ಬಿಜೆಪಿ ಕೊನೆಗೆ ಜಯಗಳಿಸಿದೆ. ಚಿಕ್ಕಮಗಳೂರು ನಗರಸಭೆಯಲ್ಲಿ ಜೆಡಿಎಸ್ ಬೆಂಬಲದಿಂದ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದೆ.
ಹಾಸನ ನಗರಸಭೆ ಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಮುಖಭಂಗ
ಹಾಸನ ನಗರಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಒಂದೇ ಒಂದು ಕಾಂಗ್ರೆಸ್ ಸದಸ್ಯರಿದ್ದರೂ ಶಿವಲಿಂಗೇಗೌಡ ಆಪ್ತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಗೆದ್ದಿದ್ದಾರೆ. ಇಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಪ್ಲಾನ್ ಸಕ್ಸಸ್ ಆಗಿದೆ.
ದೋಸ್ತಿಗಳಿಗೆ ಮಣ್ಣು ಮುಕ್ಕಿಸಿ ತಮ್ಮ ಬೆಂಬಲಿಗರನ್ನು ಶಿವಲಿಂಗೇಗೌಡ ಗೆಲ್ಲಿಸಿಕೊಂಡಿದ್ದಾರೆ. ಅಧ್ಯಕ್ಷರಾಗಿ ಶಿವಲಿಂಗೇಗೌಡ ಅತ್ಯಾಪ್ತ ಜೆಡಿಎಸ್ ಸದಸ್ಯ ಸಮಿವುಲ್ಲ ಹಾಗು ಉಪಾಧ್ಯಕ್ಷರಾಗಿ ಮನೋಹರ್ ಆಯ್ಕೆಯಾಗಿದ್ದಾರೆ. ಜೆಡಿಎಸ್ನಿಂದ ಆಯ್ಕೆ ಆದರೂ 13 ಸದಸ್ಯರು ಶಿವಲಿಂಗೇಗೌಡ ಜೊತೆ ಗುರ್ತಿಸಿಕೊಂಡಿದ್ದರು.
ಕೊನೆಗೆ ಓರ್ವ ಪಕ್ಷೇತರ ಸದಸ್ಯ ಸೇರಿ ಒಟ್ಟು 14 ಮತ ಪಡೆದು ಶಿವಲಿಂಗೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಗೆದ್ದಿದ್ದ ಓರ್ವ ಕಾಂಗ್ರೆಸ್ ಸದಸ್ಯನನ್ನು ಗೈರಾಗಿಸಿ ಸಭೆಯಲ್ಲಿ ಹಾಜರಿದ್ದವರಿಂದಲೇ ಮತ ಪಡೆದು ಶಿವಲಿಂಗೇಗೌಡ ಆಪ್ತರು ಜಯ ಸಾಧಿಸಿದ್ದಾರೆ. ಬಿಜೆಪಿ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಕೇವಲ 7 ಮತ ಬಂದಿವೆ. ಹೀಗಾಗಿ ಪ್ರತಿಷ್ಠೆಯ ನಗರಸಭೆಯಲ್ಲಿ ಶಿವಲಿಂಗೇಗೌಡ ಗೆದ್ದು ಬೀಗಿದ್ದಾರೆ.
ಜೆಡಿಎಸ್ನಿಂದ ಜಾರಿಯಾಗಿದ್ದ ವಿಪ್ ನಡುವೆಯೂ ಶಿವಲಿಂಗೇಗೌಡ ಬೆಂಬಲಿಗರು ಜೆಡಿಎಸ್ನಿಂದಲೇ ಅಯ್ಕೆ ಆಗಿದ್ದವರನ್ನ ಕಣಕ್ಕಿಳಿಸಿದ್ದರು. ಜೆಡಿಎಸ್ ನಿಗದಿ ಮಾಡಿದ್ದ ವಿಪ್ಗೆ ಬದಲಾಗಿ ಜೆಡಿಎಸ್ನಿಂದಲೇ ಆಯ್ಕೆಯಾದ ಬೇರೆ ಸದಸ್ಯರಿಗೆ ಸದಸ್ಯರು ಮತ ಚಲಾಯಿಸಿದ್ದಾರೆ. ಇದರಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ.












Click it and Unblock the Notifications